'ಕಾಟೇರ'ನಿಗೆ ದರ್ಶನ್ ಲಕ್ಕಿ ಥಿಯೇಟರ್ ಸಿಗಲೇಯಿಲ್ಲ: ಅಭಿಮಾನಿಗಳ ಆಕ್ರೋಶ
ಸ್ಯಾಂಡಲ್ವುಡ್ನಲ್ಲಿ 'ಕಾಟೇರ' ದರ್ಬಾರ್ ಜೋರಾಗಿದೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರ್ತಿದೆ. ಒಂದು ಬ್ಲಾಕ್ಬಸ್ಟರ್ ಹಿಟ್ ಮೂಲಕ 2023 ಸ್ಯಾಂಡಲ್ವುಡ್ ಗುಡ್ಬೈ ಹೇಳೊಕೆ ಕಾಯ್ತಿದೆ. ಮಂಡ್ಯದಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಥೀಮ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಈಗಾಗಲೇ 'ಕಾಟೇರ' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಗಾಂಧಿನಗರದ ಅನುಪಮಾ ಹಾಗೂ ರಾಕ್ಲೈನ್ ಮಾಲ್ ಸೇರಿದಂತೆ ಹಲವೆಡೆ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ರಾಕ್ಲೈನ್ ಮಾಲ್ನಲ್ಲಿ ಮಧ್ಯರಾತ್ರಿ 12 ಗಂಟೆಗೆ 'ಕಾಟೇರ'ನ ದರ್ಶನವಾಗಲಿದೆ. ಇನ್ನು ಅನುಪಮಾ ಚಿತ್ರಮಂದಿರದಲ್ಲಿ ಸೂರ್ಯ ಹುಟ್ಟುವುದಕ್ಕು ಮುನ್ನ 'ಕಾಟೇರ'ನ ಆರ್ಭಟ ಶುರುವಾಗಲಿದೆ.

ಮೂರ್ನಾಲ್ಕು ಶೋಗಳು ಈಗಾಗಲೇ ಸೋಲ್ಡ್ಔಟ್ ಆಗೋಗಿದೆ. ಅಡ್ವಾನ್ಸ್ ಬುಕ್ಕಿಂಗ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಆದರೆ ಕೆಜೆ ರಸ್ತೆಯ ಸಂತೋಷ್ ಹಾಗೂ ನರ್ತಕಿ ಚಿತ್ರಮಂದಿರದಲ್ಲಿ 'ಕಾಟೇರ'ನ ದರ್ಶನವಾಗುತ್ತಿಲ್ಲ. ಇದು ಕೆಲ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನರ್ತಕಿ, ನಟ ದರ್ಶನ್ ಲಕ್ಕಿ ಥಿಯೇಟರ್ ಅಂತ್ಲೇ ಅಭಿಮಾನಿಗಳು ಭಾವಿಸಿದ್ದಾರೆ. ಅದೇ 'ಕಾಟೇರ' ಚಿತ್ರದ ಮೇನ್ ಥಿಯೇಟರ್ ಆಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಅಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಪ್ರದರ್ಶನವಾಗುತ್ತಿರುವುದರಿಂದ 'ಕಾಟೇರ' ಅನಿವಾರ್ಯವಾಗಿ ಅನುಪಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವಂತಾಗಿದೆ.
ನರ್ತಕಿ ಚಿತ್ರಮಂದಿರ 'ಕಾಟೇರ' ಚಿತ್ರಕ್ಕೆ ಸಿಗದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಂದು ವಾರದ ಬಳಿಕ 'ಸಲಾರ್' ಚಿತ್ರವನ್ನು ನರ್ತಕಿಯಿಂದ ತೆಗೆದು ಅನುಪಮಾದಲ್ಲಿ 'ಕಾಟೇರ' ಸಿನಿಮಾ ಹಾಕುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕೆಜಿ ರಸ್ತೆಯ 3 ಥಿಯೇಟರ್ಗಳಲ್ಲಿ 'ಸಲಾರ್' ಸಿನಿಮಾ ಪ್ರದರ್ಶನವಾಗುತ್ತಿದೆ. ನರ್ತಕಿಯಲ್ಲಿ ಸಲಾರ್ ಕನ್ನಡ ವರ್ಷನ್, ಸಂತೋಷ್ ಚಿತ್ರಮಂದಿರದಲ್ಲಿ ತೆಲುಗು ಹಾಗೂ ಭೂಮಿಕಾ ಚಿತ್ರಮಂದಿರದಲ್ಲಿ ಹಿಂದಿ ವರ್ಷನ್ ಹಾಕಲಾಗಿದೆ.
