ಹಣೇಲಿ ಕುಂಕುಮ, ಕುತ್ತಿಗೇಲಿ ದೇವರ ರಕ್ಷೆ, ಕುರುಚಲು ಗಡ್ಡ.. ದರ್ಶನ್ ಖಡಕ್ ಲುಕ್ ರಿವೀಲ್: 'ಕಾಟೇರ' ಎಕ್ಸ್ಕ್ಲೂಸಿವ್ ಮೇಕಿಂಗ್
ಡಿ ಬಾಸ್ ದರ್ಶನ್ ನಟನೆಯ ಬಹುನಿರೀಕ್ಷಿತ 'ಕಾಟೇರ' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಬರೀ ಮೋಷನ್ ಪೋಸ್ಟರ್ ಮಾತ್ರ ನೋಡಿದವರಿಗೆ ಇದೀಗ 'ಕಾಟೇರ'ನ ನಿಜವಾದ ದರ್ಶನವಾಗಿದೆ.
ರಾಕ್ಲೈನ್ ವೆಂಕಟೇಶ್ ಬ್ಯಾನರ್ನಲ್ಲಿ ನಿರ್ಮಾಣವಾಗಬೇಕಿದ್ದ 'ರಾಜಾ ವೀರಮದಕರಿ ನಾಯಕ' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಆ ಸಿನಿಮಾ ಬದಲು 'D56' ಸಿನಿಮಾ ಸೆಟ್ಟೇರಿತ್ತು. ಕೆಲ ದಿನಗಳ ಹಿಂದೆಯಷ್ಟೇ ಚಿತ್ರಕ್ಕೆ 'ಕಾಟೇರ' ಟೈಟಲ್ ಫಿಕ್ಸ್ ಆಗಿದೆ. ರಾಕ್ಲೈನ್ ಸ್ಟುಡಿಯೋ, ಹೈದರಾಬಾದ್ ಹಾಗೂ ಕನಕಪುರದಲ್ಲಿ ಚಿತ್ರದ ಒಂದಷ್ಟು ಸನ್ನಿವೇಶಗಳ ಚಿತ್ರೀಕರಣ ಮುಕ್ತಾಯವಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಮೊನ್ನೆ ಯುಗಾದಿಗೆ ನಾಯಕಿ ಪ್ರಭಾವತಿಯ ಪೋಸ್ಟರ್ ಬಂದಿತ್ತು.

ಸ್ಪೆಷಲ್ ವಿಡಿಯೋ ಮೂಲಕ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ಕೋರಿದೆ. 'ಕಾಟೇರ' ಸೆಟ್ನಲ್ಲಿ ರಾಕ್ಲೈನ್ ವೆಂಕಟೇಶ್ ಕಾಣಿಸಿಕೊಂಡಿರುವ ಝಲಕ್ಗಳನ್ನು ಕಟ್ ಮಾಡಿ ವಿಶೇಷವಾಗಿ ಸೂಪರ್ ಹಿಟ್ ಸಿನಿಮಾಗಳ ಸರದಾರನಿಗೆ ತಂಡ ವಿಡಿಯೋ ಡೆಡಿಕೇಟ್ ಮಾಡಿದೆ. "30 ವರ್ಷಗಳಿಂದ ಚಿತ್ರರಂಗದಲ್ಲಿರುವ ಪ್ರಮುಖ ಭಾಷೆಗಳಲ್ಲಿ 43 ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ, ವಿತರಕ, ಕನ್ನಡ ಚಿತ್ರರಂಗದ ಟ್ರಬಲ್ ಶೂಟರ್, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ರಾಕ್ಲೈನ್ ವೆಂಕಟೇಶ್ ಅವರಿಗೆ ಹುಟ್ಟುಹಬ್ಬ ಶುಭಾಶಯಗಳು" ಎಂದು ವಿಶ್ ಮಾಡಿದೆ.
ಸ್ಪೆಷಲ್ ವಿಡಿಯೋದಲ್ಲಿ 'ಕಾಟೇರ' ಚಿತ್ರದ ಮುಹೂರ್ತದ ಝಲಕ್ ಜೊತೆಗೆ ಸಿನಿಮಾ ಶೂಟಿಂಗ್ ಝಲಕ್ ಕೂಡ ಇದೆ. ಸೆಟ್ನಲ್ಲಿ ದರ್ಶನ್ 'ಕಾಟೇರ' ಲುಕ್ನಲ್ಲಿ ಕಾಣಿಸಿಕೊಂಡಿರೋದನ್ನು ನೋಡಬಹುದು. ಶರ್ಟ್ ಕೈ ಮಡಚಿ ಕುತ್ತಿಗೆಯಲ್ಲಿ ದೇವರ ಡಾಲರ್ ಜೊತೆಗೆ ಗಡ್ಡ ಬಿಟ್ಟು ಖಡಕ್ ಲುಕ್ನಲ್ಲಿರುವ ದರ್ಶನ್ನ ನೋಡಬಹುದು. ಸದ್ಯ ಈ ವಿಡಿಯೋವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ 'ಕಾಟೇರ'ನ ಗ್ರಾಫಿಕ್ಸ್ ಡಿಸೈನ್ ನೋಡಿದ್ದ ಅಭಿಮಾನಿಗಳು ಅಸಲಿ ಲುಕ್ ಈಗ ನೋಡಿ ಥ್ರಿಲ್ಲಾಗಿದ್ದಾರೆ.

