'ಗಂಡುಗಲಿ ಮದಕರಿ ನಾಯಕ': ಆರಂಭದಲ್ಲೇ ಎಡವಟ್ಟು, ದರ್ಶನ್ ವಿರುದ್ಧ ಭುಗಿಲೆದ್ದ ಸಿಟ್ಟು.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಗಂಡುಗಲಿ ಮದಕರಿ ನಾಯಕ' ಚಿತ್ರ ಮಾಡಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅನೌನ್ಸ್ ಮಾಡಿದಾಗ, ''ಮದಕರಿ ನಾಯಕ'ನ ಕುರಿತಾದ ಚಿತ್ರವನ್ನು ನಮ್ಮ ಸಮುದಾಯದವರೇ ಆದ ಸುದೀಪ್ ಮಾಡಬೇಕು'' ಎಂಬ ಕೂಗು ವಾಲ್ಮೀಕಿ ಸಮುದಾಯದಿಂದ ಕೇಳಿಬಂದಿತ್ತು. ಇದು ಗಾಂಧಿನಗರದಲ್ಲಿ ಮಾತ್ರ ಅಲ್ಲ.. ಇಡೀ ಕರ್ನಾಟಕದಲ್ಲೇ ದೊಡ್ಡ ವಿವಾದ ಆಗಿತ್ತು.
ಕೊನೆಗೆ 'ಮದಕರಿ ನಾಯಕ' ಚಿತ್ರದಿಂದ ಸುದೀಪ್ ಹಿಂದೆ ಸರಿದರು. ಒಪ್ಪಂದದಂತೆ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ಸಮಾರಂಭ ಚಿತ್ರದುರ್ಗದಲ್ಲಿ ನಡೆಯಿತು. ಮುರುಘಾಶ್ರೀಗಳ ಸಾನಿಧ್ಯದಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ನೆರವೇರಿತು. ಜೊತೆಗೆ 'ಮದಕರಿ ನಾಯಕ'ನ ಪುತ್ಥಳಿಗೆ ದರ್ಶನ್ ಹೂವಿನ ಹಾರ ಹಾಕಿದರು.
ಅಲ್ಲಿಗೆ, ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತಿದೆ ಅಂತ ಭಾವಿಸುವಾಗಲೇ.. ಒಂದು ಎಡವಟ್ಟು ನಡೆದು ಹೋಗಿದೆ. ಇದೇ ಕಾರಣಕ್ಕೆ 'ದಾಸ' ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ವಿರುದ್ಧ ವಾಲ್ಮೀಕಿ ಸಮುದಾಯ ಸಿಟ್ಟು ಮಾಡಿಕೊಂಡಿದೆ. ವಿವಾದದ ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಮುನಿಸಿಕೊಂಡಿರುವ ವಾಲ್ಮೀಕಿ ಸಮುದಾಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಗಂಡುಗಲಿ ಮದಕರಿ ನಾಯಕ' ಚಿತ್ರ ಆರಂಭದಲ್ಲೇ ವಿವಾದದಲ್ಲಿ ಸಿಲುಕಿದೆ. 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ಸಮಾರಂಭವನ್ನು ಮುರುಘಾಶ್ರೀಗಳ ಸಮ್ಮುಖದಲ್ಲಿ ಮಾಡಲಾಗಿದೆ. ಈ ಸಮಾರಂಭಕ್ಕೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಪುರಿ ಶ್ರೀಗಳಿಗೆ ಆಹ್ವಾನ ಕೊಟ್ಟಿಲ್ಲ. ಹೀಗಾಗಿ, ವಾಲ್ಮೀಕಿ ಸಮುದಾಯದವರು ದರ್ಶನ್ ಮತ್ತು ರಾಕ್ ಲೈನ್ ವಿರುದ್ಧ ಮುನಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧಿಕ್ಕಾರ ಕೂಗುತ್ತಿದ್ದಾರೆ.

ಹಾರ ಹಾಕಿದ್ದಕ್ಕೂ ವಿರೋಧ.!
'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ನಡೆದಾಗ, ಮದಕರಿ ನಾಯಕನ ಪುತ್ಥಳಿಗೆ ಮುರುಘಾಶ್ರೀಗಳ ಸಮ್ಮುಖದಲ್ಲಿ ದರ್ಶನ್ ಹೂವಿನ ಹಾರ ಹಾಕಿದರು. ಇದೂ ಕೂಡ ವಿವಾದಕ್ಕೆ ಕಾರಣವಾಗಿದೆ.

ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆಯ ವಾದ ಏನು.?
''ಮದಕರಿ ನಾಯಕ'ನ ಕುರಿತು ಸಿನಿಮಾ ಸೆಟ್ಟೇರಿರುವುದು ಸಂತೋಷದ ಸಂಗತಿ. ಮದಕರಿ ನಾಯಕನ ಶೌರ್ಯ, ಸ್ವಾಭಿಮಾನ, ಪರಾಕ್ರಮವನ್ನು ತೆರೆಮೇಲೆ ತೋರಿಸುವುದು ನಮಗೆ ಸಂತಸ ತಂದಿದೆ. ನೈಜ ಇತಿಹಾಸವನ್ನ ಮಾತ್ರ ಚಿತ್ರದಲ್ಲಿ ತೋರಿಸಬೇಕು. ಯಾವುದೇ ಕಾದಂಬರಿಗಳನ್ನು ಆಧರಿಸಿ ಚಿತ್ರ ಮಾಡಬಾರದು. ಮದಕರಿ ನಾಯಕನ ತ್ಯಾಗವನ್ನು ನಾವು ಮರೆಯಬಾರದು. ಮದಕರಿ ನಾಯಕನನ್ನ ಟಿಪ್ಪು ಸುಲ್ತಾನ್ ಕೊಲ್ಲುತ್ತಾರೆ. ಮದಕರಿ ನಾಯಕನ ಅವನತಿಗೆ ಕಾರಣರಾದ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಮುರುಘಾಮಠದಲ್ಲಿ ಸ್ಥಾಪನೆ ಮಾಡಿದ್ದಾರೆ. ಅಂತಹವರನ್ನು ಕರೆಯಿಸಿ ಚಿತ್ರದ ಮುಹೂರ್ತ ಮಾಡಿದ್ದಾರೆ. ಸೌಜನ್ಯಕ್ಕೂ ವಾಲ್ಮೀಕಿ ಸಮುದಾಯದ ಶ್ರೀಗಳನ್ನು ಕರೆದಿಲ್ಲ. ಇದು ನಮಗೆ ಬೇಸರ ತಂದಿದೆ. ಒಂದು ವೇಳೆ ನೈಜ ಇತಿಹಾಸವನ್ನು ತೆರೆ ಮೇಲೆ ತಂದಿಲ್ಲ ಅಂದರೆ ನಾವು ಖಂಡಿತ ಉಗ್ರ ಹೋರಾಟ ಮಾಡುತ್ತೇವೆ. ಒಂದು ಸಮುದಾಯಕ್ಕೆ ನೋವು ಮಾಡಿ ಚಿತ್ರ ತೆಗೆಯಬಾರದು'' ಎನ್ನುತ್ತಾರೆ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆಯ ಸಂಚಾಲಕ ಮಹಾಂತೇಶ್.

ಫೇಸ್ ಬುಕ್ ನಲ್ಲಿ ಪೋಸ್ಟ್
''ಟಿಪ್ಪು ಪ್ರತಿಮೆಯನ್ನು ಮಠದಲ್ಲಿ ಇಟ್ಟುಕೊಂಡು, ಮದಕರಿ ನಾಯಕ ಪ್ರತಿಮೆಗೆ ಹಾಲೆರೆದರೇನು ಫಲ'', ''ಮುರುಘಮಠ ಕಟ್ಟಿಸಿ ಕೊಟ್ಟ ರಾಜ ಮದಕರಿ ನಾಯಕರ ಹಂತಕ ಟಿಪ್ಪುವಿನ ಮೂರ್ತಿಯನ್ನು ಮಠದಲ್ಲೇ ಸ್ಥಾಪಿಸಿದ ಮುರುಘಾ ಶರಣರಿಂದ ರಾಜ ಮದಕರಿ ಚಲನಚಿತ್ರಕ್ಕೆ ಆಶೀರ್ವಾದ'' ಎಂಬೆಲ್ಲ ಪೋಸ್ಟ್ ಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿವೆ.

ಚಿತ್ರದ ಕುರಿತು...
ಐತಿಹಾಸಿಕ ಚಿತ್ರ 'ಗಂಡುಗಲಿ ಮದಕರಿ ನಾಯಕ' ಚಿತ್ರದಲ್ಲಿ ದರ್ಶನ್, ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಿಗ್ ಬಜೆಟ್ ನಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡುತ್ತಿದ್ದರೆ, ರಾಜೇಂದ್ರಸಿಂಗ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











