ದರ್ಶನ್-ಸುದೀಪ್ 'ಮದಕರಿ'ಗೂ ಮೊದಲೇ ಸೆಟ್ಟೇರಲಿದೆ 'ಬಿಚ್ಚುಗತ್ತಿ'
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ 'ಮದಕರಿ ನಾಯಕ'ನ ಬಗ್ಗೆ ಸಿನಿಮಾ ಮಾಡುವ ಕುರಿತು ದೊಡ್ಡ ಚರ್ಚೆಯಾಗಿತ್ತು. ಈ ಇಬ್ಬರು ನಟರು ಮದಕರಿ ನಾಯಕನ ಬಯೋಪಿಕ್ ಮಾಡುವುದಾಗಿ ಘೋಷಿಸಿದ್ದಾರೆ.
ಆದ್ರೆ, ಈ ಎರಡು ಚಿತ್ರಗಳಿಗೂ ಮುಂಚೆ ಚಿತ್ರದುರ್ಗದ ಮತ್ತೊಬ್ಬ ಪಾಳೆಗಾರನ ಕುರಿತು ಇನ್ನೊಂದು ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುತ್ತಿದೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ಸ್ವತಃ ದರ್ಶನ್ ಅವರೇ ಸಾಥ್ ನೀಡುತ್ತಿದ್ದಾರೆ.
ಡಿಸೆಂಬರ್ 10 ರಂದು ಈ ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಇದು ಕೂಡ ಬಿಎಲ್ ವೇಣು ರಚಿಸಿರುವ ಕಾದಂಬರಿ ಆಧರಿತವಾಗಿಯೇ ಸಿದ್ಧವಾಗುತ್ತಿದೆ. ಅಷ್ಟಕ್ಕೂ, ಈ ಸಿನಿಮಾ ಯಾವುದು? ಯಾರು ನಾಯಕ ಎಂದು ತಿಳಿಯಲು ಮುಂದೆ ಓದಿ....

'ಬಿಚ್ಚುಗತ್ತಿ' ಸಿನಿಮಾ ಆರಂಭ
'ಕಾಲೇಜ್ ಕುಮಾರ', ವಿಕ್ಟರಿ-2, ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವನ್ನ ಕೈಗೆತ್ತಿಕೊಂಡಿದ್ದು, ಚಿತ್ರದುರ್ಗದ ಪಾಳೆಗಾರರಲ್ಲಿ ಒಬ್ಬರಾದ 'ಬಿಚ್ಚುಗತ್ತಿ ಭರಮಣ್ಣ ನಾಯಕ'ನ ಆಧರಿತ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿಚ್ಚುಗತ್ತಿ ಎಂದು ಟೈಟಲ್ ಕೂಡ ಅಂತಿಮ ಮಾಡಲಾಗಿದೆ. ವಿಶೇಷ ಅಂದ್ರೆ, ಈ ಸಿನಿಮಾಗೆ ನಟ ದರ್ಶನ್ ಚಾಲನೆ ನೀಡಲಿದ್ದಾರೆ.

ರಾಜವರ್ಧನ್ ಮತ್ತು ಹರಿಪ್ರಿಯಾ
ಹಿರಿಯ ನಟ ಡಿಂಗ್ರಿನಾಗರಾಜ್ ಅವರ ಮಗ ರಾಜವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಚಿತ್ರದಲ್ಲಿ ರಾಜವರ್ಧನ್ ಗೆ ನಟಿ ಹರಿಪ್ರಿಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಇದಕ್ಕಾಗಿ ನಾಯಕನಟ ಬಹಳ ತಯಾರಿ ಕೂಡ ಮಾಡಿಕೊಂಡಿದ್ದಾರೆ.

