Kaatera: ದಿಢೀರನೆ 'ಕಾಟೇರ' ರಿಲೀಸ್ ಡೇಟ್ ಘೋಷಣೆ: ಅಭಿಮಾನಿಗಳಿಗೆ ಸ್ವೀಟ್ ಶಾಕ್!
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿ ಚಿತ್ರತಂಡ ಶಾಕ್ ಕೊಟ್ಟಿದೆ. ಈ ವರ್ಷವೇ ಅಭಿಮಾನಿಗಳು ತೆರೆಮೇಲೆ ಚಾಲೆಂಜಿಂಗ್ ಸ್ಟಾರ್ ಆರ್ಭಟ ಕಣ್ತುಂಬಿಕೊಳ್ಳಬಹುದು. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
'ಕಾಟೇರ' ಸಿನಿಮಾ ಶೂಟಿಂಗ್ ನಡೀತಿದೆ ಎನ್ನುವ ಚರ್ಚೆ ನಡುವೆಯೇ ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಸ್ಪೆಷಲ್ ಮೇಕಿಂಗ್ ವಿಡಿಯೋ ಸಮೇತ ಈ ವಿಚಾರವನ್ನು ಬಹಿರಂಗಪಡಿಸಿದೆ. ಮೇಕಿಂಗ್ ಜೊತೆಗೆ 'ಕಾಟೇರ' ದರ್ಶನ್ ಸಣ್ಣ ಝಲಕ್ ತೋರಿಸಿ ತರುಣ್ ಅಭಿಮಾನಿಗಳ ಮನಗೆದ್ದಿದ್ದಾರೆ. ಮುಂದಿನ ವರ್ಷ ರಿಲೀಸ್ ಆಗುತ್ತದೆ ಎಂದುಕೊಂಡಿದ್ದ ಸಿನಿಮಾ ಇದೇ ವರ್ಷ ಬರುತ್ತೆ ಅನ್ನೋದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.

ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಬಹಳ ಅದ್ಧೂರಿಯಾಗಿ 'ಕಾಟೇರ' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗುತ್ತಿದ್ದು ಹಳ್ಳಿ ಹೈದನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅನೌನ್ಸ್ಮೆಂಟ್ ಟೀಸರ್ನಲ್ಲೇ 'ಊಟ ತಯಾರಿದೆ' ಎಂದು ಹೇಳಲಾಗಿದೆ. ದರ್ಶನ್ ಬೀಡಿ ಹಚ್ಚಿ ಸೇದುವ ಝಲಕ್ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಲಾಗಿದೆ. ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಲಿದೆ. ಸಂಕ್ರಾಂತಿ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ಬರ್ತಿವೆ. ಇದರ ನಡುವೆ 'ಕಾಟೇರ'ನ ಆರ್ಭಟ ನಡೆಯಲಿದೆ.
ಒಂದರ್ಥದಲ್ಲಿ ಹೊಸ ವರ್ಷಕ್ಕೆ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ. ಇನ್ನೊಂದು ತಿಂಗಳು ಮಾತ್ರ ಬಾಕಿಯಿದೆ. ಪ್ರಮೋಷನ್ ಯಾವಾಗ ಮಾಡೋದು? ಎಂದು ಕೆಲವರು ಕೇಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಆರಾಧನಾ ನಟಿಸಿದ್ದಾರೆ. ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು, ಬಿರಾದಾರ್, ಕುಮಾರ್ ಗೋವಿಂದ್, ಶ್ರುತಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.
ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಹಾಗೂ ಮಾಸ್ತಿ ಸಂಭಾಷಣೆ 'ಕಾಟೇರ' ಚಿತ್ರಕ್ಕಿದೆ. ಇದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ ಆಗಿದ್ದು ನೋಡುಗರನ್ನು 50 ವರ್ಷ ಹಿಂದಕ್ಕೆ ಕರೆದೊಯ್ಯಲಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಈ ಸಿನಿಮಾ ಕತೆ ಸುತ್ತಲಿದೆ. ಬರೀ ಪೋಸ್ಟರ್ಗಳಿಂದಲೇ ಸದ್ದು ಮಾಡುತ್ತಿದ್ದ ಸಿನಿಮಾ ಇದೀಗ ರಿಲೀಸ್ ಡೇಟ್ ಘೋಷಣೆಯಾಗಿ ಮತ್ತಷ್ಟು ಸುದ್ದಿಯಲ್ಲಿದೆ.
70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ಕನಕಪುರ ರಸ್ತೆಯ ಬಳಿ ದೊಡ್ಡ ಹಳ್ಳಿ ಸೆಟ್ವೊಂದನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಇನ್ನುಳಿದಂತೆ ತುಂಬನೇರಳೆ ಹಳ್ಳಿ, ಕನಕಪುರ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಥೀಮ್ ಪೋಸ್ಟರ್ನಿಂದಲೇ ಈ ಸಿನಿಮಾ ಭಾರೀ ಸದ್ದು ಮಾಡಿತ್ತು.
ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ" ಅನ್ನೋ ಟ್ಯಾಗ್ಲೈನ್ ಕೊಟ್ಟು ಸಿನಿಮಾ ಘೋಷಿಸಲಾಗಿತ್ತು. ಬಳಿಕ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಮುಹೂರ್ತ ನೆರವೇರಿಸಲಾಗಿತ್ತು. ಈ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಟೈಟಲ್ ಸಮೇತ ಮೋಷನ್ ಪೋಸ್ಟರ್ ಬಂದಿತ್ತು. ಬಳಿಕ ಪ್ರತಿ ಹಬ್ಬಕ್ಕೆ ಹೊಸ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಏಕಾಏಕಿ ರಿಲೀಸ್ ಡೇಟ್ ಘೋಷಣೆಯಾಗಿದೆ.

'ಕ್ರಾಂತಿ' ಸಿನಿಮಾ ಮುಗಿಸಿ ದರ್ಶನ್ 'ಕಾಟೇರ' ಚಿತ್ರೀಕರಣ ಆರಂಭಿಸಿದ್ದರು. ಹಲವು ಶೆಡ್ಯೂಲ್ಗಳಲ್ಲಿ ಸಿನಿಮಾ ಸೆರೆಹಿಡಿಯಲಾಯಿತು. ಇತ್ತೀಚೆಗೆ ದರ್ಶನ್ ತಮ್ಮ ಮುಂದಿನ ಸಿನಿಮಾ ಮುಹೂರ್ತ ಕೂಡ ಮಾಡಿ ಮುಗಿಸಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ದರ್ಶನ್ ನಟಿಸೋಕೆ ಸಿದ್ಧರಾಗಿದ್ದಾರೆ.


Click it and Unblock the Notifications











