ದರ್ಶನ್ ಅಭಿಮಾನಿಗಳ ಜೋರಿಗೆ ಸಿಎಂ ಸುಸ್ತು!
ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಲ್ಲಿ ಹೊಂದಿರುವ ನಟ ದರ್ಶನ್. ಅವರು ಎಲ್ಲೇ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ದರ್ಶನ್ ಅಭಿಮಾನಿಗಳು ಸಹ ಅವರಂತೆ ಮಾಸ್.
ನಿನ್ನೆ ಕೃಷಿ ವಿವಿ (ಜಿಕೆವಿಕೆ)ಯಲ್ಲಿ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ದರ್ಶನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮ ಉದ್ಘಾಟನೆಗೊಂಡು ಸಿಎಂ ಬಸವರಾಜ ಬೊಮ್ಮಾಯಿಯವರು ಭಾಷಣ ಮಾಡುತ್ತಿದ್ದ ವೇಳೆ ದರ್ಶನ್ ಅವರು ವೇದಿಕೆ ಆಗಮಿಸಿದರು. ಕೂಡಲೇ ಅಭಿಮಾನಿಗಳು ಜೋರಾಗಿ ಕರತಾಡನ ಮಾಡಿ 'ಡಿಬಾಸ್' ಘೋಷಣೆ ಕೂಗಿದರು. ಇದರಿಂದಾಗಿ ಕ್ಷಣ ಕಾಲ ಸಿಎಂ ಮಾತು ನಿಲ್ಲಿಸಿ ಸುಮ್ಮನಾದರು.
ಬಳಿಕ ''ನಿಮ್ಮೆಲ್ಲರಿಗೆ ಬಾಸ್ ನನಗೆ ಯುವ ಮಿತ್ರ ದರ್ಶನ್ ಅವರಿಗೆ ಸ್ವಾಗತ'' ಎಂದರು ಸಿಎಂ ಮಾತಿನಿಂದ ಇನ್ನಷ್ಟು ಉತ್ತೇಜಿತರಾದ ದರ್ಶನ್ ಅಭಿಮಾನಿಗಳು ಇನ್ನಷ್ಟು ಜೋರಾಗಿ ಕೂಗಲು ಆರಂಭಿಸಿದರು. ಇದರಿಂದ ಸಿಎಂಗೆ ಮಾತನಾಡಲು ಕಷ್ಟವಾಯಿತು. ಅವರು ಡಯಾಸ್ ಬಿಟ್ಟು ಮತ್ತೆ ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು.

ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ ದರ್ಶನ್
ಗಲಾಟೆ ಕಡಿಮೆ ಆಗದೇ ಇದ್ದಾಗ ಸ್ವತಃ ಮೈಕ್ ಮುಂದೆ ಬಂದ ದರ್ಶನ್, ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ, ನಾಡಿನ ಹೆಮ್ಮೆಯ ಸಿಎಂ ಮಾತನಾಡುವಾಗ ಕುಳಿತು ಕೇಳಬೇಕಾದುದು ನಮ್ಮ ಕರ್ತವ್ಯ, ಹೀಗೆ ತಂಟೆ, ತರ್ಲೆ ಮಾಡಲು ಬೇರೆ ಸಮಯವಿದೆ. ಇಲ್ಲಿ ಹಿರಿಯರು, ಸಿಎಂ ಅವರು ಮಾತನಾಡುತ್ತಿದ್ದಾರೆ ಮೌನವಾಗಿ ಕೇಳಿಸಿಕೊಳ್ಳಿ. ನೀವು ಹೀಗೆ ಗಲಾಟೆ ಮಾಡಿದರೆ ನನ್ನ ಮರ್ಯಾದೆ ಹೋಗುತ್ತದೆ'' ಎಂದರು. ಅಭಿಮಾನಿಗಳು ತುಸು ಶಾಂತವಾದರು. ನಂತರ ಮತ್ತೆ ಮೈಕ್ ಬಳಿ ಆಗಮಿಸಿದ ಸಿಎಂ ಮಾತು ಮುಂದುವರೆಸಿದರು.

