ಕೈದಿ ಪಾತ್ರದಲ್ಲಿ ಬಣ್ಣ ಹಚ್ಚಿ ನಟಿಸಲು ಹೋಗಿದ್ದ ಜೈಲಿಗೆ ದರ್ಶನ್ ಶಿಫ್ಟ್; ಯಾವ ಸಿನಿಮಾ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಾಲಿ ಮಾಡಲು ಹೋಗಿ ಸಿಕ್ಕಿಬಿದ್ದ ದರ್ಶನ್ ಅಂಡ್ ಗ್ಯಾಂಗ್ ಅನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ದರ್ಶನ್ ಜೈಲು ಐಷಾರಾಮಿ ಜೀವನದ ಬಗ್ಗೆ ಭಾರೀ ಚರ್ಚೆ ನಡೀತಿದೆ. ಶೀಘ್ರದಲ್ಲೇ ಆರೋಪಿ ದರ್ಶನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. ಇದೀಗ ನಟೋರಿಯಸ್ ರೌಡಿಗಳ ಜೊತೆ ರಾಜಾರೋಷವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತನಾಡುತ್ತಾ ಕುಳಿತಿದ್ದ ದರ್ಶನ್ ಸಂಕಷ್ಟ ಎದುರಾಗಿದೆ. ಜೈಲಿನ ನಿಯಮಗಳನ್ನು ಮೀರಿದ ಹಿನ್ನೆಲೆಯಲ್ಲಿ 3 ಎಫ್ಐಆರ್ ದಾಖಲಾಗಿದೆ. ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ.

ದರ್ಶನ್ಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ಜೈಲಿನ 9 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಇದೆಲ್ಲದರ ನಡುವೆ ದರ್ಶನ್ ಮನೆಊಟಕ್ಕಾಗಿ ಅರ್ಜಿ ಸಲ್ಲಿಸುವ ನಾಟಕ ಮಾಡಿದ್ದು ಬಯಲಾದಂತೆ ಆಗಿದೆ. ರೌಡಿಗಳ ಜೊತೆ ಕೂತು ಸಿಗರೇಟ್ ಸೇದಿತ್ತಾ ಹರಟಿದ್ದು ಮಾತ್ರವಲ್ಲದೇ ವೀಡಿಯೋ ಕಾಲ್ ಮಾಡಿ ಮಾತನಾಡಿರುವುದು ಕೂಡ ಕಂಟಕವಾಗಿ ಪರಿಣಮಿಸಿದೆ.
ದರ್ಶನ್ ಜೈಲು ಐಷಾರಾಮಿ ಜೀವನ ಸರ್ಕಾರಕ್ಕೂ ಮುಜುಗರ ತಂದಿದೆ. ಇದೆಂಥ ಜೈಲು ವ್ಯವಸ್ಥೆ ಎಂದು ಜನ ಮಾತನಾಡುವಂತಾಗಿದೆ. ದುಡ್ಡಿದ್ದವರು ಜೈಲಿನಲ್ಲಿ ಕೂಡ ಐಷಾರಾಮಿ ಜೀವನ ನಡೆಸಬಹುದಾ? ಸಾಮಾನ್ಯ ಕೈದಿಗಳಿಗೆ ಈ ವ್ಯವಸ್ಥೆ ಯಾಕಿಲ್ಲ ಎಂದು ಜನ ಕೇಳುವಂತಾಗಿದೆ. ಇದ್ದೆಲ್ಲದರ ನಡುವೆ ನಟ ದರ್ಶನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಮುಂದಾಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A1 ಪವಿತ್ರಾಗೌಡ, A13 ದೀಪಕ್, A7 ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಲಿದ್ದಾರೆ. ಬಳ್ಳಾರಿ ಜೈಲಿಗೆ A2 ದರ್ಶನ್ ಹಾಗೂ ಬೆಳಗಾವಿ ಜೈಲಿಗೆ A14 ಪ್ರದೂಷ್ ಸ್ಥಳಾಂತರವಾಗಲಿದ್ದಾರೆ. A3 ಪವನ್, A4 ರಾಘವೇಂದ್ರ A5 ನಂದೀಶ್ ಮೈಸೂರು ಜೈಲಿಗೂ A6 ಜಗದೀಶ್ ಹಾಗೂ A12 ಲಕ್ಷ್ಮಣ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.
ಇನ್ನು ಧಾರವಾಡ ಜೈಲಿಗೆ A9 ಧನರಾಜು, ವಿಜಯಪುರ ಜೈಲಿಗೆ A10 ವಿನಯ್ ಅದೇ ರೀತಿ ಕಲಬುರಗಿ ಜೈಲಿಗೆ A11 ನಾಗರಾಜ್ ಸ್ಥಳಾಂತರಗೊಳ್ಳಲಿದ್ದಾರೆ. ಇನ್ನುಳಿದ 4 ಜನ ಆರೋಪಿಗಳನ್ನು ಬಹಳ ಹಿಂದೆಯೇ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ವಿಶೇಷ ಅಂದ್ರೆ ದರ್ಶನ್ ಈ ಹಿಂದೆ ಬಳ್ಳಾರಿ ಜೈಲಿಗೆ ಒಮ್ಮೆ ಕೈದಿ ವೇಷದಲ್ಲಿ ಹೋಗಿದ್ದರು. ಅರ್ಥಾತ್ ಸಿನಿಮಾ ಚಿತ್ರೀಕರಣಕ್ಕಾಗಿ ಕೈದಿ ಪಾತ್ರದಲ್ಲಿ ನಟಿಸಲು ತೆರಳಿದ್ದರು.
ತರುಣ್ ಸುಧೀರ್ ನಿರ್ದೇಶನದ 'ಚೌಕ' ಚಿತ್ರದ ಕೆಲ ಸನ್ನಿವೇಶಗಳನ್ನು ಬಳ್ಳಾರಿ ಜೈಲಿನಲ್ಲಿ ಚಿತ್ರೀಕರಿಸಲಾಗಿತ್ತು. ಆ ಚಿತ್ರದಲ್ಲಿ ದರ್ಶನ್ ಕೈದಿ ರಾಬರ್ಟ್ ಆಗಿ ನಟಿಸಿದ್ದರು. 'ಚೌಕ' ಸಿನಿಮಾ ಹಿಟ್ ಆಗಿತ್ತು. ಇದೀಗ ಅದೇ ಜೈಲಿಗೆ ಕೊಲೆ ಪ್ರಕರಣದ ಆರೋಪಿಯಾಗಿ ಶಿಕ್ಷೆ ಅನುಭವಿಸಲು ಹೋಗುವಂತಾಗಿದೆ.
ಮತ್ತೊಂದು ಕಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪವಿತ್ರಾ ಗೌಡ ಸೇರಿ ಕೆಲವರು ಈಗಾಗಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಕೂಡ ಬೇಲ್ ಕೇಳಿ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.


Click it and Unblock the Notifications











