ಶನಿ ದೇವಾಲಯಕ್ಕೆ ದರ್ಶನ್ ಭೇಟಿ: ದೇವಾಲಯದ ಐತಿಹ್ಯವೇನು?
ವಿವಾದಗಳಿಂದ ದೂರವಾಗಿ ನೆಮ್ಮದಿ ಪಡೆಯಲೆಂದು ತಮಿಳುನಾಡಿಗೆ ಹೊರಟಿರುವ ದರ್ಶನ್ ಅಲ್ಲಿನ ಒಂದು ವಿಶೇಷ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಪಾಂಡಿಚೆರಿಯಲ್ಲಿರುವ ತಿರುನಲ್ಲಾರ್ ದೇವಾಲಯಕ್ಕೆ ಗೆಳೆಯರೊಂದಿಗೆ ಭೇಟಿ ನೀಡಿರುವ ದರ್ಶನ್ ಅಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ತಿರುನಲ್ಲಾರ್ನಲ್ಲಿ ಶನಿದೇವರ ದೇವಾಲಯ ಇದ್ದು ಇದೇ ದೇವಾಲಯಕ್ಕೆ ದರ್ಶನ್ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ದರ್ಬರನ್ವೇಸ್ವರನ್ ದೇವಾಲಯ ಎಂದೂ ಸಹ ಈ ಶನಿ ದೇವರ ದೇವಾಲಯ ಖ್ಯಾತವಾಗಿದೆ.
ಇತ್ತೀಚೆಗೆ ಕೆಲವು ದಿನಗಳಿಂದ ದರ್ಶನ್ ಅವರನ್ನು ವಿವಾದಗಳು ಬೆನ್ನು ಹತ್ತಿರುವ ಕಾರಣ ಕೆಲವರ ಸಲಹೆಯಂತೆ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ದೇವಾಲಯದ ಒಳಗೆ ದರ್ಶನ್ ಪೂಜೆಯಲ್ಲಿ ನಿರತರಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ತಿರುನಲ್ಲಾರ್ನ ಶನಿದೇವರ ದೇವಾಲಯದ ದರ್ಶನ ಮಾಡಿದರೆ ಶನಿಭಾದೆ ತೀರುತ್ತದೆ ಎಂಬುದು ನಂಬಿಕೆ. ಇದೇ ಕಾರಣಕ್ಕೆ ದರ್ಶನ್ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೇ ಪ್ರದೇಶದಲ್ಲಿ ರಾಜ ನಳನು ಶನಿಪ್ರಭಾವದಿಂದ ದೂರವಾದ ಎಂಬ ಪ್ರತೀತಿ ಇದೆ.

ಜುಲೈ 11ರಂದು ಆರಂಭವಾದ ವಿವಾದದ ಸರಣಿ
ಕೆಲವು ದಿನಗಳಿಂದಲೂ ವಿವಾದಗಳು ದರ್ಶನ್ ಬೆನ್ನ ಹಿಂದೆ ಬಿದ್ದಿವೆ. ಜುಲೈ 11 ರಂದು ಮೈಸೂರಿನ ಎಸಿಪಿ ಕಚೇರಿಗೆ ಹಾಜರಾಗಿದ್ದ ದರ್ಶನ್, 'ನನ್ನ ಹೆಸರು ದುರ್ಬಳಕೆ ಮಾಡಿಕೊಂಡು 25 ಕೋಟಿ ವಂಚನೆ ಮಾಡಲು ಯತ್ನಿಸಿದ್ದಾರೆ'' ಎಂದು ಆರೋಪಿಸಿದ್ದರು. ಮರುದಿನ ಸುದ್ದಿಗೋಷ್ಠಿ ನಡೆಸಿ ನಿರ್ಮಾಪಕ ಉಮಾಪತಿಯೇ ತಮ್ಮನ್ನು ಮೈಸೂರಿನ ಗೆಳೆಯರಿಂದ ದೂರ ಮಾಡಲು ಇಂಥಹಾ ಒಂದು ಷಡ್ಯಂತ್ರ ಹೆಣೆದಿರುವ ಇದೆ ಎಂದು ಸೂಚ್ಯವಾಗಿ ಹೇಳಿದ್ದರು.

