ರಣಧೀರನಿಗೆ ದರ್ಶನ್, ಸುದೀಪ್, ಪುನೀತ್ ಸಾಥ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೆ ಪ್ರೇಮಲೋಕ ದಿನಗಳಿಗೆ ಹೊರಳಿದ್ದಾರೆ. ತಮ್ಮ ಪುತ್ರ ಆರ್ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಅದ್ದೂರಿ ಚಿತ್ರ 'ರಣಧೀರ' ಚಿತ್ರ ಸೆಟ್ಟೇರಿದೆ. ತಮ್ಮ ಕನಸಿನ ಬಗ್ಗೆ ರವಿಚಂದ್ರನ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಸರಿಸುಮಾರು 180 ದಿನಗಳ ಕಾಲ ಅಂದರೆ ಆರು ತಿಂಗಳ ಕಾಲ 'ರಣಧೀರ' ಚಿತ್ರೀಕರಣ ನಡೆಯಲಿದೆ. ಯಾಕಿಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಮಧ್ಯೆಮಧ್ಯೆ ತಮ್ಮ ಮಂಜಿನಹನಿ ಚಿತ್ರದ ಕೆಲಸಗಳೂ ನಡೆಯಬೇಕಲ್ಲವೆ ಎನ್ನುತ್ತಾರೆ ರವಿಚಂದ್ರನ್.
ಒಂದೇ ಒಂದು ಹಾಡಿನ ಚಿತ್ರೀಕರಣಕ್ಕಾಗಿ ರವಿಚಂದ್ರನ್ ಅವರು ನೈಸ್ ರಸ್ತೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸೆಟ್ ಹಾಕಿ ಅದ್ದೂರಿಯಾಗಿಯೇ ತಮ್ಮ ಪುತ್ರನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಚಿತ್ರರಂಗದ ಗಣ್ಯರು ಈ ಅದ್ದೂರಿ ಕಾರ್ಯಕ್ರಮಕ್ಕೆ ಬರದಿದ್ದರೂ ದೂರದಿಂದಲೇ ರವಿ ಅವರ ಕನಸು ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದ್ದಾರೆ.

ಸುದೀಪ್, ದರ್ಶನ್, ಪುನೀತ್ ಸಾಥ್
ಇನ್ನು ಕನ್ನಡ ಚಿತ್ರರಂಗದ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಈ ಚಿತ್ರಕ್ಕೆ ಕೈಜೋಡಿಸುವುದಾಗಿ ಹೇಳಿದ್ದಾರೆ.

ತಾರೆಗಳ ಬೆಂಬಲಕ್ಕೆ ಮನಸೋತ ರವಿ
ಸಾಧ್ಯವಾದರೆ 'ರಣಧೀರ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುವುದಾಗಿಯೂ ಹೇಳಿದ್ದಾರೆ. ಆದರೆ ಸದ್ಯಕ್ಕೆ ರವಿಚಂದ್ರನ್ ಅವರಿಗೆ ಈ ಬಗ್ಗೆ ಏನೂ ಐಡಿಯಾ ಇಲ್ಲದೆ ಇರುವುದರಿಂದ ಅವರು ಸುದೀಪ್, ದರ್ಶನ್ ಹಾಗೂ ಪುನೀತ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರಾ?
ಪ್ರೇಮಲೋಕ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಅವರು ಅತಿಥಿ ಪಾತ್ರ ಪೋಷಿಸಿದ್ದರು. ಇದೀಗ ರಣಧೀರ ಚಿತ್ರದಲ್ಲಿ ಸುದೀಪ್, ದರ್ಶನ್ ಹಾಗೂ ಪುನೀತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಹಂಸಲೇಖ ಸೂಚನೆ ಸಲಹೆಗಳೂ ಇವೆ
ಇನ್ನು ಕಥೆಯ ವಿಚಾರದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಸಾಥ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ವಿ ಹರಿಕೃಷ್ಣ ಅವರೊಂದಿಗೂ ಹಂಸಲೇಖ ಅವರು ಕೈಜೋಡಿಸಿ ಸೂಚನೆ ಸಲಹೆಗಳನ್ನು ನೀಡುತ್ತಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿರುತ್ತವೆ.

ಜೂಹಿ ಚಾವ್ಲಾ ಅಭಿನಯಿಸಲಿದ್ದಾರೆ
ಇನ್ನು ಜೂಹಿ ಚಾವ್ಲಾ ಅವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಒಂದು ವೇಳೆ ಅವರು ಚಿತ್ರದಲ್ಲಿ ಬಣ್ಣಹಚ್ಚಿದರೆ ಮನೋರಂಜನ್ ಅವರ ತಾಯಿಯಾಗಿ ಕಾಣಿಸಲಿದ್ದಾರೆ.


Click it and Unblock the Notifications











