ದರ್ಶನ್ ಚಿತ್ರದ ಶೀರ್ಷಿಕೆ ಬಗ್ಗೆ ಆಕ್ಷೇಪ ಇಲ್ಲ ಎಂದ ರಾಜಮಾತೆ ಪ್ರಮೋದಾ ದೇವಿ 'ಒಡೆಯರ್'
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 52ನೇ ಸಿನಿಮಾ 'ಒಡೆಯರ್' ಸೆಟ್ಟೇರುವ ಮುನ್ನವೇ ವಿವಾದಕ್ಕೀಡಾಗಿದೆ.
''ಒಡೆಯರ್' ಎಂಬ ಪದ ಮೈಸೂರು ಅರಸರ ಸ್ವತ್ತು. ನಮಗೆ ಅವರ ಮೇಲೆ ಅಪಾರ ಗೌರವ, ಅಭಿಮಾನವಿದೆ. ನಮ್ಮ ನಾಡಿನ ನೆಲ-ಜಲ ವಿಚಾರದಲ್ಲಿ ಅವರ ಕೊಡುಗೆ ಅಪಾರ. ರೌಡಿಸಂ, ಹಾಸ್ಯ, ವ್ಯಾಪಾರಿ ಚಿತ್ರಗಳಿಗೆ 'ಒಡೆಯರ್' ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರೀಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಸುತ್ತಿದ್ದೇವೆ'' ಎಂದು ಚಿತ್ರತಂಡದ ವಿರುದ್ಧ ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿತ್ತು.
ಇನ್ನೂ ಅರಸು ಯುವಜನ ವೇದಿಕೆ ಕೂಡ 'ಒಡೆಯರ್' ಅಂತ ಶೀರ್ಷಿಕೆ ಇಟ್ಟಿರುವ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿವಾದದ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿರಿ...

'ಒಡೆಯರ್' ಶೀರ್ಷಿಕೆ ವಿವಾದದ ಬಗ್ಗೆ ರಾಜಮಾತೆ ಮಾತು
ವಿಶ್ವವಿದ್ಯಾಲಯ ಹಾಗೂ ಪ್ರಾಚ್ಯವಸ್ತು ಸಂಶೋಧನಾಲಯಗಳ ಸಹಯೋಗದಲ್ಲಿ ಆಯೋಜಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 225ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು. ಇದೇ ವೇಳೆ ದರ್ಶನ್ ಅಭಿನಯದ 'ಒಡೆಯರ್' ಸಿನಿಮಾದ ಶೀರ್ಷಿಕೆ ಕುರಿತು ಪ್ರತಿಕ್ರಿಯೆ ನೀಡಿದರು.

ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ, ಆಕ್ಷೇಪ ಇದೆ.!
''ಸಿನಿಮಾಗೆ 'ಒಡೆಯರ್' ಎಂದು ಹೆಸರಿಟ್ಟಿರಿವುದಕ್ಕೆ ನಮಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನನ್ನ ಆಕ್ಷೇಪವಿದೆ'' ಎಂದಿದ್ದಾರೆ ಪ್ರಮೋದಾ ದೇವಿ ಒಡೆಯರ್.

ಬಳುವಳಿಯಾಗಿ ಬಂದ ಹೆಸರು 'ಒಡೆಯರ್'
''ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದದ್ದು. ಒಡೆಯರ್ ಹೆಸರು ತುಂಬಾ ಜನ ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಬಂದರೆ ಅದಕ್ಕೆ ಆಕ್ಷೇಪವಿದೆ. ಈ ವಿಚಾರದಲ್ಲಿ ಒಡೆಯರ್ ಅಭಿಮಾನಿಗಳು ಕೊಟ್ಟಿರುವ ದೂರು ನನ್ನ ಗಮನಕ್ಕೆ ಬಂದಿಲ್ಲ'' ಎಂದು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟ ಪಡಿಸಿದರು.

ಆಗಸ್ಟ್ 16 ರಂದು 'ಒಡೆಯರ್' ಮುಹೂರ್ತ
ಶೀರ್ಷಿಕೆ ವಿವಾದದ ಬಗ್ಗೆ 'ಒಡೆಯರ್' ಚಿತ್ರತಂಡ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ರೆ, ಆಗಸ್ಟ್ 16 ರಂದು 'ಒಡೆಯರ್' ಸಿನಿಮಾದ ಮುಹೂರ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಗದಿ ಆಗಿದೆ. 'ವೀರಂ' ಚಿತ್ರದ ರೀಮೇಕ್ ಇದಾಗಿದ್ದು, ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರದ ನಿರ್ಮಾಪಕ.


Click it and Unblock the Notifications