ಇನ್ನು ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ 'ಕಾಟೇರ' ಸೆಟ್ಗೆ ಭೇಟಿ ನೀಡಿ ಸಿನಿಮಾ ರಶಸ್ ನೋಡಿದ್ದಾರೆ. ಬಹಳ ಅದ್ಧೂರಿಯಾಗಿ ಸೆಟ್ಗಳನ್ನು ಸಿನಿಮಾ ಸಿನಿಮಾ ಶೂಟಿಂಗ್ ಮಾಡುತ್ತಿರುವುದು ಗೊತ್ತಾಗುತ್ತಿದೆ. 70ರ ದಶಕದಲ್ಲಿ ಹಂಪಿಯಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಆಧರಿಸಿ 'ಕಾಟೇರ' ಸಿನಿಮಾ ನಿರ್ಮಾಣ ಆಗುತ್ತಿದೆ. ಜಡೇಶ್ ಹಂಪಿ- ತರುಣ್ ಸುಧೀರ್ ಚಿತ್ರಕ್ಕೆ ಕತೆ, ಚಿತ್ರಕಥೆ ಹೆಣೆದಿದ್ದಾರೆ. ತೆಲುಗು ನಟ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕ್ರಾಂತಿ' ನಂತರ ದರ್ಶನ್ 'ಕಾಟೇರ'ನಾಗಿ ಪ್ರೇಕ್ಷಕರು ಮುಂದೆ ಬರಲಿದ್ದಾರೆ.
ಸುಧಾಕರ್ ಕೆ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಕೋಟಿ ರಾಮು ಹಾಗೂ ಮಾಲಾಶ್ರೀ ದಂಪತಿ ಮಗಳು ರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಹಾಗಾಗಿ ಮಾಲಾಶ್ರೀ ಕೂಡ ಮಗಳ ಜೊತೆ 'ಕಾಟೇರ' ಶೂಟಿಂಗ್ ಸೆಟ್ಗೆ ಬರ್ತಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಿಟ್ಟರೆ ದರ್ಶನ್ ಐತಿಹಾಸಿಕ ಕಥಾಹಂದರದ ಸಿನಿಮಾದಲ್ಲಿ ನಟಿಸಿದ್ದು ಕಮ್ಮಿ. ಅದರಲ್ಲೂ ನೈಜ ಘಟನೆಗಳನ್ನಾಧರಿಸಿದ ಚಿತ್ರದಲ್ಲಿ ಮಚ್ಚು ಹಿಡಿದು ಖಡಕ್ ಲುಕ್ನಲ್ಲಿ ದರ್ಶನ ಕೊಡ್ತಿದ್ದಾರೆ. ಮಾಸ್ತಿ ಸಂಭಾಷಣೆ 'ಕಾಟೇರ'ನ ಖದರ್ ಮತ್ತಷ್ಟು ಹೆಚ್ಚಿಸುತ್ತಿದೆ. ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಸಾಹಸ ನಡೀತಿದೆ.


Click it and Unblock the Notifications











