'ಬನಾರಸ್' ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು
ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸಿರುವ ಮೊದಲ ಸಿನಿಮಾ 'ಬನಾರಸ್'ನ ಪ್ರೀ ರಿಲೀಸ್ ಇವೆಂಟ್ ಇಂದು (ಅಕ್ಟೋಬರ್ 22) ರಂದು ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಿನಿಮಾದ ಬಗ್ಗೆ ಹಾಗೂ ಝೈದ್ ಖಾನ್, ಅವರ ತಂದೆ ಜಮೀರ್ ಅಹ್ಮದ್ ಬಗ್ಗೆ ಮಾತನಾಡಿದರು.
ತಮ್ಮ ಎಂದಿನ ಶೈಲಿಯಲ್ಲಿ, ವೇದಿಕೆ ಮೇಲೆ ಚಪ್ಪಲಿ ಬಿಟ್ಟು, ತಮ್ಮ ಅಭಿಮಾನಿಗಳಿಗೆ 'ಸೆಲೆಬ್ರಿಟಿ' ಎಂದು ಸಂಭೋದಿಸುತ್ತಾ ಎಲ್ಲಿರಗೂ ನಮಸ್ಕಾರ ಹೇಳಿ ಭಾಷಣ ಶುರು ಮಾಡಿದ ನಟ ದರ್ಶನ್, 'ಬನಾರಸ್' ಸಿನಿಮಾದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾಷಣದ ಆರಂಭದಲ್ಲಿಯೇ ಝೈದ್ ಖಾನ್ ಅನ್ನು ಪ್ರೀತಿಯಿಂದ ಬೈದ ದರ್ಶನ್, ''ಝೈದ್ ಖಾನ್ ಬೆನ್ನಿಗೆ ಅಂಟಿದ ಬೇತಾಳ. ಯಾವಾಗಲೋ ಒಮ್ಮೆ 'ಬನಾರಸ್' ಸಿನಿಮಾ ನೋಡ್ತೀನಿ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಸಿನಿಮಾ ನೋಡುವಂತೆ ಒತ್ತಾಯ ಮಾಡಿದ. ಒಮ್ಮೆ 'ಕ್ರಾಂತಿ' ಸಿನಿಮಾದ ಫೈಟ್ ದೃಶ್ಯ ಶೂಟಿಂಗ್ ಮುಗಿಸಿ ಸುಸ್ತಾಗಿ ಬಂದು ಜಿಮ್ ಮಾಡಿ ಮಲಗೋಣವೆಂದು ಬಂದರೆ ಅಲ್ಲಿ ಝೈದ್ ಕೂತಿದ್ದ'' ಎಂದು ನೆನಪು ಮಾಡಿಕೊಂಡರು.

ಸಿನಿಮಾ ನೋಡುತ್ತಾ, ನಿದ್ದೆಯೇ ಹೊರಟು ಹೋಯಿತು: ದರ್ಶನ್
''ಸಿನಿಮಾ ನೋಡಲು ಚಿತ್ರಮಂದಿರ ಬುಕ್ ಮಾಡಿದ್ದೇನೆ ಎಂದ. ರಾಜಕಾರಣಿ ಮಗ, ಏನೋ ಶೋಕಿಗೆ ಸಿನಿಮಾ ಮಾಡಿರ್ತಾನೆ ಬಿಡು ಎಂದುಕೊಂಡು ಅಲ್ಲೇ ಊಟ ಮಾಡಿ, ಚಿತ್ರಮಂದಿರದಲ್ಲೇ ನಿದ್ದೆ ಮಾಡಿಬಿಡೋಣ ಅಂದುಕೊಂಡು ಹೋದೆ. ಚಿತ್ರಮಂದಿರಕ್ಕೆ ಹೋಗುವ ಮುನ್ನ ಚೆನ್ನಾಗಿ ಊಟ ಮಾಡಿದೆ. ಆದರೆ ಚಿತ್ರಮಂದಿರಕ್ಕೆ ಹೋದ ಮೇಲೆ ನನಗೆ ನಿದ್ದೆಯೇ ಹೊರಟು ಹೋಯಿತು. ಆ ಸಿನಿಮಾ ಅಷ್ಟು ಚೆನ್ನಾಗಿತ್ತು'' ಎಂದರು ದರ್ಶನ್.

