ಬೆಂಗಳೂರು-ಬಳ್ಳಾರಿ ಎಲ್ಲಿ ದರ್ಶನ್ ವಾಸಸ್ಥಳ ? ಪರಪ್ಪನ ಅಗ್ರಹಾರ ಈಗ ಸುಲಭವಲ್ಲ,ಹೆಚ್ಚಾಯ್ತು ವಿಜಯಲಕ್ಷ್ಮಿ ತಳಮಳ
ಥಾಯ್ಲೆಂಡ್ - ರಾಜಸ್ತಾನ ಎಂದು ಒಂದು ಆರು ತಿಂಗಳು ನೆಮ್ಮದಿಯಿಂದ ಓಡಾಡಿಕೊಂಡಿದ್ದ ದರ್ಶನ್ಗೆ ದುರಾದೃಷ್ಟ ಮತ್ತೆ ಬೆನ್ನತ್ತಿದೆ. ಕಂಬಿ ಹಿಂದೆ ಬದುಕು ಸಾಗುತ್ತಿದೆ. ಮುಂದೆ ಇನ್ನೂ ಕಡುಕಷ್ಟದ ದಿನಗಳು ಎದುರಾಗಲಿವೆ. ಯಾಕೆಂದರೆ..ಜೈಲಿನ ನಿಯಮಗಳನ್ನು ಈ ಹಿಂದೆ ಗಾಳಿಗೆ ತೂರಿದ್ದಕ್ಕೆ ಪರಪ್ಪನ ಅಗ್ರಹಾರ ಸದ್ಯ ದರ್ಶನ್ ಪಾಲಿಗೆ ನರಕವಾಗಿದೆ. ದರ್ಶನ್ ಕೊಠಡಿಯ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಯಾವ ಸವಲತ್ತು ಇಲ್ಲ. ದರ್ಶನ್ ಮೇಲೆ ಅಲ್ಲಿನ ಸಿಬ್ಬಂದಿಗಳು ಕನಿಕರ ಕೂಡ ತೋರುವಂತೆ ಇಲ್ಲ. ಇನ್ನೂ.. ಪರಪ್ಪನ ಅಗ್ರಹಾರವಾದರೆ ಮನೆಯ ಸದಸ್ಯರು ಕೊನೆ ಪಕ್ಷ ದರ್ಶನ್ ದರ್ಶನವನ್ನಾದರು ಪಡೆಯಬಹುದು. ಆದರೆ ಈಗ ಕಳೆದ ಬಾರಿಯಂತೆ ದರ್ಶನ್ ದರ್ಶನಕ್ಕೆ ಹರಸಾಹಸ ಪಡಬೇಕಾದ ಸಾಧ್ಯತೆಯೇ ಹೆಚ್ಚು ಕಂಡು ಬರುತ್ತಿದೆ.

ಯಾಕೆಂದರೆ.. ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಕಳುಹಿಸುವ ಚಿಂತನೆ ನಡೆಯುತ್ತಿದೆ. ಜಾಮೀನು ಸಿಗುವ ಮುನ್ನ ದರ್ಶನ್ ಸೇರಿದಂತೆ ಬೇರೆ ಎಲ್ಲಾ ಆರೋಪಿಗಳು ಎಲ್ಲೆಲ್ಲಿ ಇದ್ದರು ಅಲ್ಲಿಯೇ ಅವರನ್ನು ವರ್ಗಾಯಿಸಬೇಕು ಎಂದು ಸರ್ಕಾರಿ ಪರ ವಕೀಲರು ಅರ್ಜಿಯನ್ನು ಕೂಡ ಸಲ್ಲಿಸಿಯಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಸಿಸಿಎಚ್ 64ರಲ್ಲಿ ವಿಚಾರಣೆ ಕೂಡ ನಡೆದಿದ್ದು ಆಗಸ್ಟ್ 23ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಹೌದು, ಅಸಲಿಗೆ ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡಿದ ಬೆನ್ನಲ್ಲಿಯೇ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡುವುದಾದರೆ ನಮ್ಮ ವಾದವನ್ನು ಆಲಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಈ ಹಿನ್ನೆಲೆ ದರ್ಶನ್ ಪರ ವಕೀಲರಿಗೆ ಸದ್ಯ ಅವಕಾಶವನ್ನು ನೀಡಲಾಗಿದ್ದು ಆಗಸ್ಟ್ 23ಕ್ಕೆ ದರ್ಶನ್ ವಾಸಸ್ಥಳ ಯಾವುದು ಎನ್ನುವುದರ ಕುರಿತು ತೀರ್ಪು ಹೊರ ಬರುವ ಸಾಧ್ಯತೆ ಇದೆ.
