Kaatera: ಭರ್ಜರಿ ಬೆಲೆಗೆ 'ಕಾಟೇರ' ಆಡಿಯೋ ರೈಟ್ಸ್ ಮಾರಾಟ: ಎಲ್ಲಿಗೆ ಬಂತು ಸಿನಿಮಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಭಾರೀ ಸದ್ದು ಮಾಡ್ತಿದೆ. ಚಿತ್ರದ 80ರಷ್ಟು ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಒಂದು ಮೇಜರ್ ಪೋರ್ಶನ್ ಜೊತೆಗೆ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಕೊನೆ ಶೆಡ್ಯೂಲ್ ಶೂಟಿಂಗ್ಗಾಗಿ ಚಿತ್ರತಂಡ ತಯಾರಿ ನಡೆಸುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ಆಡಿಯೋ ರೈಟ್ಸ್ ಬಗ್ಗೆ ಸುದ್ದಿ ಕೇಳಿಬರ್ತಿದೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ತರುಣ್ ಸುಧೀರ್ ಕಥೆ, ಚಿತ್ರಕಥೆ ಮಾಡಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ನಿಂದಲೇ ಸಿನಿಮಾ ಕುತೂಹಲ ಕೆರಳಿಸಿದೆ. ಯಾವುದೇ ಸುಳಿವು ಬಿಟ್ಟುಕೊಡದೇ ಸಿನಿಮಾವನ್ನು ತಿದ್ದಿ ತೀಡುವ ಚಿತ್ರತಂಡ ಕೆಲಸ ಮಾಡುತ್ತಿದೆ ಚಿತ್ರತಂಡ. ಇತ್ತೀಚೆಗೆ ದರ್ಶನ್ ಬ್ರಿಟನ್ ಪ್ರವಾಸ್ ಮುಗಿಸಿ ಬಂದಿದ್ದರು. ಶೀಘ್ರದಲ್ಲೇ ಮತ್ತೆ 'ಕಾಟೇರ' ಸೆಟ್ಗೆ ಎಂಟ್ರಿ ಕೊಡಲಿದ್ದಾರೆ.

'ಕಾಟೇರ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸುತ್ತಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಒಂದೊಳ್ಳೆ ತಂತ್ರಜ್ಞರು ಹಾಗೂ ಕಲಾವಿದರ ತಂಡ ಕಟ್ಟಿಕೊಂಡು ತರುಣ್ ಸುಧೀರ್ 'ಕಾಟೇರ'ನ ಆರ್ಭಟವನ್ನು ತೆರೆಗೆ ತರುತ್ತಿದ್ದಾರೆ.
ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗ ರೈತರು ಸರ್ಕಾರದ ವಿರುದ್ಧ ತಿರುಗಿ ಬಿದ್ದ ಘಟನೆಗಳನ್ನು ಆಧರಿಸಿ 'ಕಾಟೇರ' ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ 50 ವರ್ಷಗಳ ಹಿಂದಿನ ಕಥೆ ಹೇಳಲಾಗುತ್ತಿದ್ದು ಅಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ. ಚಿತ್ರದ ಆಡಿಯೋ ರೈಟ್ಸ್ನ ಆನಂದ್ ಆಡಿಯೋ ಸಂಸ್ಥೆ ಪಾಲಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಭಾರೀ ಮೊತ್ತಕ್ಕೆ ವ್ಯವಹಾರ ಕುದುರಿದೆ ಎನ್ನಲಾಗ್ತಿದೆ.
ತರುಣ್ ಸುಧೀರ್ ತಮ್ಮ ಹಿಂದಿನ ಸಿನಿಮಾ ಆಡಿಯೋ ರೈಟ್ಸ್ ಅನ್ನು ಆನಂದ್ ಆಡಿಯೋ ಸಂಸ್ಥೆಗೆ ನೀಡಿದ್ದರು. ರಾಕ್ಲೈನ್ ವೆಂಕಟೇಶ್ ಕೂಡ ತಮ್ಮ ಕೆಲ ಸಿನಿಮಾ ಆಡಿಯೋ ರೈಟ್ಸ್ ಇದೇ ಸಂಸ್ಥೆಗೆ ನೀಡಿದ್ದರು. ವಿ. ಹರಿಕೃಷ್ಣ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ದರ್ಶನ್- ಹರಿ ಕಾಂಬಿನೇಷನ್ ಆಲ್ಬಮ್ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲ. ಹಾಗಾಗಿ ಈ ಬಾರಿ ಕೂಡ ಒಳ್ಳೆ ಆಲ್ಬಮ್ ಮೂಡಿ ಬರುವ ನಿರೀಕ್ಷೆಯಿದೆ. ಇನ್ನು ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಇದೆ.
ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ಪಕ್ಕಾ ಹಳ್ಳಿ ಹೈದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೈತರ ದೃಷ್ಟಿಕೋನದಲ್ಲಿ, ಜಮೀನ್ದಾರರ ದೃಷ್ಟಿಕೋನದಲ್ಲಿ ಅಷ್ಟೇ ಅಲ್ಲ ಖಳರ ದೃಷ್ಟಿಕೋನದಲ್ಲಿ 'ಕಾಟೇರ'ನ ಕಥೆಯನ್ನು ಕಟ್ಟಿಕೊಡಲಾಗುತ್ತಿದೆ. ಒಂದು ಆಕ್ಷನ್ ಸೀನ್ ಸೇರಿದಂತೆ ಚಿತ್ರದ ಪ್ರಮುಖ ಸನ್ನಿವೇಶದ ಚಿತ್ರೀಕರಣ ಬಾಕಿಯಿದೆ.
'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ತಂಡ 'ಕಾಟೇರ'ನ ವೈಭವ ಕಟ್ಟಿಕೊಡುತ್ತಿದೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಸೆಟ್ಟೇರಿತ್ತು. ಈ ವರ್ಷ ವರಲಕ್ಷ್ಮಿ ಹಬ್ಬಕ್ಕೆ ಚಿತ್ರದ ಸ್ಪೆಷಲ್ ಅಪ್ಡೇಟ್ ಸಿಗುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಕಥೆಗಳ ಆಯ್ಕೆಯಲ್ಲಿ ಬಹಳ ಪ್ರಯೋಗ ಮಾಡುತ್ತಿದ್ದಾರೆ. ದರ್ಶನ್ರಂತಹ ಸ್ಟಾರ್ ನಟರು ಇಂತಾದೊಂದು ಕಥೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.
ದಸರಾ ವೇಳೆಗೆ 'ಕಾಟೇರ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ಈ ಹಿಂದೆ ರಾಕ್ಲೈನ್ ವೆಂಕಟೇಶ್ ಹೇಳಿದ್ದರು. ಆದರೆ ಅದು ಕಷ್ಟವಾಗುವಂತಿದೆ. ಇನ್ನು ಮಹತ್ವದ ಸನ್ನಿವೇಶಗಳ ಜೊತೆಗೆ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಹಾಗಾಗಿ ಈ ವರ್ಷಾಂತ್ಯ ಅಥವಾ ಮುಂದಿನ ವರ್ಷ ಆರಂಭದಲ್ಲಿ ತೆರೆಮೇಲೆ 'ಕಾಟೇರ'ನ ಆರ್ಭಟ ಶುರುವಾಗುವ ಸಾಧ್ಯತೆಯಿದೆ.
'ಕಾಟೇರ'ನಾಗಿ ದರ್ಶನ್ ಈ ವರ್ಷ ತೆರೆಮೇಲೆ ದರ್ಶನ ಕೊಡದಿದ್ದರೂ 'ಗರಡಿ' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯೋಗರಾಜ್ ಭಟ್ ನಿರ್ಮಾಣದ 'ಗರಡಿ' ಚಿತ್ರದ ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟಿಸಿದ್ದಾರೆ. ನವೆಂಬರ್ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ನಾಯಕ ಯಶಸ್ ಸೂರ್ಯ ಸಹೋದರನ ಪಾತ್ರದಲ್ಲಿ ದರ್ಶನ್ ನಟಿಸಿದ್ದು ಕುಸ್ತಿ ಉಸ್ತಾದ್ ಆಗಿ ಧೂಲೆಬ್ಬಿಸಲು ಬರುತ್ತಿದ್ದಾರೆ. ಬಿ. ಸಿ ಪಾಟೀಲ್ ಈ ಚಿತ್ರವನ್ನು ನಿರ್ಮಿಸಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