ಇದು ಕಂಟೆಂಟ್ ಇರುವ ಸಿನಿಮಾ: ದರ್ಶನ್
''ಎಲ್ಲರೂ ಹೇಳುತ್ತಿದ್ದಾರೆ ಕಂಟೆಂಟ್ ಇರುವ ಸಿನಿಮಾ ಬೇಕು ಎಂದು. ಇದು ನಿಜವಾಗಿಯೂ ಕಂಟೆಂಟ್ ಇರುವ ಸಿನಿಮಾ. ಝೈದ್ ಖಾನ್, ಏನೇನೋ ಟ್ರೈ ಮಾಡುವ ಬದಲಿಗೆ, ಸರಳವಾಗಿ ಅವನಿಗೆ ಏನು ಬರುತ್ತದೆಯೋ ಅದನ್ನು ಮಾಡಿದ್ದಾನೆ. ನಿರ್ದೇಶಕ ಜಯತೀರ್ಥ ಸಹ ಚೆನ್ನಾಗಿ ಕತೆಯನ್ನು ಹಾಗೂ ನಟರನ್ನು ಹ್ಯಾಂಡಲ್ ಮಾಡಿದ್ದಾರೆ. ಸೋನಲ್ ಮೊಂಥಾರೊ ಸಹ ಮುದ್ದಾಗಿ ಕಾಣ್ತಾರೆ. ದೇವರಾಜ್ ಅಪ್ಪಾಜಿ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಕ್ಯಾಮೆರಾ ಕೆಲಸ, ಹಾಡುಗಳು ಸಹ ಅದ್ಭುತವಾಗಿ ಮೂಡಿಬಂದಿವೆ'' ಎಂದು ಹೊಗಳಿದರು ದರ್ಶನ್.

ಸಿನಿಮಾ ನೋಡಿ ಇಷ್ಟವಾಗಿದ್ದಕ್ಕೆ ಇಲ್ಲಿಗೆ ಬಂದೆ: ದರ್ಶನ್
''ನಾನು ಇಲ್ಲಿ ಬಂದು ನಿಂತು ಸಿನಿಮಾ ಬಗ್ಗೆ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಆ ಸಿನಿಮಾದ ಕಂಟೆಂಟ್. ಸಿನಿಮಾ ನೋಡದೆ ಬಂದು, ಸಿನಿಮಾ ಹಾಗಿದೆ, ಹೀಗಿದೆ ಎಂದು ನಾನು ಮಾತಾಡೊಲ್ಲ. ನನಗೆ ಸಿನಿಮಾ ಇಷ್ಟವಾಯಿತು ಹಾಗಾಗಿ ಬಂದಿದ್ದೇನೆ. ಝೈದ್ ಖಾನ್, ಸಹ ಹೊಸ ನಟನಂತೆ ಅಲ್ಲದೆ, ನಾಲ್ಕೈದು ಸಿನಿಮಾ ನಟಿಸಿ ಅನುಭವವಿರುವ ನಟನಂತೆ ನಟಿಸಿದ್ದಾನೆ. ಅವನಿಗೆ ಒಳ್ಳೆಯದಾಗಬೇಕು'' ಎಂದರು ದರ್ಶನ್.

ಜಮೀರ್ ಅಹ್ಮದ್ ನನಗೆ ಅಣ್ಣನಂತೆ: ದರ್ಶನ್
''ನಾನು ಇಲ್ಲಿಗೆ ಬರಲು ಮತ್ತೊಂದು ಕಾರಣವೆಂದರೆ ಅದು ಜಮೀರ್ ಅಹ್ಮದ್ ಅಣ್ಣನವರು. ಅವರು ನನ್ನ ಅಣ್ಣನಂತೆ. ಅವರು ರಾಜಕಾರಣಿ ಆಗಿದ್ದರೂ ಸಹ ನನ್ನ ಬಳಿ ಎಂದೂ ರಾಜಕಾರಣ ಮಾತನಾಡೊಲ್ಲ. ಅವರು ತಮ್ಮ ಮಗನಿಗಾಗಿ ಸಿನಿಮಾ ಮಾಡಿಲ್ಲ. ಅವನ ಶೋಕಿಗಾಗಿ ಸಿನಿಮಾ ಮಾಡಿಲ್ಲ, ಬದಲಿಗೆ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಿನಿಮಾ ನೋಡಿದ ಮೇಲೆ ನೀವೇ ಹೇಳುತ್ತೀರ. ಇನ್ನೊಮ್ಮೆ ನೋಡೋಣ ಎಂದು. ಎಲ್ಲರೂ ಸಿನಿಮಾ ನೋಡಿ. ಎಲ್ಲರಿಗೂ ದೀಪಾವಳಿ ಶುಭಾಷಯಗಳು'' ಎಂದು ಮಾತು ಮುಗಿಸಿದರು ನಟ ದರ್ಶನ್.


Click it and Unblock the Notifications











