'ಪೈಲ್ವಾನ್' ಪೈರಸಿ: ದರ್ಶನ್ ಮನಸ್ಸಿನಲ್ಲೇನಿದೆ? ಆಪ್ತರು ಬಿಚ್ಚಿಟ್ಟ ಗುಟ್ಟು
Recommended Video
ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಜೋರಾಗಿ ನಡೆಯುತ್ತಿದೆ. ಮತ್ತೆ ನಟ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾವನ್ನು ರಣರಂಗದಂತೆ ಪರಿಗಣಿಸಿ ಹೊಡೆದಾಡುತ್ತಿದ್ದಾರೆ.
ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಪೈರಸಿ ಆಯ್ತು. ದರ್ಶನ್ ಅಭಿಮಾನಿ ಎಂಬ ಹೆಸರು ಬಳಸಿರುವ ಕೆಲವು ಕಿಡಿಗೇಡಿಗಳು ಫೇಸ್ ಬುಕ್ ಖಾತೆಯಲ್ಲಿ ಅದನ್ನು ಶೇರ್ ಮಾಡಿದರು. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್ ಗಳಿಗೂ ದರ್ಶನ್ ಅಭಿಮಾನಿಗಳೆ ಕಾರಣ ಎನ್ನುವ ಆರೋಪ ಬಂತು.
'ನಾವು ತಪ್ಪು ಮಾಡಿಲ್ಲ' ಎಂದು ತಮ್ಮ ಮೇಲೆ ಬಂದ ಆರೋಪದ ವಿರುದ್ಧ ದರ್ಶನ್ ಅಭಿಮಾನಿಗಳು ಸವಾಲು ಹಾಕಿದರು. ಹೀಗೆ ಮುಂದುವರೆದ ಫ್ಯಾನ್ಸ್ ವಾರ್ ಬಳಿಕ ಬಹಳ ದೊಡ್ಡದಾಯ್ತು. ಕೊನೆಗೆ ದರ್ಶನ್ ಮತ್ತು ಸುದೀಪ್ ಇಬ್ಬರು ಈ ಬಗ್ಗೆ ಟ್ವೀಟ್ ಮಾಡಿದರು.
ಇಷ್ಟೆಲ್ಲ ನಡೆಯುತ್ತಿದ್ದರೂ, ಈ ಘಟನೆಗೆ ತಮ್ಮನ್ನು ಏಳೆದು ತಂದಿದ್ದರೂ, ದರ್ಶನ್ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ತಮ್ಮ ಆಪ್ತರ ಬಳಿ ಕೆಲ ಸಂಗತಿಗಳನ್ನು ಡಿ ಬಾಸ್ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ವಾರ್ ನಿಂದ ಬೇಸರ ಆಗಿರುವ ದರ್ಶನ್ 'ರಾಬರ್ಟ್' ಶೂಟಿಂಗ್ ಗೆ ಕೊಂಚ ಬ್ರೇಕ್ ನೀಡಿದ್ದಾರೆ.
'ದರ್ಶನ್ ಗೆ ಆಪ್ತರಾಗಿರುವ ನಿರ್ಮಾಪಕರು ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ. ಸುದೀಪ್ ಹಾಗೂ ದರ್ಶನ್ ಇಬ್ಬರ ಜೊತೆಗೆ ಸಿನಿಮಾ ಮಾಡಿರುವ ಇವರು, ಇಬ್ಬರು ನಟರ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಆಪ್ತರ ಬಳಿ ದರ್ಶನ್ ಮನಸ್ಸಿನ ಮಾತು
''ನನ್ನ ಸಿನಿಮಾ ಸೇರಿದಂತೆ ಎಲ್ಲ ಸಿನಿಮಾವೂ ಪೈರಸಿ ಆಗಿವೆ. ಹೀಗಿರುವಾಗ, ಈ ವಿಷಯದಲ್ಲಿ ನನ್ನನ್ನು ಏಳೆಯುವುದು ಏಕೆ?. ನಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದಾಗ ನಾನು ಪ್ರತಿಕ್ರಿಯೆ ನೀಡುವ ಸಂದರ್ಭ ಬಂತು. ತಪ್ಪು ಮಾಡಿದವರ ವಿರುದ್ಧ ದೂರು ನೀಡಿ. ಅವರಿಗೆ ಶಿಕ್ಷ ಆಗಲಿ. ಅದನ್ನು ಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುವುದು ತಪ್ಪು.'' ಎಂದು ನಟ ದರ್ಶನ್ ಆಪ್ತರ ಜೊತೆಗೆ ಮಾತನಾಡಿದ್ದಾರೆ.

