ಪ್ರೇಕ್ಷಕ ಸಮೂಹಕ್ಕೆ ಸದಾ ಚಿರಋಣಿ ಎಂದ 'ಒಡೆಯ' ದರ್ಶನ್.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ 2019 ಚಿನ್ನದ ವರ್ಷ. ಯಾಕಂದ್ರೆ, 'ದಾಸ' ದರ್ಶನ್ ಅಭಿನಯದ ಮೂರು ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ನಿರೀಕ್ಷೆಗೆ ತಕ್ಕ ಹಾಗೆ ಮೂರೂ ಚಿತ್ರಗಳು ಸೂಪರ್ ಹಿಟ್ ಆಗಿವೆ.
ದರ್ಶನ್ ನಟನೆಯ 'ಯಜಮಾನ' ಚಿತ್ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಯ್ತು. ಔಟ್ ಅಂಡ್ ಔಟ್ ಕಮರ್ಶಿಯಲ್ ಸಿನಿಮಾ ಆಗಿದ್ದ 'ಯಜಮಾನ' ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 50 ಕೋಟಿ ಕಲೆಕ್ಷನ್ ಮಾಡಿತು.
ಇನ್ನೂ ಆಗಸ್ಟ್ ನಲ್ಲಿ ಸಾವಿರ ಸ್ಕ್ರೀನ್ ಗಳಲ್ಲಿ ಅಬ್ಬರಿಸಿದ ಬಹು ಕೋಟಿ ಬಜೆಟ್ ಚಿತ್ರ 'ಕುರುಕ್ಷೇತ್ರ' ಕೂಡ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿತು. ಇದೀಗ ನಿಮ್ಮೆಲ್ಲರ ಮುಂದೆ ಬಂದಿರುವ 'ಒಡೆಯ' ಚಿತ್ರ ಮೂರು ದಿನಗಳಲ್ಲಿ ಹತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ತಮ್ಮ ಸಿನಿಮಾಗಳಿಗೆ ಜನ ತೋರಿಸುತ್ತಿರುವ ಈ ಪ್ರೀತಿಗೆ ದರ್ಶನ್ ತಲೆಬಾಗಿದ್ದಾರೆ. ''ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ಧನ್ಯವಾದಗಳು. ಮನೆ ಮಂದಿಯೆಲ್ಲರ ಜೊತೆಗೆ ಬಂದರು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ಸದಾ ಚಿರಋಣಿ'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
ದರ್ಶನ್ ಹೇಳಿದಂತೆ ಕಳೆದ ವರ್ಷ ಅವರ ಅಭಿನಯದಲ್ಲಿ ಯಾವುದೇ ಚಿತ್ರ ತೆರೆಗೆ ಬರಲಿಲ್ಲ. 2017 ರಲ್ಲಿ 'ತಾರಕ್' ಬಿಡುಗಡೆ ಆದ್ಮೇಲೆ 'ಕುರುಕ್ಷೇತ್ರ' ಮತ್ತು 'ಯಜಮಾನ' ಚಿತ್ರಗಳ ಶೂಟಿಂಗ್ ನಲ್ಲಿ ದರ್ಶನ್ ಪಾಲ್ಗೊಂಡಿದ್ದರು. 'ಕುರುಕ್ಷೇತ್ರ' ಪೌರಾಣಿಕ ಚಿತ್ರವಾಗಿದ್ದರಿಂದ, ಅದರ ಮೇಕಿಂಗ್ ಗಾಗಿ ಹೆಚ್ಚು ದಿನಗಳು ಬೇಕಾಯಿತು.
ಕಳೆದ ವರ್ಷ ಯಾವ ಚಿತ್ರವನ್ನೂ ನೀಡದ ದರ್ಶನ್, ''ಇನ್ಮೇಲೆ ಪ್ರತಿ ವರ್ಷ ಎರಡ್ಮೂರು ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುವೆ'' ಅಂತ ಅಭಿಮಾನಿಗಳಿಗೆ ಮಾತು ನೀಡಿದ್ದರು. ಆಡಿದ ಮಾತು ಉಳಿಸಿಕೊಂಡ ದರ್ಶನ್ ಈ ವರ್ಷ ಮೂರು ಚಿತ್ರಗಳನ್ನ ನೀಡಿದ್ದಾರೆ. ಆ ಮೂರೂ ಚಿತ್ರಗಳು ಯಶಸ್ವಿ ಆಗಿವೆ. ದರ್ಶನ್ ಮತ್ತು ಫ್ಯಾನ್ಸ್ ಗೆ ಇದಕ್ಕಿಂತ ಇನ್ನೇನು ಬೇಕು.?


Click it and Unblock the Notifications











