ಬುಕ್ ಮೈ ಶೋನಲ್ಲಿ ಕಾಟೇರ ಪೇಜ್ ಓಪನ್; ಎಷ್ಟಿದೆ ವೋಟ್ಗಳ ಸಂಖ್ಯೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಚಿತ್ತವೆಲ್ಲಾ ಇದೀಗ ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಶನ್ನ ಕಾಟೇರ ಚಿತ್ರದ ಮೇಲಿದೆ. ಈ ವರ್ಷದ ಮೊದಲ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ಕ್ರಾಂತಿ ಚಿತ್ರ ನಿರೀಕ್ಷಿಸಿದ ಯಶಸ್ಸು ಸಾಧಿಸಲಿಲ್ಲ. ದರ್ಶನ್ ಸ್ಟಾರ್ಡಂಗೆ ತಕ್ಕ ಚಿತ್ರ ಅದಾಗಿರಲಿಲ್ಲ. ಹೀಗಾಗಿ ಕಾಟೇರ ಮೇಲೆ ದರ್ಶನ್ ಅಭಿಮಾನಿಗಳು ಭರವಸೆ ಹಾಗೂ ನಂಬಿಕೆ ಇಟ್ಟುಕೊಂಡಿದ್ದಾರೆ.
ಇನ್ನು ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರಾಬರ್ಟ್ ರೀತಿಯ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ ಗೆದ್ದಿದ್ದ ನಿರ್ದೇಶಕ ತರುಣ್ ಸುಧೀರ್ ಎರಡನೇ ಬಾರಿಗೆ ದರ್ಶನ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ದರ್ಶನ್ ಇದೇ ತರುಣ್ ಸುಧೀರ್ ನಿರ್ದೇಶನದ ಬ್ಲಾಕ್ಬಸ್ಟರ್ ಚಿತ್ರ ಚೌಕ ಚಿತ್ರದಲ್ಲಿಯೂ ಸಹ ರಾಬರ್ಟ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು.

ಈ ಮೂಲಕ ಈಗಾಗಲೇ ಎರಡು ಬಾರಿ ಹಿಟ್ ನೀಡಿರುವ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ ಮೂರನೇ ಗೆಲುವು ದಾಖಲಿಸಿ ಹ್ಯಾಟ್ರಿಕ್ ಬಾರಿಸುವ ಯೋಜನೆಯಲ್ಲಿದೆ. ಇನ್ನು ಅದಕ್ಕೆ ಬೇಕಾದ ತಕ್ಕ ತಯಾರಿಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಚಿತ್ರದ ಮೊದಲ ಪೋಸ್ಟರ್ನಿಂದ ಹಿಡಿದು ಹೀರೋಯಿನ್ ಫಸ್ಟ್ ಲುಕ್ ಪೋಸ್ಟರ್ವರೆಗೂ ಚಿತ್ರ ಬಿಡುಗಡೆ ಮಾಡಿದ ಚಿತ್ರದ ಎಲ್ಲಾ ಅಂಶವೂ ಪರ್ಫೆಕ್ಟ್. ಸ್ಟಾರ್ ನಟನಿಗೆ ಸಿನಿಮಾ ಮಾಡುವಾಗ ಯಾವ ರೀತಿಯ ಕ್ವಾಲಿಟಿ ಇರಬೇಕು ಎಂಬುದಕ್ಕೆ ಕೈಗನ್ನಡಿ ಹಿಡಿದಂತೆ.
ಹೀಗೆ ಸಖತ್ ಯೋಜನೆಯೊಂದಿಗೆ ಶುರುವಾಗಿರುವ ಕಾಟೇರ ಸಿನಿಮಾದ ಬುಕ್ ಮೈ ಶೋ ಪೇಜ್ ಇಂದು ( ಏಪ್ರಿಲ್ 3 ) ಓಪನ್ ಆಗಿದೆ. ಹೀಗೆ ಚಿತ್ರದ ಪೇಜ್ ಬುಕ್ ಮೈ ಶೋನಲ್ಲಿ ತೆರೆಯಲ್ಪಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಇಂಟರೆಸ್ಟ್ ಬಟನ್ ಕ್ಲಿಕ್ಕಿಸಿ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇತರೆ ಅಭಿಮಾನಿಗಳಿಗೂ ಇಂಟರೆಸ್ಟ್ ಬಟನ್ ಕ್ಲಕ್ ಮಾಡುವಂತೆ ಆಹ್ವಾನಿಸಿದ್ದಾರೆ.
ಇನ್ನು ಸದ್ಯಕ್ಕೆ ಮೂರು ಸಾವಿರ ಇಂಟೆರೆಸ್ಟ್ ಪಡೆದುಕೊಳ್ಳುವತ್ತ ಚಿತ್ರ ಸಾಗಿದ್ದು, ಚಿತ್ರದ ಸ್ಟಾರ್ ಕಾಸ್ಟ್ ವಿಭಾಗದಲ್ಲಿ ದರ್ಶನ್, ಜಗಪತಿ ಬಾಬು ಹಾಗೂ ನಾಯಕಿ ರಾಧನಾ ರಾಮ್ ಬಿಟ್ಟು ಬೇರೆ ಯಾವ ಕಲಾವಿದರ ಮಾಹಿತಿಯೂ ಸಹ ಇಲ್ಲ. ತಂತ್ರಜ್ಞರ ವಿಭಾಗದಲ್ಲಿ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಗೂ ಕ್ಯಾಮೆರಾಮ್ಯಾನ್ ಸುಧಾಕರ್ ಎಸ್ ರಾಜ್ ಹೆಸರುಗಳಿವೆ.

