Sankranti 2024: ಕಿಚ್ಚು ಹಾಯಿಸಿದ ದರ್ಶನ್, ಧ್ರುವ, ಪ್ರೇಮ್: ಗಾಳಿಪಟ ಹಾರಿಸಿದ ಯಶ್
ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಸೂರ್ಯ ಪಥ ಬದಲಿಸುವ ಸಂದರ್ಭದಲ್ಲಿ ಆಚರಿಸಲಾಗುವ ಸುಗ್ಗಿ ಹಬ್ಬಕ್ಕೆ ವಿಶೇಷ ಅರ್ಥವಿದೆ. ಹಳ್ಳಿಗಳಲ್ಲಿ ಜಾನುವಾರುಗಳನ್ನು ಕಿಚ್ಚಿನಲ್ಲಿ ಹಾಯಿಸಿ ಬಹಳ ಅದ್ಧೂರಿಯಾಗಿ ಹಬ್ಬ ಆಚರಿಸಲಾಗುತ್ತಿದೆ. ಚಂದನವನದ ತಾರೆಯರು ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.
ಜ್ಯೋತಿಷ್ಯದ ಪ್ರಕಾರ, ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುವ ಸಮಯದಲ್ಲಿ ಮಕರ ಸಂಕ್ರಾಂತಿ ಆಚರಣೆ ನಡೆಯುತ್ತದೆ. ವ್ಯವಸಾಯ ಮುಗಿದು ಫಸಲು ಮನೆ ಸೇರುವ ಸಮಯವೂ ಇದೇ ಆಗಿದರುವುದರಿಂದ ಸುಗ್ಗಿ ಸಂಭ್ರಮಕ್ಕೆ ಹೆಚ್ಚಿನ ಮಹತ್ವವಿದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್, ಯಶ್, ನಿಖಿಲ್ ಕುಮಾರಸ್ವಾಮಿ ಹಾಗೂ ನಿರ್ದೇಶಕ ಪ್ರೇಮ್ ಮನೆಯಲ್ಲಿ ಸುಗ್ಗಿ ಹಬ್ಬ ಪ್ರತಿ ವರ್ಷ ಜೋರಾಗಿರುತ್ತದೆ.

ಫಾರ್ಮ್ಹೌಸ್ನಲ್ಲಿ ದರ್ಶನ್ ಸುಗ್ಗಿಹಬ್ಬ
ನಟ ದರ್ಶನ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ತೂಗುದೀಪ ಫಾರ್ಮ್ಹೌಸ್ನಲ್ಲಿ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾ ಬರ್ತಿದ್ಧಾರೆ. ತಮ್ಮ ತೋಟದಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದರ್ಶನ್ ಸಾಕಿ ಸಲಹುತ್ತಿದ್ದು ಅದರಲ್ಲಿ ಜಾನುವಾರುಗಳು ಸಾಕಷ್ಟಿವೆ. ಈ ವರ್ಷವೂ ಸ್ನೇಹಿತರು, ಆಪ್ತರ ಜೊತೆ ಸೇರಿ ರಾಸುಗಳನ್ನು ತೊಳೆದು, ಸಿಂಗರಿಸಿ, ಪೂಜೆ ಸಲ್ಲಿಸಿ, ಹಬ್ಬದೂಟ ಕೊಟ್ಟು ಸಂಜೆ ಕಿಚ್ಚು ಹಾಯಿಸಿದ್ದಾರೆ.
ನಟ ಚಿಕ್ಕಣ್ಣ, ಪಾರ್ವತಮ್ಮ ರಾಜ್ಕುಮಾರ್ ಸೋದರ ಸಂಬಂಧಿ ಸೂರಜ್ ಕೂಡ ಈ ಬಾರಿ ದರ್ಶನ್ ಫಾರ್ಮ್ಹೌಸ್ ಸುಗ್ಗಿ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಕಂಪ್ಲೀಟ್ ವಿಡಿಯೋ ಶೀಘ್ರದಲ್ಲೇ ಬರಲಿದೆ. ಇನ್ನು ದರ್ಶನ್ ಪಂಚೆ ಉಟ್ಟು ಸಿಂಪಲ್ ಲುಕ್ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಗಾಳಿಪಟ ಹಾರಿಸಿದ ಯಶ್
ರಾಕಿಂಗ್ ಸ್ಟಾರ್ ಯಶ್ ಸದ್ಯ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬದ ಸಮಯದಲ್ಲೂ ವಿದೇಶಕ್ಕೆ ತೆರಳಿದ್ದರು. ಮಡದಿ ರಾಧಿಕಾ ಹಾಗೂ ಮಕ್ಕಳ ಜೊತೆ ಯಶ್ ತಮ್ಮ ಮನೆಯಲ್ಲೇ ಸುಗ್ಗಿ ಹಬ್ಬ ಆಚರಿಸಿದ್ದಾರೆ. ಹಬ್ಬ ಆಚರಿಸಿದ ಬಳಿಕ ಅಪಾರ್ಟ್ಮೆಂಟ್ ಮೇಲೇರಿ ಗಾಳಿಪಟ ಹಾರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿದೆ.