ಇನ್ನು.. ದರ್ಶನ್ ಅವರ ನಸೀಬು ಎಷ್ಟು ಖರಾಬಾಗಿದೆ ಅಂದರೆ ಮೊದಲ ಬಾರಿ ಬಂಧನಕ್ಕೊಳಗಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ವಿಜಯಲಕ್ಷ್ಮಿ ಆಗಲಿ ದಿನಕರ್ ಆಗಲಿ ಅವರನ್ನು ಭೇಟಿಯಾಗಲು ಬಂದಾಗ ಅವರ ಪೊಲೀಸ್ ಠಾಣೆಯವರೆಗೆ ಕಾರು ಯಾವ ಅಡೆ ತಡೆ ಇಲ್ಲದೇ ಹೋಗುತ್ತಿತ್ತು. ಸ್ಪೆಷಲ್ ಎಂಟ್ರಿ ಸಿಗುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇಂದು ದರ್ಶನ್ ಭೇಟಿಗೆ ಹೋದ ವಿಜಯಲಕ್ಷ್ಮಿ ಅವರ ಕಾರನ್ನು ಜೈಲಿನ ಚೆಕ್ ಪೋಸ್ಟ್ ಬಳಿಯೇ ತಡೆಯಲಾಗಿದೆ. ಕಾರನ್ನು ವಾಪಸ್ ಕಳುಹಿಸಲಾಗಿದೆ.
ಎಷ್ಟೇ ಮನವಿಯನ್ನು ಮಾಡಿಕೊಂಡರು ಮುಂದಕ್ಕೆ ತೆರಳಲು ಜೈಲಿನ ಸಿಬ್ಬಂದಿ ಬಿಡಲೇ ಇಲ್ಲ.

ಈ ಹಿನ್ನೆಲೆ ಜೈಲು ಚೆಕ್ ಪೋಸ್ಟ್ ವರೆಗೆ ವಿಜಯಲಕ್ಷ್ಮಿ ಅವರು ನಡೆದುಕೊಂಡೇ ಬಂದಿದ್ದಾರೆ. ಜೈಲಿನ ಕಚೇರಿಯಲ್ಲಿ ಸಾಮಾನ್ಯರಂತೆ ವಿಜಯಲಕ್ಷ್ಮಿ ಅವರು ಪ್ರವೇಶ ಪಡೆದು ಆ ನಂತರ ತಮ್ಮ ಪತಿಯ ದರ್ಶನ ಮಾಡಿದ್ಧಾರೆ. ಹಣ್ಣು ನೀಡಿ ಕುಶಲೋಪರಿಯನ್ನು ವಿಚಾರಿಸಿಕೊಂಡು ಬಂದಿದ್ಧಾರೆ. ಇನ್ನು ಮೊದಲಾದರೆ ಸ್ಟೇಷಲ್ ಎಂಟ್ರಿ ಸಿಗುತ್ತಿದ್ದ ಹಿನ್ನೆಲೆ ತುಸು ಹೆಚ್ಚೇ ದರ್ಶನ್ ಜೊತೆ ಮಾತನಾಡಲು ವಿಜಯಲಕ್ಷ್ಮೀ ಅವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಾಮಾನ್ಯ ಎಂಟ್ರಿ ಹಿನ್ನೆಲೆ ಅರ್ಧ ಗಂಟೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಧ ಗಂಟೆ ಮಾತನಾಡಿಸಿಕೊಂಡು ವಿಜಯಲಕ್ಷ್ಮೀ ಬಂದಿದ್ಧಾರೆ.
ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಸದ್ಯ ದರ್ಶನ್ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ದರ್ಶನ್ ಬೆಂಗಳೂರಿನಲ್ಲಿಯೇ ಇರ್ತಾರಾ ? ಅಥವಾ ಈ ಬಾರಿ ಬಳ್ಳಾರಿಗೆ ತೆರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











