'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?
ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಲಿದ್ದಾರೆ. ಒಂದೆರಡು ದಿನ ಪ್ರಚಾರ ಮಾಡಿ ಹೋಗ್ತಾರಾ ಅಥವಾ ಫುಲ್ ಟೈಂ ಪ್ರಚಾರ ಮಾಡ್ತಾರಾ ಎಂಬ ಕುತೂಹಲವಿದೆ. ಈ ಬಗ್ಗೆ ಸ್ವತಃ ದರ್ಶನ್ ಉತ್ತರ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಟ ಯಶ್ ಮತ್ತು ದರ್ಶನ್ ಕೂಡ ಸುಮಲತಾ ಜೊತೆಯಲ್ಲಿದ್ದರು. ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಸುಮಲತಾ ಅವರಿಗೆ, ಸಂಪೂರ್ಣ ಬೆಂಬಲ ನೀಡುವುದಾಗಿ ದರ್ಶನ್ ಹೇಳಿದರು.
ಇನ್ನು ಅದೇ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಕೂಡ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ ದರ್ಶನ್ ತಮ್ಮದೇ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿ ಗೊಂದಲಕ್ಕೆ ಬ್ರೇಕ್ ಹಾಕಿದರು. ಅಷ್ಟಕ್ಕೂ, ಸುದ್ದಿಗೋಷ್ಠಿಯಲ್ಲಿ ದಾಸ ಏನಂದ್ರು? ಹೇಗಿರುತ್ತೆ ಸುಮಲತಾ ಅವರ ಪರ ಡಿ ಬಾಸ್ ಪ್ರಚಾರ? ಮುಂದೆ ಓದಿ....

ನಾನು ಸ್ಟಾರ್ ಆಗಿ ಬಂದಿಲ್ಲ
''ನಾನು ಸ್ಟಾರ್ ಆಗಿ ಇಲ್ಲಿಗೆ ಬಂದಿಲ್ಲ. ಸ್ಟಾರ್ ಆಗಿದ್ರೆ ಮೇಕಪ್ ಹಾಕ್ಕೊಂಡು, ಸನ್ ಗ್ಲಾಸ್ ಹಾಕ್ಕೊಂಡು ಕೂಲ್ ಆಗಿರಬಹುದು. ನಾನಿಲ್ಲಿ ಮನೆ ಮಗನಾಗಿ ಬಂದಿದ್ದೇನೆ'' ಎಂದು ಹೇಳುವ ಮೂಲಕ ನಟ ದರ್ಶನ್ ಅವರು ಸುಮಲತಾ ಅವರ ಸ್ಪರ್ಧೆಯನ್ನ ಸಮರ್ಥಿಸಿಕೊಂಡರು.

ಅಮ್ಮನ ಹಿಂದೆ ಅಪ್ಪಾಜಿ ನೋಡ್ತಿದ್ದೀವಿ
''ನನಗೆ ಇದು ಮೊದಲ ಎಲೆಕ್ಷನ್ ಅಲ್ಲ. ಅಪ್ಪಾಜಿ ಅವರ ಜೊತೆ ಮೂರ್ನಾಲ್ಕು ಚುನಾವಣೆಯಲ್ಲಿ ಜೊತೆಯಲ್ಲಿದ್ದೆ. ಮೂರು ಎಂಎಲ್ಎ ಎಲೆಕ್ಷನ್ ಒಂದು ಎಂಪಿ ಎಲೆಕ್ಷನ್ ನಲ್ಲಿ ನಾನು ಕೆಲಸ ಮಾಡಿದ್ದೀನಿ. ಈಗ ಅಪ್ಪಾಜಿ ಇಲ್ಲ. ಅಮ್ಮನ ಹಿಂದೆ ನಾನು ಅಪ್ಪಾಜಿ ಅವರನ್ನ ನೋಡುತ್ತಿದ್ದೇನೆ'' ಎಂದು ದರ್ಶನ್ ಹೇಳಿದ್ರು.