ಕ್ಷಮೆ ಕೇಳಿದ ದರ್ಶನ್
ಬಳಿಕ ಮಾತನಾಡುವ ಅವಕಾಶ ಬಂದಾಗ ಚುಟುಕಾಗಿ ಮಾತನಾಡಿದ ದರ್ಶನ್, ಮೊದಲಿಗೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ಎಲ್ಲರಿಗೂ ಕ್ಷಮೆ ಕೇಳಿದರು. ''ಆಗಿನಿಂದಲೂ ನೋಡುತ್ತಿದ್ದೇನೆ. ಸಿಎಂ ಬಳಿ ಬಂದವರೆಲ್ಲ ನನಗೆ ಈ ಕೆಲಸ ಆಗಬೇಕು, ಆ ಕೆಲಸ ಆಗಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದರೆ ನನ್ನ ಕಡೆಯಿಂದಂತೂ ಯಾವ ಮನವಿಯೂ ಇಲ್ಲ ಸರ್'' ಎಂದು ತಮಾಷೆ ಮಾಡಿದರು.

ಸಿಎಂ ಸಿನಿಮಾ ಪ್ರೇಮ ನನಗೆ ಇಷ್ಟ: ದರ್ಶನ್
ಮಾತು ಮುಂದುವರೆಸಿದ ದರ್ಶನ್, ''ಸಿಎಂ ಅವರು ಸಿನಿಮಾ ಪ್ರೇಮಿ ಹಾಗಾಗಿ ಅವರು ನನಗೆ ಬಹಳ ಇಷ್ಟ. ಈ ಹಿಂದೆ ಮಂತ್ರಿಯಾಗಿದ್ದಲೂ ಅವರು ಆಗಾಗ್ಗೆ ಸಿನಿಮಾಗಳನ್ನು ನೋಡುತ್ತಿದ್ದರು. ನಾನು ಒರಾಯನ್ ಮಾಲ್ನಲ್ಲಿ ಅವರನ್ನು ಹಲವು ಬಾರಿ ನೋಡಿದ್ದೇನೆ. ದಿನವೆಲ್ಲ ಶ್ರಮಿಸುವ ಅವರಿಗೆ ಆ ಎರಡು ಗಂಟೆ ವಿಶ್ರಾಂತಿ, ನೆಮ್ಮದಿ ದೊರೆತಂತೆ ಆಗುತ್ತದೆ ಎನಿಸುತ್ತದೆ. ನಿಮ್ಮ ಆಶೀರ್ವಾದವಿದ್ದರೆ ನಾವು ಹೀಗೆಯೇ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಾ ಹೋಗುತ್ತೇವೆ. ಕುಟುಂಬವೆಲ್ಲ ಕುಳಿತು ನೋಡುವ ಸಿನಿಮಾ ಮಾಡುತ್ತಾ ಸಾಗುತ್ತೇವೆ'' ಎಂದು ದರ್ಶನ್ ಹೇಳಿ ತಮ್ಮ ಮಾತು ಮುಗಿಸಿದರು.

ಸಿಎಂ ಕುರ್ಚಿ ಬಳಿ ಕುಳಿತು ದರ್ಶನ್ ಮಾತು
ನಂತರ ದರ್ಶನ್ ಅವರು 'ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ' ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಬಳಿಕ ಸಿಎಂ ಅವರ ಕುರ್ಚಿ ಬಳಿ ಹೋಗಿ ಕುಕ್ಕುರುಗಾಲಿನಲ್ಲಿ ಕುಳಿತು ಸಿಎಂ ಅವರೊಟ್ಟಿಗೆ ತುಸು ಹೊತ್ತು ಚರ್ಚೆ ಮಾಡಿದರು. ಪಕ್ಕದಲ್ಲಿಯೇ ಇದ್ದ ನಿರ್ಮಾಪಕ ಮುನಿರತ್ನ ಅವರೊಟ್ಟಿಗೂ ಮಾತನಾಡಿದರು. ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುರ್ಚಿ ಬಳಿ ತೆರಳಿ ಅವರ ಬಳಿಯೂ ಮಂಡಿಯೂರಿ ಕುಳಿತು ದರ್ಶನ್ ಮಾತನಾಡಿದರು.


Click it and Unblock the Notifications