ಗಾಂಧಿನಗರದ ಮೂರು ಚಿತ್ರಮಂದಿರಗಳಲ್ಲಿ 'ಸಲಾರ್' ಪ್ರದರ್ಶಿಸುತ್ತಿರುವುದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಒಂದು ವಾರದ ಬಳಿಕ ಆದರೂ 'ನರ್ತಕಿ' ಬಿಟ್ಟುಕೊಡಬಹುದಿತ್ತು. ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಕನ್ನಡ ಚಿತ್ರಕ್ಕೆ ಗಾಂಧಿನಗರದ ಥಿಯೇಟರ್ ಸಿಕ್ಕಿಲ್ಲ. ಬೇರೆ ಭಾಷೆಯ ಚಿತ್ರಕ್ಕೆ ಕೊಟ್ಟಿರೋದು ಸರಿಯಲ್ಲ, ಕನ್ನಡಪರ ಹೋರಾಟಗಾರರು ಈಗ ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೇನ್ ಥಿಯೇಟರ್ ಕಾನ್ಸೆಪ್ಟ್ ಕಮ್ಮಿ ಆಗುತ್ತಿದೆ. ಆದರೂ ಕೂಡ ಸ್ಟಾರ್ ನಟರ ಸಿನಿಮಾಗಳು ಬಂದಾಗ ಅಭಿಮಾನಿಗಳ ಸಂಭ್ರಮಾಚರಣೆಗೆ ಗಾಂಧಿನಗರದ ಮುಖ್ಯ ಚಿತ್ರಮಂದಿರಗಳು ಸಾಕ್ಷಿಯಾಗುತ್ತವೆ. ನರ್ತಕಿ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ಹಲವು ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿವೆ. ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಗೆ ಸಾಕಷ್ಟು ಸ್ಥಳಾವಕಾಶವಿತ್ತು. ಆದರೆ ಅನುಪಮಾ ಚಿತ್ರಮಂದಿರದ ಮುಂಭಾಗದಲ್ಲಿ ಸ್ಥಳಾವಕಾಶ ಕಮ್ಮಿಯಿಲ್ಲ.
ತಡವಾಗಿ 'ಕಾಟೇರ' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದೇ ನರ್ತಕಿ ಚಿತ್ರಮಂದಿರ ಕೈತಪ್ಪಲು ಕಾರಣವಾಯಿತು ಎನ್ನುವ ವಾದ ಕೆಲವರದ್ದು. ಹೊಂಬಾಳೆ ಸಂಸ್ಥೆ ನವೆಂಬರ್ ಮೊದಲ ವಾರದಲ್ಲೇ 'ಸಲಾರ್' ರಿಲೀಸ್ ಡೇಟ್ ಘೋಷಿಸಿತ್ತು. ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿತ್ತು. ಕೆಜಿ ರಸ್ತೆಯ 3 ಚಿತ್ರಮಂದಿರಗಳನ್ನು 2 ವಾರಗಳ ಮಟ್ಟಿಗೆ ಬುಕ್ ಮಾಡಿಕೊಂಡಿತ್ತು ಎನ್ನಲಾಗ್ತಿದೆ. ಆದರೂ ರಾಕ್ಲೈನ್ ಸಂಸ್ಥೆ ನರ್ತಕಿ ಚಿತ್ರಮಂದಿರ ಪಡೆಯಲು ಪ್ರಯತ್ನಿಸಿತ್ತು. ಸಾಧ್ಯವಾಗದೇ ಇದ್ದಾಗ ಅನುಪಮಾ ಚಿತ್ರಮಂದಿರಕ್ಕೆ ತೃಪ್ತಿಪಟ್ಟುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ನರ್ತಕಿ ಚಿತ್ರಮಂದಿರ ಸಿಗದೇ ಇದ್ದರೂ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲೇ 'ಕಾಟೇರ' ಸಿನಿಮಾ ಬಿಡುಗಡೆಯಾಗಲಿದೆ. ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಅಭಿಮಾನಿಗಳು ಬಹಳ ಅದ್ಧೂರಿಯಾಗಿ 'ಕಾಟೇರ'ನ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











