ಕೋಟಿ ಕೋಟಿ ನಷ್ಟ.. ವೃತ್ತಿಜೀವನಕ್ಕೆ ಮರಣಗಂಟೆ.. ಜೈಲಿನಲ್ಲಿರುವ ದರ್ಶನ್ ಅಳಲು
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಸೇರಿ 8 ತಿಂಗಳು ಕಳೆದಿದೆ. ಸದ್ಯಕ್ಕೆ ಟ್ರಯಲ್ ಮುಗಿದು ತೀರ್ಪು ಬರುವ ಸುಳಿವು ಸಿಕ್ತಿಲ್ಲ. ಇದೇ ಕಾರಣಕ್ಕೆ ದರ್ಶನ್ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ಅರ್ಜಿ ವಿಚಾರಣೆ ನಡೆದು ಪ್ರಕರಣದ ಟ್ರಯಲ್ ಮಾಹಿತಿ ಹಾಗೂ ಜೈಲಿನಲ್ಲಿ ದರ್ಶನ್ಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸುಪ್ರೀಂ ಮಾಹಿತಿ ಕೇಳಿ ವಿಚಾರಣೆ ಮುಂದೂಡಿದೆ.
ನಟ ದರ್ಶನ್ ಜಾಮೀನು ಅರ್ಜಿಯಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳು ಅಡ್ವಾನ್ಸ್ ಪಡೆದಿದ್ದೇನೆ. ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣಗಂಟೆಯಾಗಲಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ ದರ್ಶನ್ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವುದು ಎನ್ನುವುದನ್ನು ನೋಡುವುದಾದರೆ ಮೊದಲಿಗೆ ನೆನಪಿಗೆ ಬರುವುವು ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರೇಮ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾ ಘೋಷಣೆ ಆಗಿತ್ತು. ಇದು ದರ್ಶನ್ ನಟನೆಯ 58ನೇ ಸಿನಿಮಾ, ಹಾಗಾಗಿ D58 ಎಂದು ಕರೆಯಲಾಗಿತ್ತು. ಟೈಟಲ್ ಫಿಕ್ಸ್ ಆಗಿರಲಿಲ್ಲ. ಎರಡು ವರ್ಷಗಳ ಹಿಂದೆ ದರ್ಶನ್ ಹುಟ್ಟುಹಬ್ಬಕ್ಕೆ ಸಣ್ಣ ಡೈಲಾಗ್ ಟೀಸರ್ ಕೂಡ ಬಂದಿತ್ತು. ಈ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ಕೂಡ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅಷ್ಟರಲ್ಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಎದುರಿಸುವಂತಾಗಿತ್ತು.
'ಡೆವಿಲ್' ಒಂದು ಶೆಡ್ಯೂಲ್ ಬಳಿಕ ದರ್ಶನ್ ಜೈಲಿಗೆ ಹೋಗಿದ್ದರು. ಜಾಮೀನು ಪಡೆದು ಬಂದು ಆ ಸಿನಿಮಾ ಮುಗಿಸಿದ್ದರು. ರಿಲೀಸ್ ಡೇಟ್ ಘೋಷಣೆ ಆಗುವ ವೇಳೆಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲಿಗೆ ಹೋಗುವಂತಾಯಿತು. ಇನ್ನು 'D58' ಮಾತ್ರವನ್ನು ಸಿಂಧೂರ ಲಕ್ಷ್ಮಣ ಜೀವನಾಧರಿತ ಚಿತ್ರದಲ್ಲಿ ಕೂಡ ದರ್ಶನ್ ನಟಿಸಬೇಕಿತ್ತು. ತರುಣ್ ಸುಧೀರ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದರು. ದರ್ಶನ್ ಜೊತೆ 'ಯಜಮಾನ' ಹಾಗೂ 'ಕ್ರಾಂತಿ' ಸಿನಿಮಾಗಳನ್ನು ನಿರ್ಮಿಸಿದ್ದ ಮೀಡಿಯಾಂ ಹೌಸ್ ಸಂಸ್ಥೆ ಬಂಡವಾಳ ಹೂಡಲು ಮುಂದಾಗಿತ್ತು.

ಈ ಎರಡು ಸಿನಿಮಾಗಳ ಜೊತೆಗೆ ಮತ್ತಷ್ಟು ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆದಿತ್ತು. ಕೆಲವರಿಂದ ಅಡ್ವಾನ್ಸ್ ಪಡೆದು ಸಿನಿಮಾದಲ್ಲಿ ನಟಿಸುವುದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ಜಗ್ಗುದಾದ' ನಿರ್ದೇಶಕ ರಾಘವೇಂದ್ರ ಹೆಗ್ಡೆ ಜೊತೆಗೆ ಮತ್ತೊಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾ ಮಾಡಲು ಮಾತುಕತೆ ನಡೆಸಿ ಅಡ್ವಾನ್ಸ್ ಪಡೆದಿದ್ದರು. ಆದರೆ ಅದನ್ನು ವಾಪಸ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರ ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ನಿರ್ಮಾಣದಲ್ಲಿ ದರ್ಶನ್ ಸಿನಿಮಾ ಮಾಡುವುದಾಗಿಯೂ ಚರ್ಚೆ ನಡೆದಿತ್ತು. ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಹಾಗೂ ತೆಲುಗಿನ ಮತ್ತೊಬ್ಬ ನಿರ್ಮಾಪಕ ರಘುನಾಥ್ ಕೂಡ ದರ್ಶನ್ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದರು. ಒಂದು ಸಿನಿಮಾ ಮುಗಿಯುವವರೆಗೆ ಮತ್ತೊಂದು ಸಿನಿಮಾ ದರ್ಶನ್ ಒಪ್ಪಿಕೊಳ್ಳಲ್ಲ. ಹಾಗಾಗಿ ಸಾಕಷ್ಟು ನಿರ್ಮಾಪಕರು ಅವರೊಟ್ಟಿಗೆ ಸಿನಿಮಾ ಮಾಡಲು ಬಯಸಿದರೂ ಅವಕಾಶ ಸಿಗುತ್ತಿರಲಿಲ್ಲ.
ಕೆವಿಎನ್ ಸಂಸ್ಥೆ 6 ಕೋಟಿ ರೂ. ಅಡ್ವಾನ್ಸ್ ದರ್ಶನ್ಗೆ ಕೊಟ್ಟಿರುವುದಾಗಿ ಹೇಳಲಾಗ್ತಿದೆ. ಇದೀಗ ಸಿನಿಮಾ ಚಿತ್ರೀಕರಣ ಸಾಧ್ಯವಾಗದೇ ಇರುವುದು, ಯಾವಾಗ ಎಂದು ಅಂದಾಜು ಇಲ್ಲದಂತಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ದರ್ಶನ್ ಬಳಲುತ್ತಿದ್ದಾರೆ. ಹಾಗಾಗಿ ಚಿತ್ರೀಕರಣ ಕೂಡ ಕಷ್ಟವಾಗುತ್ತಿದೆ. ಇದೆಲ್ಲದರ ಬಗ್ಗೆ ಯೋಚಿಸಿ ದರ್ಶನ್ ವೃತ್ತಿಜೀವನದ ಬಗ್ಗೆ ಆತಂಕ ವ್ಯಕ್ತಪಡಿಸಿ ಜಾಮೀನು ಕೇಳಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈಗ ಸುಪ್ರೀಂ ನಿರ್ಧಾರ ಬದಲಿಸುತ್ತಾ ಕಾದು ನೋಡಬೇಕಿದೆ.


Click it and Unblock the Notifications