ಅಂಬಿ ಕೆಲಸಗಳನ್ನ ಮುಂದಿಟ್ಟು ಹೋಗುತ್ತೇವೆ
''ಈಗ ಸಿಂಪತಿ ಇದೆ ಅಂತ ಹೋಗ್ತಿಲ್ಲ. ಅಂಬರೀಶ್ ಅವರು ಮಂಡ್ಯ ಜನಕ್ಕೆ ಮಾಡಿರುವ ಕೆಲಸಗಳು, ಅವರು ನೀಡಿರುವ ಕೊಡುಗೆಗಳನ್ನ ಮುಂದಿಟ್ಟುಕೊಂಡು ನಾವು ಹೋಗ್ತೀವಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಮಾಡ್ತೀವಿ, ಯಾವುದೇ ವಿವಾದ ಅಥವಾ ಇನ್ನೊಂದು ಆಗಲಿ ಎಂದು ಯೋಚನೆ ಮಾಡಲ್ಲ''

ಅಧಿಕಾರ ಮಾಡೋ ಯೋಗ್ಯತೆ ನಮಗಿಲ್ಲ
''ಅಭಿಮಾನಿಗಳಿಗೆ ಹೀಗೆ ಮಾಡಿ ಎಂದು ಅಧಿಕಾರ ತೋರಿಸುವ ಯೋಗ್ಯತೆ ನಮಗೆ ಇಲ್ಲ. ನಾವು ಹೀಗೆ ಮಾಡಿದ್ರೆ ಒಳ್ಳೆಯದಾಗುತ್ತೆ ಎಂದು ಕೇಳಿಕೊಳ್ಳಬಹುದು ಅಷ್ಟೇ. ಅದಕ್ಕೂ ಮೀರಿ ಅವರ ಇಷ್ಟ ಅದು. ಅಂಬರೀಶ್ ಅವರ ಕೆಲಸಗಳು ಮುಂದುವರಿಯಿಲಿ ಎಂಬ ಆಸೆ ಅಷ್ಟೇ''

ಅಪ್ಪಾಜಿ ಸೂಚಿಸಿದವರಿಗೆ ಪ್ರಚಾರ ಮಾಡಿದ್ದೀನಿ
''ಅಂಬರೀಶ್ ಅವರು ಇದ್ದಾಗ, ಅವರು ಹೇಳಿದ ವ್ಯಕ್ತಿಗಳಿಗೆ ನಾನು ಪ್ರಚಾರ ಮಾಡಿ ಬಂದಿದ್ದೀನಿ. ಆ ವ್ಯಕ್ತಿ ಯಾರು, ಅವನ ಕೆಲಸ ಏನು ಎಂದು ನಾನು ನೋಡಿಲ್ಲ. ಯಾಕಂದ್ರೆ, ಅಪ್ಪಾಜಿ ಅವರ ಮೇಲೆ ಇದ್ದ ಅಭಿಮಾನ'' ಎಂದು ದಾಸ ಹೇಳಿದ್ರು.

ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ಪ್ರಚಾರ ಮಾಡಲ್ಲ
ಸುಮಲತಾ ಅವರ ಎದುರು ಮೈತ್ರಿ ಅಭ್ಯರ್ಥಿಯಾಗಿ ನಟ ನಿಖಿಲ್ ಕುಮಾರ್ ಸ್ಪರ್ಧೆ ಮಾಡುತ್ತಿದ್ದು, ಇದು ಚಿತ್ರರಂಗಕ್ಕೆ ಸಂಕಷ್ಟ ತಂದಿದೆ ಎಂಬ ಮಾತಿದೆ. ಆದ್ರೆ, ಈ ಬಗ್ಗೆ ಮಾತನಾಡಿದ ದರ್ಶನ್ ''ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ಹೇಗೆ ಪ್ರಚಾರ ಮಾಡೋದು. ಅದು ಸಾಧ್ಯವಿಲ್ಲ'' ಎಂದು ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ರು.


Click it and Unblock the Notifications