ಅಮ್ಮನ ತೋಟದಲ್ಲಿ ಪ್ರೇಮ್ ಸುಗ್ಗಿ ಸಂಭ್ರಮ
ನಿರ್ದೇಶಕ ಜೋಗಿ ಪ್ರೇಮ್ ಮಂಡ್ಯ ಸಮೀಪ ಅಮ್ಮನ ತೋಟ ಹೆಸರಿನಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಸಾಕಷ್ಟು ರಾಸುಗಳನ್ನು ಸಾಕುತ್ತಿದ್ದಾರೆ. ಪತ್ನಿ ರಕ್ಷಿತಾ ಹಾಗೂ ಆಪ್ತರ ಜೊತೆ ಸೇರಿ ಅಲ್ಲೇ ಈ ವರ್ಷ ಹಬ್ಬ ಆಚರಿಸಿದ್ದಾರೆ. ಹಬ್ಬ ಆಚರಿಸಿ, ಕಿಚ್ಚು ಹಾಯಿಸಿರುವ ವಿಡಿಯೋವನ್ನು ಪ್ರೇಮ್ ಹಂಚಿಕೊಂಡಿದ್ದಾರೆ.
ತೋಟದ ಮನೆಯಲ್ಲಿ ನಿಖಿಲ್ ಹಬ್ಬ
ನಟ ನಿಖಿಲ್ ಕುಮಾರ್ ಸ್ವಾಮಿ ತಮ್ಮ ತಂದೆ ತಾಯಿ ಹಾಗೂ ಮಡದಿ ಮಗನ ಜೊತೆ ಕ್ಯಾತಗಾನಹಳ್ಳಿಯ ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ. ಹಸು, ಕರು, ಕುರಿಗಳಿಗೆ ಪೂಜೆ ಮಾಡಿ ಮೇವು ನೀಡಿ ಖುಷಿಪಟ್ಟಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿಖಿಲ್ ಸದ್ದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಿಚ್ಚು ಹಾಯಿಸಿದ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಕೂಡ ಜಾನುವಾರಗಳನ್ನು ತೊಳೆದು ಸಿಂಗರಿಸಿ, ಪೂಜೆ ಮಾಡಿ ಸಂಜೆ ಕಿಚ್ಚು ಹಾಯಿಸಿದ್ದಾರೆ. ಅದಕ್ಕೆ ಸಂಬಂಧಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ರಾಧಿಕಾ ಕುಮಾರಸ್ವಾಮಿ, ದಿಯಾ ಖುಷಿ, ರಚಿತಾ ರಾಮ್ ಸೇರಿದಂತೆ ಹಲವರು ಬಹಳ ಸಡಗರ ಸಂಭ್ರಮದಿಂದ ಸುಗ್ಗಿ ಹಬ್ಬವನ್ನು ಆಚರಿಸಿ ಖುಷಿಪಟ್ಟಿದ್ದಾರೆ.


Click it and Unblock the Notifications