ಡಾ ಬಿಎಲ್ ವೇಣು ಕಾದಂಬರಿ
ವಿಶೇಷ ಅಂದ್ರೆ, ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಕಥೆ ಬರೆದಿರುವ ಬಿಎಲ್ ವೇಣು ಅವರೇ ಬಿಚ್ಚುಗತ್ತಿ ಚಿತ್ರಕ್ಕೂ ಕಥೆ ನೀಡಿದ್ದಾರೆ. ಅಂದ್ರೆ, ವೇಣು ಬರೆದಿರುವ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿಯನ್ನ ಆಧರಿಸಿ ಸಿನಿಮಾ ಮಾಡಲಾಗ್ತಿದೆ. ಚಿತ್ರದ ಬಹುತೇಕ ಶೂಟಿಂಗ್ ಚಿತ್ರದುರ್ಗ ಮತ್ತು ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ.

ಹಂಸಲೇಖ ಮಾಡಬೇಕಿತ್ತು
ಅಂದ್ಹಾಗೆ, ಬಹಳ ದಿನಗಳ ಹಿಂದೆಯೇ ಈ ಸಿನಿಮಾ ಸುದ್ದಿಯಾಗಿತ್ತು. ಈ ಚಿತ್ರವನ್ನ ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶನ ಮಾಡುವುದಾಗಿ ವರದಿಯಾಗಿತ್ತು. ಡಿಂಗ್ರಿನಾಗರಾಜ್ ಅವರ ಮಗ ರಾಜವರ್ಧನ್ ಅವರೇ ಈ ಚಿತ್ರದ ನಾಯಕ ಎನ್ನಲಾಗಿತ್ತು. ಆದ್ರೆ, ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ಅದೇ ಚಿತ್ರ, ಅದೇ ನಾಯಕನ ಜೊತೆ ಹರಿ ಸಂತೋಷ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ನೀಡುತ್ತಿದ್ದಾರೆ.

ಚಾಪ್ಟರ್ 2 ಬರ್ತಿದೆ
ಚಿತ್ರದುರ್ಗವನ್ನ 1568ರಿಂದ 1779ರವರೆಗೆ ಆಳಿದ 13 ಮಂದಿ ಪಾಳೆಗಾರರಲ್ಲಿ, ಪ್ರಥಮ ಪಾಳೇಗಾರ ರಾಜಾ ಬಿಚ್ಚುಮತ್ತಿ ತಿಮ್ಮಣ್ಣ ನಾಯಕ. ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ. ಹೆಬ್ಬುಲಿ ಹಿರೇಮದಕರಿ ನಾಯಕ ಹಾಗೂ ಗಂಡುಗಲಿ ಮದಕರಿ ನಾಯಕ. ಇವರ ಆಡಳಿತ ನಿರಾತಂಕವಾಗಿ ನಡೆಯಿತಾದರೂ 1675ರಿಂದ 1685 ಅವಧಿಯಲ್ಲಿ ದಳವಾಯಿಯಾಗಿದ್ದ ಪಂಚಮರ ಮುದ್ದಣ್ಣನ ಇಡೀ ಸೇನೆಯನ್ನ ತನ್ನ ವಶದಲ್ಲಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೇಗಾರರನ್ನ ಸಿಂಹಾಸನದಲ್ಲಿ ಕೂರಿಸಿ ದೊರೆಯನ್ನ, ದುರ್ಗದ ಪ್ರಜೆಗಳನ್ನ ದರ್ಪ ದೌರ್ಜನ್ಯಗಳಿಂದ ಹಿಂಸಿಸುತ್ತಾ ತಾನೇ ಆಡಳಿತ ನಡೆಸಲಾರಂಭಿಸಿದ. 1686ರಲ್ಲಿ ಪಟ್ಟವನ್ನೇರಿದ ದೊರೆ ಲಿಂಗಣ್ಣ, ನಾಯಕ ಮುದ್ದಣ್ಣನನ್ನ ವಿರೋಧಿಸಿದ್ದರಿಂದಾಗಿ ದಳವಾಯಿ ದಂಗೆಗೆ ಕಾರಣವಾಯಿತು. ಆ ಕಾಲಘಟ್ಟದ ಕಥೆಯೇ ಬಿಚ್ಚುಗತ್ತಿ. ಇದು ಎರಡು ಚಾಪ್ಟರ್ ಗಳಲ್ಲಿ ಬರಲಿದೆ.


Click it and Unblock the Notifications











