ದರ್ಶನ್ ಹೊಸ ಚಿತ್ರಕ್ಕೆ ಆರಂಭದಲ್ಲೇ ಎದುರಾಯ್ತ ಸಂಕಷ್ಟ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ವಿವಾದದಲ್ಲಿ ಸಿಲುಕಿಕೊಂಡಿದ್ದು ತುಂಬಾ ಕಡಿಮೆ. ಆರಂಭದಿಂದಲೂ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇನ್ನೇನು ಥಿಯೇಟರ್ ಗೆ ಬರಬೇಕು ಎನ್ನುವಾಗ ಚಿತ್ರಗಳು ಸುದ್ದಿ ಮಾಡುತ್ತವೆ. ಆದರೆ ಈ ಬಾರಿ ದರ್ಶನ್ ಅಭಿನಯಿಸಬೇಕಿರುವ ಚಿತ್ರಕ್ಕೆ ಶುರುವಿನಲ್ಲೇ ಕಂಟಕ ಎದುರಾಗಿದೆ.
ದರ್ಶನ್ ಅಭಿನಯದ ಮುಂದಿನ ಚಿತ್ರ ಅಂದರೆ 'ಒಡೆಯರ್' ಸಿನಿಮಾಗೆ ಕಂಟಕ ಎದುರಾಗಿದೆ. ಟೈಟಲ್ ಅಷ್ಟೇ ಬಿಡುಗಡೆ ಮಾಡಿರುವ ಸಿನಿಮಾ ತಂಡದ ವಿರುದ್ದ ಜನರು ಕಿಡಿಕಾರಲು ಶುರು ಮಾಡಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರುವ ಒಡೆಯರ್ ಸಿನಿಮಾ ಸೆಟ್ಟೇರಲು ಬಿಡುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು ಶುರುವಾಗದ ಸಿನಿಮಾಗೆ ಕಂಟಕ ಶುರುವಾಗಲು ಕಾರಣವೇನು? ಒಡೆಯರ್ ಚಿತ್ರವನ್ನ ಜನರು ವಿರೋಧ ಮಾಡಲು ಕಾರಣವೇನು? ಅಷ್ಟಕ್ಕೂ ದರ್ಶನ್ ಚಿತ್ರದ ವಿರುದ್ದ ಪ್ರತಿಭಟಿಸಲು ನಿರ್ಧಾರ ಮಾಡಿದವರು ಯಾರು? ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ . ಮುಂದೆ ಓದಿ

ಒಡೆಯರ್ ಸಿನಿಮಾಗೆ ವಿರೋಧ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಬೇಕಿರುವ ಒಡೆಯರ್ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಒಡೆಯರ್ ಚಿತ್ರದ ಹೆಸರು ಬದಲಿಸದಿದ್ದರೆ ದರ್ಶನ್ ಮನೆ ಮುಂದೆ ಪ್ರತಿಭಟಿಸುವುದಾಗಿ ಕನ್ನಡ ಕ್ರಾಂತಿ ದಳದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ರಾಜವಂಶದ ಹೆಸರು ಕೈಬಿಡಿ
ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ದರ್ಶನ್ ತೂಗುದೀಪ್ ನಾಯಕ ನಟನಾಗಿ ಅಭಿನಯಿಸಬೇಕಿರುವ 'ಒಡೆಯರ್' ಚಲನಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಬೇಕು. ನಾಡು - ನುಡಿ ಸೇವೆಗಾಗಿ ಮೈಸೂರು ರಾಜವಂಶಸ್ಥರಾದ ಒಡೆಯರ್ ಕೊಡುಗೆ ಅಪಾರವಾಗಿದೆ. ಆದರೆ ಅವರ ಹೆಸರಿನಲ್ಲಿ ಕಮರ್ಷಿಯಲ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಖಂಡನೀಯ ವಿಚಾರ ಎನ್ನುವುದು ಕನ್ನಡ ಕ್ರಾಂತಿ ದಳದ ಅಭಿಪ್ರಾಯ.

ದರ್ಶನ್ ಮನೆ ಮುಂದೆ ಪ್ರತಿಭಟನೆ
ಮೈಸೂರಿನಲ್ಲಿ ಈ ವಿಚಾರವಾಗಿ ಕನ್ನಡ ಕ್ರಾಂತಿ ದಳದ ವತಿಯಿಂದ ಸುದ್ದಿಘೋಷ್ಠಿ ಮಾಡಲಾಗಿದೆ. ಚಿತ್ರಕ್ಕೆ ಒಡೆಯರ್ ಹೆಸರು ನೀಡಿ ವಾಣಿಜ್ಯ ಮಂಡಳಿಯು ತಪ್ಪು ಎಸಗಿದ್ದು, ಒಂದು ವಾರದೊಳಗೆ ಹೆಸರು ಬದಲಾಯಿಸಬೇಕು. ಇಲ್ಲವಾದಲ್ಲಿ ದರ್ಶನ್ ಮನೆಯ ಮುಂದೆಯೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸೆಟ್ಟೇರಬೇಕಿರುವ ಸಿನಿಮಾ
ದರ್ಶನ್ ಸದ್ಯ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ 'ಒಡೆಯರ್' ಚಿತ್ರ ಇನ್ನು ಆರಂಭ ಆಗಬೇಕಿದೆ. ಹುಟ್ಟುಹಬ್ಬಕ್ಕಾಗಿ ಒಡೆಯರ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎಂ ಡಿ ಶ್ರೀಧರ್ ಚಿತ್ರವನ್ನ ನಿರ್ದೇಶನ ಮಾಡುತ್ತಾರೆ.


Click it and Unblock the Notifications











