ತಮ್ಮ ಪ್ರೀತಿಯ ಸೆಲೆಬ್ರೆಟಿಗಳಿಗೆ ಕೈಮುಗಿದು ಧನ್ಯವಾದ ತಿಳಿಸಿದ ನಟ ದರ್ಶನ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಮುಂದುವರೆದಿದೆ. ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆ ಆಗಿ ದರ್ಶನ್ ಹೊರ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಆ ಬಗ್ಗೆ ಯಾವುದೇ ಸುಳಿವು ಸದ್ಯಕ್ಕೆ ಸಿಗುತ್ತಿಲ್ಲ. ಪ್ರಕರಣ ವಿಚಾರಣೆ ಮುಂದುವರೆದು ಮುಂದಿನ ಬೆಳೆವಣಿಗೆಯಲ್ಲಿ ಜಾಮೀನು ಸಿಗಬಹುದು ಎನ್ನುವುದು ಕೆಲವರ ವಾದ. ಈ ಬಾರಿ ಜೈಲಿನಲ್ಲಿಯೇ ದರ್ಶನ್ ಹುಟ್ಟುಹಬ್ಬ ಆಚರಿಸುವಂತಾಯಿತು.
ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಸಮಾಜಮುಖಿ ಕೆಲಸಗಳ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಾರೆ. ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಅಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ ಎಂದು ಧನ್ವೀರ್ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ದರ್ಶನ್ ಹುಟ್ಟುಹಬ್ಬದ ದಿನ ಕೆಲ ಅಭಿಮಾನಿಗಳು ಆರ್ಆರ್ ನಗರದ ತೂಗುದೀಪ ನಿವಾಸದ ಬಳಿಕ ಹೋಗಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುವ ಪ್ರಯತ್ನ ಮಾಡಿದ್ದರು. ಆದರೆ ಬಹುತೇಕರು ದಾನ, ಧರ್ಮದಂತಹ ಒಳ್ಳೆ ಕಾರ್ಯಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಂತಹವರಿಗೆ ದರ್ಶನ್ ಧನ್ಯವಾದ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲ ದಿನಗಳಿಂದ ದರ್ಶನ್ ಅವರ ಸೋಶಿಯಲ್ ಮೀಡಿಯಾ ಖಾತೆಗಳ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮಿ ವಹಿಸಿಕೊಂಡಿದ್ದಾರೆ. ದರ್ಶನ್ ಸಂದೇಶವನ್ನು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತಿದ್ದಾರೆ.
ಇದೀಗ ದರ್ಶನ್ ಹುಟ್ಟುಹಬ್ಬದ ದಿನವನ್ನು ವಿಶೇಷವಾಗಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹೊಸಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೊತೆ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಸವಿಯಲು ಮಕ್ಕಳಿಗೆ ಸ್ಟೀಲ್ ತಟ್ಟೆ, ಲೋಟ ವಿತರಿಸಿದ್ದಾರೆ.
ಕಲ್ಯಾಣಪುರದ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದಾರೆ. ಕೆ. ಆರ್ ಪುರದ ಅಯ್ಯಪ್ಪ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಭೋಜವ ವ್ಯವಸ್ಥೆ ಮಾಡಿದ್ದಾರೆ. ಕೆ. ಪಿ ಅಗ್ರಹಾರದಲ್ಲಿ ಹಸಿದವರಿಗೆ ಒಂದೊತ್ತಿನ ಊಟ ಕೊಟ್ಟಿದ್ದಾರೆ. ಸೊಲ್ಲಾಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ.
ವೃದ್ಧಾಶ್ರಮ, ಅನಾಥಾಶ್ರಮಗಳಿಗೂ ತೆರಳಿ ದರ್ಶನ್ ಅಭಿಮಾನಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ. ಅನ್ನದಾನ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಹೀಗೆ ಅಭಿಮಾನಿಗಳು ಸಹಾಯಗುಣವನ್ನು ದರ್ಶನ್ ಕೊಂಡಾಡಿದ್ದಾರೆ. ಆ ವೀಡಿಯೋಗಳನ್ನು ದರ್ಶನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. "ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ಗಳಿಗೆ ಹೃದಯಪೂರ್ವಕ ಧನ್ಯವಾದಗಳು" ಈ ಮೂಲಕ ದರ್ಶನ್ ತಿಳಿಸಿದ್ದಾರೆ.
ವಿನೀಶ್ ದರ್ಶನ್ ಕೂಡ ತಂದೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ಸುದ್ದಿ ಆಗಿತ್ತು. ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ಬುದ್ದಿಮಾಂದ್ಯ ಮಕ್ಕಳಿಗೆ ಹೊಸ ಬಟ್ಟೆ, ಆಟಿಕೆಗಳು, ಸ್ವೀಟ್ ಹಾಗೂ ಚಾಕೆಲೇಟ್ ಹಂಚಿದ್ದು ವೈರಲ್ ಆಗಿತ್ತು.
ಕೆಲ ವರ್ಷಗಳಿಂದ ದರ್ಶನ್ ಅಭಿಮಾನಿಗಳ ಜೊತೆ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. ತಮ್ಮ ಹುಟ್ಟುಹಬ್ಬ ಹೆಸರಿನಲ್ಲಿ ಕೇಕ್, ಹಾರ, ಉಡುಗೊರೆ ತರುವುದು ಬೇಡ. ಅದೇ ಹಣದಲ್ಲಿ ಯಾರಿಗಾದರೂ ಸಹಾಯ ಮಾಡಿ. ದವಸ ಧಾನ್ಯ ತಂದು ಕೊಟ್ಟರೆ ಅದನ್ನು ಅನಾತಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುವುದಾಗಿ ಹೇಳಿದ್ದರು. ಅದರಂತೆ ಕೆಲ ವರ್ಷಗಳಿಂದ ನೆಚ್ಚಿನ ನಟನ ಜೊತೆ ಅಭಿಮಾನಿಗಳು ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದರು.


Click it and Unblock the Notifications











