ಎಷ್ಟು ಸಾಕ್ಷಿ? ಚಾರ್ಜ್ಶೀಟ್ ಸಲ್ಲಿಕೆಯಾಯ್ತಾ? ಎಂದು ಕೇಳಿ ಜೈಲಿನಲ್ಲಿ ದರ್ಶನ್ ಶಾಕ್
ತನಿಖಾಧಿಕಾರಿಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಚ್ಶೀಟ್ ಸಲ್ಲಿಸಿದ್ದಾರೆ. ಅತ್ತ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಚಾರ್ಚ್ಶೀಟ್ ಬಗ್ಗೆ ಕೇಳಿ ದಂಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಊಟ ಕೊಡಲು ಹೋದ ಸಿಬ್ಬಂದಿ ಬಳಿ ಚಾರ್ಜ್ಶೀಟ್ ಬಗ್ಗೆ ದರ್ಶನ್ ಮಾಹಿತಿ ಪಡೆದಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿ ಆಗಿದ್ದಾರೆ. ಆತನ ಹತ್ಯೆಯಲ್ಲಿ ದರ್ಶನ್ ಕೈವಾಡ ಇರುವುದು ಸಾಬೀತಾಗಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಚಾರ್ಜ್ಶೀಟ್ ಬಗ್ಗೆ ಕೇಳಿ ದರ್ಶನ್ ಒಂದು ಕ್ಷಣ ದಂಗಾಗಿದ್ದಾರೆ ಎನ್ನಲಾಗ್ತಿದೆ. ಎಸಿಪಿ ಚಂದನ್ ನೇತೃತ್ವದಲ್ಲಿ 3991 ಪುಟಗಳ ಚಾರ್ಚ್ಶೀಟ್ ಅನ್ನು ಎಸಿಎಂಎಂ ಕೋರ್ಟ್ಗೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕೇಸ್ ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಆಗಲಿದೆ.

ಜೂನ್ 22ರಂದು ವಿಚಾರಣಾಧೀನ ಕೈದಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಇತ್ತೀಚೆಗೆ ಜೈಲಿನಲ್ಲಿ ದರ್ಶನ್ & ಗ್ಯಾಂಗ್ಗೆ ರಾಜಾತಿಥ್ಯ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಆರೋಪಿ ದರ್ಶನ್ನ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಇವತ್ತು(ಸೆಪ್ಟೆಂಬರ್ 4) ಚಾರ್ಜ್ಶೀಟ್ ಸಲ್ಲಿಕೆಯಾಗುತ್ತದೆ ಎನ್ನುವ ವಿಷಯ ತಿಳಿದು ರಾತ್ರಿಯಿಂದಲೇ ದರ್ಶನ್ಗೆ ಡವಡವ ಶುರುವಾಗಿತ್ತು. ಸದ್ಯ ದರ್ಶನ್ ಇರುವ ಸೆಲ್ನಲ್ಲಿ ಟಿವಿ ಇಲ್ಲ. ಹಾಗಾಗಿ ಚಾರ್ಜ್ಶೀಟ್ ಸಲ್ಲಿಕೆ ಆಯ್ತಾ? ಏನೆಲ್ಲಾ ವಿಚಾರಗಳು ಅದರಲ್ಲಿದೆ. ಎಷ್ಟು ಸಾಕ್ಷಿಗಳಿವೆ? ಪ್ರಕರಣ ಗಂಭೀರ ಸ್ವರೂಪ ಪಡೆದು ಭಾರೀ ಸಂಕಷ್ಟ ಎದುರಾಗುತ್ತಾ ಅಂತೆಲ್ಲಾ ದರ್ಶನ್ ಚಡಪಡಿಸುತ್ತಿದ್ದಾರೆ. ಹಾಗಾಗಿ ಊಟ ಕೊಡಲು ಹೋದ ಸಿಬ್ಬಂದಿ ಬಳಿ ಈ ಬಗ್ಗೆ ಕೇಳಿದ್ದಾರೆ ಎನ್ನಲಾಗಿದೆ.
7 ಸಂಪುಟಗಳಾಗಿ 10 ಕಡತಗಳ ಚಾರ್ಜ್ಶೀಟ್ ಸಲ್ಲಿಕೆ ಆಗಿದ್ದು 231 ಸಾಕ್ಷಿದಾರರ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದು ಕೇಳಿ ದರ್ಶನ್ ದಂಗಾಗಿದ್ದಾರೆ ಎಂದು ವರದಿಯಾಗಿದೆ. ಅದಕ್ಕೂ ಮುನ್ನ ಚಾರ್ಜ್ಶೀಟ್ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ಜೈಲಿನಲ್ಲಿ ಪರದಾಡಿದ್ದರು. ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳಲು ಅವಕಾಶ ಕೇಳಿದ್ದರು. ಮನೆಯವರಿಗೆ ಕರೆ ಮಾಡಲು ಮನವಿ ಮಾಡಿದ್ದರು ಎಂದು ಹೇಳಲಾಗಿತ್ತು.
ಕಲಂ-173(8) ಸಿಆರ್ಪಿಸಿ ಅಡಿಯಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಪ್ರಕರಣವನ್ನು ಸ್ಪೆಷನ್ಸ್ ಕೋರ್ಟ್ ಅಥವಾ ತ್ವರಿತ ಕೋರ್ಟ್ಗೆ ನೀಡಲು ಸರ್ಕಾರಕ್ಕೆ ಮನವಿ ಮಾಡಲು ಪೊಲೀಸರು ಮುಂದಾಗುತ್ತಿದ್ದಾರೆ.
ರೇಣುಕಾಸ್ವಾಮಿ ಅಪಹರಣ ಹಾಗೂ ಹತ್ಯೆಯಲ್ಲಿ ದರ್ಶನ್ ಕೈವಾಡ ಇರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. ಕೊಲೆ ಮುಚ್ಚಿ ಹಾಕಲು ದರ್ಶನ್ ಹಣ ನೀಡಿರುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ಕೊನೆ ನಡೆದ ಜಾಗದಲ್ಲಿ ನಾನು ಇರಲೇಯಿಲ್ಲ ಎಂದು ದರ್ಶನ್ ವಿಚಾರಣೆ ವೇಳೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಇದ್ದಿದ್ದು ಹತ್ಯೆ ಬಳಿಕ ಅಲ್ಲಿಂದ ಹೊರಟು ಹೋಗಿದ್ದು ಸಿಸಿಟಿವಿ ದೃಶ್ಯಗಳಲ್ಲಿ ಬಯಲಾಗಿದೆ.
ಇನ್ನು ದರ್ಶನ್ ಧರಿಸಿದ ಬಟ್ಟೆ, ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ. ಹಾಗಾಗಿ ದರ್ಶನ್ ಕೂಡ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದರ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಚಾರ್ಜ್ಶೀಟ್ ಬಗ್ಗೆ ದರ್ಶನ್ ಮಾತ್ರವಲ್ಲ ಎಲ್ಲಾ ಆರೋಪಿಗಳಿಗೆ ಆತಂಕ ಶುರುವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಸಹ ಮೌನಕ್ಕೆ ಜಾರಿದ್ದಾರೆ. ಜೈಲು ಅಧಿಕಾರಿಗಳ ಬಳಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











