"ತಪ್ಪು ಮಾಡಿದ್ದಕ್ಕೆ ತಾನೇ ದರ್ಶನ್ ಜೈಲಿಗೆ ಹೋಗಿರೋದು"; ಸಚಿವ ಜಮೀರ್ ಅಹ್ಮದ್
ಹಾವೇರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಗೆ ಸಮಯ ಹತ್ತಿರವಾಗುತ್ತಿದೆ. ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿ 83 ದಿನ ಕಳೆದಿದೆ. ಪೊಲೀಸರು ಈಗಾಗಲೇ ತನಿಖೆ ಮುಗಿಸಿ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಅಭಿಮಾನಿಗಳು ಮಾತ್ರ ನೆಚ್ಚಿನ ನಟ ಯಾವಾಗ ಜೈಲಿನಿಂದ ಹೊರ ಬರುತ್ತಾರೆ ಎಂದು ಕಾಯುತ್ತಲೇ ಇದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಎಂದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಭಾವಿ ಆಗಿದ್ದರು ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದರು. ಇನ್ನು ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್ ಯತ್ನಿಸಿದ್ದರು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿತ್ತು. ಆಪ್ತ ರಾಜಕೀಯ ಮುಖಂಡರು ಸಮಸ್ಯೆಯಿಂದ ದರ್ಶನ್ನ ಪಾರು ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇತ್ತು. ಮುಖ್ಯವಾಗಿ ದರ್ಶನ್ ಬೆಂಬಲಕ್ಕೆ ಸಚಿವ ಜಮೀರ್ ಅಹ್ಮದ್ ನಿಂತಿದ್ದಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು.

ದರ್ಶನ್ ಜೈಲು ಸೇರಿರುವ ಬಗ್ಗೆ ಸಚಿವರಾದ ಜಮೀರ್ ಅಹ್ಮದ್ ಮತ್ತೊಮ್ಮೆ ಮಾತನಾಡಿದ್ದಾರೆ. ದರ್ಶನ್ ತಪ್ಪು ಮಾಡಿರುವುದಕ್ಕೆ ಜೈಲಿಗೆ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇವತ್ತಿಗೂ ದರ್ಶನ್ ತಪ್ಪು ಮಾಡಿಲ್ಲ ಎಂದು ಸಾಕಷ್ಟು ಜನ ನಂಬಿದ್ದಾರೆ. ಇಂತಹ ಸಮಯದಲ್ಲಿ ಆಪ್ತರಾದ ಜಮೀರ್ ಅಹ್ಮದ್ ಹೀಗೆ ಹೇಳಿರುವುದು ಅಚ್ಚರಿ ಮೂಡಿಸಿದೆ.
ಹಾವೇರಿಯಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ನಟ ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.
ನಾನು ದರ್ಶನ್ ಆತ್ಮೀಯ ಸ್ನೇಹಿತರು ನಿಜ. ದರ್ಶನ್ ತಪ್ಪು ಮಾಡಿದ್ದಕ್ಕೆ ತಾನೇ ಜೈಲಿಗೆ ಹೋಗಿರೋದು. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ? ಎಂದು ಸಚಿವರು ಹೇಳಿದ್ದಾರೆ. ಸದ್ಯ ಜಮೀರ್ ಅಹ್ಮದ್ ಹೇಳಿಕೆ ವೈರಲ್ ಆಗುತ್ತಿದೆ.
ಜಮೀರ್ ಅಹ್ಮದ್ ಖಾನ್ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಅದೇ ಕಾರಣಕ್ಕೆ ಬೆಳಗಾವಿ ಬದಲು ದರ್ಶನ್ ಅವರನ್ನು ಬಳ್ಳಾರಿ ಜೈಲಿನಲ್ಲಿ ಇರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ತಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಮೊನ್ನೆ ಹುಬ್ಬಳ್ಳಿಯಲ್ಲಿ ಸಚಿವರು ಮಾತನಾಡಿದ್ದರು. ದರ್ಶನ್ ಬಳ್ಳಾರಿ ಜೈಲಿಗೆ ಬಂದಿದ್ದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದರು.
ನಾನು ಜಿಲ್ಲಾ ಉಸ್ತುವಾರಿ ಸಚಿವ ಮಾತ್ರ, ಡಿಜಿ ಅಲ್ಲ. ಜೈಲಿನಲ್ಲಿರುವ ಫೋಟೋ ಮಾಧ್ಯಮಗಳಲ್ಲೇ ಬಂದಿದೆ, ನೀವೇ ಅದನ್ನು ದೊಡ್ಡ ವಿವಾದವನ್ನಾಗಿ ಮಾಡಿದ್ದೀರಾ. ಈ ಕಾರಣಕ್ಕೆ ಅವರನ್ನು ಬೇರೆ ಜೈಲಿಗೆ ಅವರನ್ನು ವರ್ಗಾವಣೆ ಮಾಡಿದ್ದಾರೆ. ಇದನ್ನು ಪೊಲೀಸ್ ಇಲಾಖೆಯೇ ತೀರ್ಮಾನ ಮಾಡಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದರು.
ದರ್ಶನ್ ಹಾಗೂ ಜಮೀರ್ ಅಹ್ಮದ್ ನಡುವೆ ಒತ್ತಮ ಒಡನಾಟವಿದೆ. ಸಚಿವರು ಕರೆದ ಕಾರ್ಯಕ್ರಮಗಳಿಗೆ ದರ್ಶನ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ಅವರ ಮನೆಯಲ್ಲಿ ನಡೆಯುವ ರಂಜಾನ್ ಇಫ್ತಾರ್ ಕೂಟದಲ್ಲಿ ಕೂಡ ಭಾಗಿ ಆಗುತ್ತಿದ್ದರು. ಜಮೀರ್ ಪುತ್ರ ಝೈದ್ ಖಾನ್ ನಟನೆಯ 'ಬನಾರಸ್' ಚಿತ್ರಕ್ಕೂ ದರ್ಶನ್ ಬೆಂಬಲವಾಗಿ ನಿಂತಿದ್ದರು.


Click it and Unblock the Notifications