ಸುದೀಪ್ ನನಗೆ ಅನ್ಯಾಯ ಮಾಡಿಲ್ಲ
''ಒಬ್ಬ ನಿರ್ಮಾಪಕನಿಗೆ ಅನ್ಯಾಯ ಆಗಬಾರದು. ಸುದೀಪ್ ನನಗೆ ಅನ್ಯಾಯ ಮಾಡಿಲ್ಲ. ನಾನೇಕೆ ಅವರಿಗೆ ಕೆಟ್ಟದನ್ನು ಮಾಡಲಿ. ಈ ರೀತಿಯ ಘಟನೆಗಳು ಪದೇ ಪದೇ ಬಂದರೆ, ಅದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಾ ಇರಲು ಸಾಧ್ಯ ಇಲ್ಲ. ನಾನು ಇನ್ನೊಬ್ಬರ ಸಿನಿಮಾಗೆ ಈ ರೀತಿ ಮಾಡಿದ್ರೆ, ನಾಳೆ ನನ್ನ ಸಿನಿಮಾಗೂ ಹೀಗೆ ಆಗುತ್ತೆ.'' ಎಂದಿರುವ ದರ್ಶನ್ ಈ ಘಟನೆಯಿಂದ ಅವರು ಬೇಸರ ಮಾಡಿಕೊಂಡಿದ್ದಾರಂತೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಹೆಚ್ಚಾಗುತ್ತದೆ
''ಈ ಬಗ್ಗೆ ಮಾತನಾಡಿದರೆ, ಘಟನೆ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಎಂದು ದರ್ಶನ್ ಪ್ರತಿಕ್ರಿಯೆ ನೀಡಿಲ್ಲ.'' ಎಂದು ನಿರ್ಮಾಪಕರು ತಿಳಿಸಿದ್ದಾರೆ. ''ನಾನು ಇಬ್ಬರಿಗೂ ಆಪ್ತ. ದರ್ಶನ್ ಸುದೀಪ್ ಇಬ್ಬರ ಜೊತೆಗೆ ಸಿನಿಮಾ ಮಾಡಿದ್ದೇನೆ. ಇದನ್ನು ದೊಡ್ಡ ಮಟ್ಟಕ್ಕೆ ಬೆಳೆಸುವುದು ಬೇಡ. ಇದೆನೆಲ್ಲ ಮಾಡಲು ದರ್ಶನ್ ರಿಗೆ ಸಮಯವೂ ಇಲ್ಲ.'' ಎಂದು ಹೇಳಿದ್ದಾರೆ.

ದರ್ಶನ್ ಸುದೀಪ್ ಒಂದಾಗಿ, ಕೂತು ಊಟ ಮಾಡಬಹುದು
''ಒಬ್ಬ ಹೀರೋ ಇನ್ನೊಬ್ಬ ದೊಡ್ಡ ನಟನ ಸಿನಿಮಾ ಬೀಳಬೇಕು ಎಂದು ಆಸೆ ಪಡುವುದಿಲ್ಲ. ಮುಖ್ಯವಾಗಿ ನಟರ ಜೊತೆಗೆ ಇರುವವರಿಗೆ ಬುದ್ದಿ ಇರಬೇಕು. ಅವರು ನಟರಿಗೆ ತಪ್ಪು ಮಾಹಿತಿ ನೀಡಿದರೆ, ಅವರು ಕೂಡ ತಪ್ಪಾದ ಪ್ರತಿಕ್ರಿಯೆ ನೀಡುತ್ತಾರೆ. ಇದರಲ್ಲಿ ನಟರ ತಪ್ಪು ಇರುವುದಿಲ್ಲ. ನನಗೆ ಇಬ್ಬರು ನಟರು ಗೊತ್ತು. ಅವರಿಬ್ಬರು ಚೆನ್ನಾಗಿ ಇದ್ದರೂ. ಆದರೆ ಮಧ್ಯದಲ್ಲಿ ಇದ್ದ ಕೆಲವರಿಂದ ಹೀಗೆ ಆಗಿದೆ.'' ಎನ್ನುವುದು ನಿರ್ಮಾಪಕರ ಮಾತು.

ಇಬ್ಬರು ಅಭಿಮಾನಿಗಳು ಇದನೆಲ್ಲ ಇಲ್ಲಿಗೆ ಬಿಟ್ಟುಬಿಡಿ
''ಸಿನಿಮಾ ಸೋಲುತ್ತಿದೆ ಎಂದು ಯಾರ ಮೇಲೆಯೂ ದೂರಬಾರದು. ಸಿನಿಮಾ ಮೂಲಕವೇ ಎಲ್ಲದಕ್ಕೂ ಉತ್ತರ ನೀಡಬೇಕು. ನಾನು ದರ್ಶನ್, ಸುದೀಪ್, ಕೃಷ್ಣ, ಸ್ವಪ್ನ ಯಾರೇ ಆಗಲಿ ಇಂಡಸ್ಟ್ರಿಗೆ ಒಳ್ಳೆದಾಗುತ್ತದೆಯೇ ಎಂದು ನೋಡಬೇಕು. ಅದು ಬಿಟ್ಟು ಯಾರನ್ನು ದೂರಬಾರದು. ಈ ರೀತಿಯ ಘಟನೆಗಳು ಇಂಡಸ್ಟ್ರಿಗೆ ಒಳ್ಳೆಯದಲ್ಲ. ಮುಂದೆ ದರ್ಶನ್ ಸುದೀಪ್ ಒಂದಾಗಿ, ಜೊತೆಗೆ ಕೂತು ಊಟ ಮಾಡಬಹುದು. ಈಗ ಹೊಡೆದಾಡುತ್ತಿರುವ ಫ್ಯಾನ್ಸ್ ಗಳ ಕತೆ ಆಗ ಏನು. ಹೀಗಾಗಿ ಇಬ್ಬರೂ ನಟರ ಅಭಿಮಾನಿಗಳು ಇದನ್ನು ಇಲ್ಲಿಯೇ ಬಿಟ್ಟು ಬಿಡಿ'' ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ.


Click it and Unblock the Notifications











