'ರಾಬರ್ಟ್' ಬಿಡುಗಡೆಗೆ ಅಡ್ಡಿ; ಫಿಲ್ಮ್ ಛೇಂಬರ್ ಗೆ ಆಗಮಿಸಿದ ದರ್ಶನ್
ತೆಲುಗಿನಲ್ಲಿ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಅಡ್ಡಿಯಾದ ಹಿನ್ನಲೆ ದೂರು ನೀಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿಲ್ಮ್ ಛೇಂಬರ್ ಗೆ ಆಗಮಿಸಿದ್ದಾರೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಮಾರ್ಚ್ 11ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದ ರಾಬರ್ಟ್ ತಂಡಕ್ಕೆ ತೆಲುಗು ಸಿನಿಮಾರಂಗ ಬ್ರೇಕ್ ಹಾಕಿದೆ.
ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ಗರಂ ಆಗಿರುವ ನಟ ಈ ಇಬ್ಬಗೆ ನೀತಿ ವಿರುದ್ಧ ಫಿಲಂ ಛೇಂಬರ್ ಗೆ ದೂರು ನೀಡಲಿದ್ದಾರೆ. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿದೆ. ಇದು ದರ್ಶನ್ ಅಸಮಾಧಾನಕ್ಕೆ ಕಾರಣ.
ತೆಲುಗಿನ ಸಣ್ಣ ಬಜೆಟ್ ಸಿನಿಮಾಗಳ ಬಿಡುಗಡೆ ಇದ್ದರೂ ಸಹ ಕನ್ನಡದ ಸಿನಿಮಾಗಳನ್ನು ತಡೆ ಹಿಡಿಯಲಾಗುತ್ತಿದೆ. ತೆಲುಗು ಡಬ್ ವರ್ಷನ್ ಗಳಿಗೆ ಸಹ ಅಡ್ಡಿಪಡಿಸಲಾಗುತ್ತಿದೆ ಎಂದು ರಾಬರ್ಟ್ ಸಿನಿಮಾತಂಡ ಆರೋಪಿಸಿದೆ.

ರಾಬರ್ಟ್ ಸಿನಿಮಾಗೆ ತೆಲುಗಿನಲ್ಲಿ ಕಂಟಕ ಎದುರಾಗುತ್ತಿದ್ದಂತೆ ಬೇರೆ ಭಾಷೆಯಲ್ಲಿ ರಿಲೀಸ್ ಗೆ ಸಿದ್ಧವಾಗಿರುವ ಕನ್ನಡದ ಉಳಿದ ಸಿನಿಮಾಗಳಿಗೂ ಆತಂಕ ಎದುರಾಗಿದೆ. ಪೊಗರು ಮತ್ತು ಕೋಟಿಗೊಬ್ಬ-3 ಸಿನಿಮಾಗಳು ತೆಲುಗಿನಲ್ಲಿ ರಿಲೀಸ್ ಗೆ ಸಿದ್ಧವಾಗಿದೆ. ಸದ್ಯ ದರ್ಶನ್ ಜೊತೆ ಪೊಗರು ಸಿನಿಮಾದ ನಿರ್ಮಾಪಕರು ಸಹ ಫಿಲ್ಮ್ ಚೇಂಬರ್ ಆಗಮಿಸಿದ್ದಾರೆ, ಇನ್ನು ಕೋಟಿಗೊಬ್ಬ-3 ನಿರ್ಮಾಪಕರು ಬರುವ ಸಾಧ್ಯತೆ ಇದೆ.


Click it and Unblock the Notifications











