'ಡೆವಿಲ್' ಅಪ್ಡೇಟ್ ಬಗ್ಗೆ ಚಿತ್ರತಂಡ ಸುಳಿವು; ಅಭಿಮಾನಿಗಳ ಸಂಭ್ರಮ ಡಬಲ್
ನಟ ದರ್ಶನ್ ಅಭಿನಯದಲ 'ಡೆವಿಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇತ್ತೀಚೆಗೆ ಟಾಕಿ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಹಾಡು, ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ.
'ಡೆವಿಲ್' ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ. ಸದ್ಯ ಬುಕ್ಮೈಶೋನಲ್ಲಿ 'ಡೆವಿಲ್' ಚಿತ್ರದ ಪೇಜ್ ಕ್ರಿಯೇಟ್ ಆಗಿದ್ದು ಇಂಟ್ರೆಸ್ಟ್ ಬಟನ್ ಒತ್ತಿ ಕೈಜೋಡಿಸಿ ಎಂದು ಚಿತ್ರತಂಡ ಮನವಿ ಮಾಡಿದೆ. ಶೀಘ್ರದಲ್ಲೇ ಸಿನಿಮಾ ಬರುತ್ತದೆ ಎಂದು ಹೇಳಲಾಗಿದೆ. ಸದ್ಯ ಈ ಪೋಸ್ಟ್ ನೋಡಿ ಆದಷ್ಟು ಬೇಗ ರಿಲೀಸ್ ಡೇಟ್ ಘೋಷಣೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ದಸರಾ ವೇಳೆಗೆ ಸಿನಿಮಾ ತೆರೆಗೆ ಬರಬಹುದು, ಅದಕ್ಕಿಂತ ಮುನ್ನ ಬಂದರೂ ಅಚ್ಚರಿಪಡಬೇಕಿಲ್ಲ ಎನ್ನಲಾಗ್ತಿದೆ.

2023ರಲ್ಲೇ ಮುಹೂರ್ತ ನೆರವೇರಿಸಿ 'ಡೆವಿಲ್' ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಸರ್ ಬಿಡುಗಡೆ ಆಗಿತ್ತು. ಚಿತ್ರೀಕರಣ ಸಹ ಶುರುವಾಗಿತ್ತು. ಬಳಿಕ ದರ್ಶನ್ ಕೈಗೆ ಪೆಟ್ಟಾಗಿ ಚಿತ್ರೀಕರಣ ನಿಂತಿತ್ತು. ಆ ನಂತರ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರುವಂತಾಗಿತ್ತು. ಜಾಮೀನು ಪಡೆದು ಹೊರ ಬಂದ ಬಳಿಕ ಬೆನ್ನು ನೋವಿನ ಸಮಸ್ಯೆಯಿಂಧ ಬಳಲಿದ್ದರು. ಆ ಬಳಿಕ ಮತ್ತೆ ಚಿತ್ರೀಕರಣದಕ್ಕೆ ಹಾಜರಾಗಿದ್ದರು.
ಮೈಸೂರಿನಲ್ಲಿ ಒಂದು ಶೆಡ್ಯೂಲ್ ಮುಗಿಸಿ ಬಳಿಕ ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸಿ ಬಂದಿತ್ತು ಚಿತ್ರತಂಡ. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿದಿದ್ದರು. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮಹೇಶ್ ಮಂಜ್ರೇಕರ್, ಅಚುತ್ ಕುಮಾರ್, ಶೋಭರಾಜ್, ಶರ್ಮಿಳಾ ಮಾಂಡ್ರೆ ಸೇರಿ ಹಲವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
ಶೀಘ್ರದಲ್ಲೇ ಡೆವಿಲ್ ರಿಲೀಸ್ ಡೇಟ್ ಅಥವಾ ಫಸ್ಟ್ ಸಾಂಗ್ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮಿಲನಾ ಪ್ರಕಾಶ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರಾ? ಎರಡೂ ಶೇಡ್ಗಳಿರುವ ಪಾತ್ರನಾ? ಎನ್ನುವ ಕುತೂಹಳ ಮೂಡಿದೆ.
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ 'ಡೆವಿಲ್' ಸಿನಿಮಾ ಶುರುವಾಗಿತ್ತು. ಚಿತ್ರಕ್ಕಾಗಿ ದರ್ಶನ್ ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ಆದರೂ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ದರ್ಶನ್ ಧನ್ಯವಾದ ತಿಳಿಸಿದ್ದರು. ಇನ್ನು ಸಿನಿಮಾ ಬಿಟ್ಟು ನಾನೇನು ಬೇರೆ ಮಾಡಲ್ಲ ಎಂದು ಹೇಳಿದ್ದರು. ಆದಷ್ಟು ಬೇಗ 'ಡೆವಿಲ್' ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದರು.
ದರ್ಶನ್ ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಡ್ವಾನ್ಸ್ ಸಹ ಪಡೆದಿದ್ದಾರೆ. 'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಆ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಲಿದೆ. ಬಳಿಕ ತರುಣ್ ಸುಧೀರ್ ನಿರ್ದೇಶನದಲ್ಲಿ ಸಿಂಧೂರ ಲಕ್ಷ್ಮಣನ ಜೀವನಾಧರಿತ ಚಿತ್ರದಲ್ಲಿ ನಟಿಸಬೇಕಿದೆ. ಆ ಚಿತ್ರವನ್ನು ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಾಣ ಮಾಡಲಿದ್ದಾರೆ. ಬಳಿಕ ಇನ್ನು ಕೆಲವರು ದರ್ಶನ್ ಜೊತೆ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ.


Click it and Unblock the Notifications