ನೇರ ಆರೋಪ ಮಾಡಿದ ಉಮಾಪತಿ
ನಂತರ ನಿರ್ಮಾಪಕ ಉಮಾಪತಿ ಸಹ ಪ್ರಕರಣದ ಇತರೆ ಮಾಹಿತಿಗಳನ್ನು ಹೊರಗೆ ಹಾಕಿದ ಬಳಿಕ ಹಾಗೂ ದರ್ಶನ್ ಗೆಳೆಯರಾದ ರಾಕೇಶ್ ಪಾಪಣ್ಣ, ಹರ್ಷಾ ಮೆಲಂಟಾ ವಿರುದ್ಧ ನೇರ ಆರೋಪಗಳನ್ನು ಮಾಡಿದ ಬಳಿಕ ಪ್ರಕರಣ ದೊಡ್ಡದಾಗಿ ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮಗಳಲ್ಲಿ ಇದೇ ಸುದ್ದಿ ಬರುವಂತಾಯಿತು.

ದೊಡ್ಮನೆ ಆಸ್ತಿ ವಿಷಯ ಚರ್ಚೆಗೆ ಬಂತು
ಈ ಪ್ರಕರಣ ಇನ್ನೇನು ಮುಗಿಯಿತು ಎನ್ನುವಾಗಲೇ ನಿರ್ದೇಶಕ ಇಂದ್ರಜಿತ್ ಅವರು ನಟ ದರ್ಶನ್, ಮೈಸೂರಿನ ಪ್ರಿನ್ಸ್ ಹೋಟೆಲ್ನಲ್ಲಿ ದಲಿತ ಸಪ್ಲೈಯರ್ ಒಬ್ಬನನ್ನು ಹೊಡೆದಿದ್ದಾರೆ ಎಂದು ದೂರು ನೀಡಿದರು. ದರ್ಶನ್ ಬೈದರು ಅಷ್ಟೆ ಆದರೆ ಹೊಡೆಯಲಿಲ್ಲ ಎಂದು ಸಪ್ಲೈಯರ್ ಆ ನಂತರ ಹೇಳಿಕೆ ಕೊಟ್ಟರು. ಆದರೆ ಆ ವೇಳೆಗೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್, ದರ್ಶನ್ ಹೊಡೆದಿದ್ದು ನಿಜ ಎಂಬಂತೆ ಇಂದ್ರಜಿತ್ ಬಳಿಯೇ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿ ಪ್ರಕರಣ ಇನ್ನಷ್ಟು ಗಹನವಾಯಿತು. ಅದಾದ ಬಳಿಕ ''ದರ್ಶನ್ ಅವರು ದೊಡ್ಮನೆಯ ಆಸ್ತಿಯನ್ನು ಕೇಳಿದ್ದರು ಆದರೆ ನಾನು ಕೊಡಲಿಲ್ಲ'' ಎಂದು ನಿರ್ಮಾಪಕ ಉಮಾಪತಿ ಹೇಳಿದರು. ಇದು ಸಹ ದೊಡ್ಡ ಸುದ್ದಿಯಾಯ್ತು.
Recommended Video

ದೊಡ್ಮನೆ ಆಸ್ತಿ ವಿಚಾರ ಚರ್ಚೆಗೆ ಬಂತು
ಕೊನೆಗೆ ಮಾಧ್ಯಮಗಳ ಮುಂದೆ ವೀರಾವೇಶದಿಂದ ಮಾತನಾಡಿದ ದರ್ಶನ್, ಇಂದ್ರಜಿತ್ ಅವರ ಗಂಡಸ್ತನದ ಬಗ್ಗೆಯೇ ಸವಾಲುಗಳನ್ನು ಎಸೆದರು. ನಿರ್ದೇಶಕ ಪ್ರೇಮ್, ನಿರ್ಮಾಪಕ ಉಮಾಪತಿ ಬಗ್ಗೆಯೂ ಮಾತನಾಡಿದರು. ಯಾವ ಕಲಾವಿದರೂ ದನಿ ಎತ್ತಲಿಲ್ಲ ಎಂದರು. ಇದೆಲ್ಲ ಆಗುವಷ್ಟರಲ್ಲಿ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ನೋಟ್ ಒಂದು ಬಿಡುಗಡೆ ಆಯ್ತು. ಆ ರೆಕಾರ್ಡ್ನಲ್ಲಿ ಅತ್ಯಂತ ನೀಚ ಭಾಷೆಯಲ್ಲಿ ಮಾಧ್ಯಮದವರನ್ನು ಬೈಯಲ್ಲಾಗಿದೆ. ಸತತವಾಗಿ ವಿವಾದದ ಕೇಂದ್ರದಲ್ಲಿ ದರ್ಶನ್ ಇದ್ದರಾದ್ದರಿಂದ ಈಗ ಇದೆಲ್ಲವುದರಿಂದ ಮುಕ್ತಿ ಪಡೆಯಲೆಂದು ದರ್ಶನ್ ಶನಿದೇವರ ದೇವಾಲಯಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