ಇನ್ನು ಕಾಟೇರ 70ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಭೂಮಿ ವಿಚಾರವಾಗಿ ನಡೆಯುವ ಹೋರಾಟದ ಕಥೆ ಇರಬಹುದು ಎಂಬ ಊಹೆ ಇದೆ. ಚಿತ್ರದ ಮೋಷನ್ ಪೋಸ್ಟರ್ನಲ್ಲಿ ಬರುವ ಉಳುವವನೇ ಭೂಮಿಗೆ ಒಡೆಯ ಎಂಬ ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ. ಒಟ್ಟಿನಲ್ಲಿ ದರ್ಶನ್ ಚಿತ್ರದಲ್ಲಿ ಹೋರಾಟದ ಮುಂದಾಳತ್ವವನ್ನು ವಹಿಸಿಕೊಳ್ಳಲಿರುವ ತಂಡದ ನಾಯಕನ ಪಾತ್ರ ಮಾಡಲಿದ್ದಾರೆ ಎಂಬುದು ಚಿತ್ರದ ಮೊದಲ ಪೋಸ್ಟರ್ನಲ್ಲಿ ಬರೆಯಲಾಗಿದ್ದ 'ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ' ಎಂಬ ಸಾಲುಗಳಿಂದಲೇ ತಿಳಿದುಬಂದಿದೆ.
ಚಿತ್ರದ ಮೊದಲ ಹಂತದ ಚಿತ್ರೀಕರಣ ಸಹ ಆರಂಭಗೊಂಡಿದ್ದು, ಚಿತ್ರಕ್ಕಾಗಿ ಎಪ್ಪತ್ತರ ದಶಕರ ವಿಶೇಷ ಹಳ್ಳಿಯ ಸೆಟ್ ಅನ್ನು ಹಾಕಲಾಗಿದ್ದ ಫೋಟೊಗಳು ಮೊನ್ನೆಯಷ್ಟೇ ಲೀಕ್ ಆಗಿ ವೈರಲ್ ಆಗಿದ್ದವು. ಈ ಫೋಟೊಗಳನ್ನು ನೋಡಿದ್ದ ದರ್ಶನ್ ಅಭಿಮಾನಿಗಳು ನಿರ್ದೇಶಕ ತರುಣ್ ಸುಧೀರ್ ಈ ಬಾರಿ ದೊಡ್ಡದಾಗಿಯೇ ಪ್ಲಾನ್ ಮಾಡಿಕೊಂಡು ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಮಾತನಾಡಿಕೊಂಡಿದ್ದರು.


Click it and Unblock the Notifications











