ಉಮಾಪತಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ದರ್ಶನ್ ಅಭಿಮಾನಿಗಳಿಗೆ ಹಿನ್ನಡೆ
ಸ್ಯಾಂಡಲ್ವುಡ್ನಲ್ಲಿ ಕಳೆದೊಂದು ವಾರದಿಂದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ಶೀತಲ ಸಮರ ತಾರಕ್ಕೇರಿದೆ. ದರ್ಶನ್ ಹೇಳಿಕೆ ಉಮಾಪತಿ ಶ್ರೀನಿವಾಸ್ ತಿರುಗೇಟು ಕೊಟ್ಟಿದೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿರ್ಮಾಪಕ ಉಮಾಪತಿಗೆ ಕೆಲವರು ಬೆಂಬಲ ಸೂಚಿಸಿದರೆ ದರ್ಶನ್ಗೆ ಅಭಿಮಾನಿಗಳ ಬಲ ಸಿಕ್ಕಿದೆ.
'ಕಾಟೇರ' ಟೈಟಲ್, ಕಥೆ ಯಾರದ್ದು? ಎಂದು ಸ್ಪಷ್ಟನೆ ನೀಡುವ ಭರದಲ್ಲಿ ಉಮಾಪತಿ ಕುರಿತು ನಟ ದರ್ಶನ್ ತಗಡು, ಗುಮ್ಮಿಸ್ಕೊತ್ತಿಯಾ ಎಂದು ಹೇಳಿದ್ದು ಭಾರೀ ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಉಮಾಪತಿ ಕೂಡ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದರು. ತಾಕತ್ತಿದ್ದರೆ ಏನು ಬೇಕಾದರೂ ಮಾಡಲಿ ಎಂದು ಸವಾಲು ಹಾಕಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ದೂರು ಕೂಡ ದಾಖಲಾಗಿದೆ.

ಇನ್ನು ದರ್ಶನ್ ಹಾಗೂ ಉಮಾಪತಿ ನಡುವಿನ ವಾಕ್ಸಮರಕ್ಕೆ ಜಾತಿ ಬಣ್ಣ ಕೂಡ ಪಡೆದುಕೊಂಡು ಚರ್ಚೆ ಮತ್ತೊಂದು ಹಂತಕ್ಕೆ ಹೋಗಿತ್ತು. ಇದೆಲ್ಲದರ ನಡುವೆ ನಟ ದರ್ಶನ್ ಅಭಿಮಾನಿಗಳು ಉಮಾಪತಿ ಏರಿಯಾದಲ್ಲಿ ಬೈಕ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದರು. ದೊಡ್ಡಮಟ್ಟದಲ್ಲಿ ರ್ಯಾಲಿ ನಡೆಸಿ ಉಮಾಪತಿ ವಿರುದ್ಧ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದರು. ಆದರೆ ಪೊಲೀಸರು ರ್ಯಾಲಿಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಗರದ ಹೆಚ್.ಎಸ್. ಆರ್ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಆಗಾಗಿ ಬೊಮ್ನನಹಳ್ಳಿಯ ಮಹಾ ಗಣಪತಿ ದೇವಸ್ಥಾನದಿಂದ ಹೆಚ್.ಎಸ್. ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ವರೆಗೂ ಬೈಕ್ ರ್ಯಾಲಿ ನಡೆಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮತಿ ಕೋರಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರ್ಯಾಲಿಗೆ ಅನುಮತಿ ನೀಡುತ್ತಿಲ್ಲ.
ಇಂದು(ಫೆಬ್ರವರಿ 26)ಸಂಜೆ 6 ಗಂಟೆಗೆ ರ್ಯಾಲಿಗೆ ದರ್ಶನ್ ಅಭಿಮಾನಿಗಳು ಉದ್ದೇಶಿಸಿದ್ದರು. ಆದರೆ ನಗರದಲ್ಲಿ ಸಾರ್ವಜನಿಕ ಮೆರವಣಿಗೆ, ರ್ಯಾಲಿ ನಡೆಸಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುತ್ತಾ ನಟ ದರ್ಶನ್ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಹೆಣ್ಣು ಮಕ್ಕಳ ನಿಂದನೆ ಜೊತೆಗೆ ಪ್ರಭಾವಿ ಸಮುದಾಯದ ನಾಯಕನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದರ್ಶನ್ ವಿರುದ್ಧ ಎರಡು ದೂರುಗಳು ದಾಖಲಾಗಿದೆ. ಗಣೇಶ್ ಗೌಡ ಹಾಗೂ ಜಗದೀಶ್ ಎಂಬುವವರು ಆರ್. ಆರ್ ನಗರ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಒಟ್ಟಾರೆ ದರ್ಶನ್ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೆ ಸುದ್ದಿ ಆಗುತ್ತಲೇ ಇದ್ದಾರೆ. ಅಭಿಮಾನಿಗಳು ಸದಾ ಬೆಂಬಲಕ್ಕೆ ನಿಲ್ಲುತ್ತಾ ಬರುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ವಿರುದ್ಧವೂ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದ್ಕಾಲದಲ್ಲಿ ಬಹಳ ಆತ್ಮೀಯರಾಗಿದ್ದ ದರ್ಶನ್ ಹಾಗೂ ಉಮಾಪತಿ ಕಾರಣಾಂತರಗಳಿಂದ ದೂರಾಗಿದ್ದಾರೆ.
24 ಕೋಟಿ ರೂ. ಲೋನ್ ಪ್ರಕರಣದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಅದಕ್ಕೂ ಮುನ್ನ ಇಬ್ಬರೂ 'ರಾಬರ್ಟ್' ಚಿತ್ರಕ್ಕಾಗಿ ಕೈ ಜೋಡಿಸಿದ್ದರು. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಚಿತ್ರದಲ್ಲಿ ದರ್ಶನ್ ನಟಿಸಿ ಗೆದ್ದಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
ಬಳಿಕ ಇದೇ ಜೋಡಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ತೀರ್ಮಾನಿಸಿತ್ತು. ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆದಿತ್ತು. ಅಷ್ಟರಲ್ಲಿ ಲೋನ್ ಪ್ರಕರಣದಿಂದ ಇಬ್ಬರ ನಡುವೆ ಬಿರುಕು ಮೂಡಿತು. ಆರೋಪ ಪ್ರತ್ಯಾರೋಪಗಳು ಕೇಳಿಬಂದಿತ್ತು. ಎಲ್ಲಾ ಮುಗಿದು ತಣ್ಣಗಾಯಿತು ಎಂದುಕೊಂಡಿದ್ದ ಸಮಯದಲ್ಲಿ 'ಕಾಟೇರ' ಸಿನಿಮಾ ಟೈಟಲ್ ಕೊಟ್ಟಿದ್ದು ನಾನು, ಕಥೆ ಬರೆಸಿದ್ದು ನಾನು ಎಂದು ಉಮಾಪತಿ ಶ್ರೀನಿವಾಸ್ ಹೇಳಿಕೊಂಡಿದ್ದರು. ಇದಕ್ಕೆ ಸ್ಪಷ್ಟನೆ ನೀಡುವ ವೇಳೆ ಉಮಾಪತಿ ಕುರಿತು ದರ್ಶನ್ ಆಡಿದ ಮಾತುಗಳು ಚರ್ಚೆಗೆ ಗ್ರಾಸವಾಯಿತು.


Click it and Unblock the Notifications











