ಧ್ರುವ ಸರ್ಜಾ ಮೇಲೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲ; 'ಮಾರ್ಟಿನ್'ಗೆ ಎಚ್ಚರಿಕೆ
ನಟ ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳ ನಡುವಿನ ತಿಕ್ಕಾಟ ತಾರಕಕ್ಕೇರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕೆಸರೆರಚಾಟ ನಡೀತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ತಮ್ಮ ನೆಚ್ಚಿನ ನಟನ ಬಗ್ಗೆ ಧ್ರುವ ಸರ್ಜಾ ಮಾತುಗಳಿಗೆ ಅಭಿಮಾನಿಗಳ ಗರಂ ಆಗಿದ್ದಾರೆ.
ಧ್ರುವ ಹಾಗೂ ದರ್ಶನ್ ನಡುವಿನ ಶೀತಲ ಸಮರ ರಹಸ್ಯವಾಗಿ ಉಳಿದಿಲ್ಲ. ನಾನು ದರ್ಶನ್ ಅವರ ಬಳಿ ಒಂದಷ್ಟು ಪ್ರಶ್ನೆಗಳನ್ನು ಕೇಳಬೇಕು ಎಂದು ಧ್ರುವ ಸರ್ಜಾ ಬಹಿರಂಗವಾಗಿಯೇ ಹೇಳಿದ್ದಾರೆ. ಹಿಂದೆ ಆಕ್ಷನ್ ಪ್ರಿನ್ಸ್ ಸಿನಿಮಾಗಳಿಗೆ ದರ್ಶನ್ ಬೆಂಬಲವಾಗಿ ನಿಂತಿದ್ದರು. ನಾಣು ಕೂಡ ಡಿಬಾಸ್ ಅಭಿಮಾನಿ ಎಂದು ಧ್ರುವ ಹೇಳಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಕೆಲ ದಿನಗಳ ಹಿಂದೆ ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ಧ್ರುವ ಸರ್ಜಾ ನಿಂತಿದ್ದರು. ಅಭಿಮಾನಿಗಳ ಮೂಲಕ ಅವರ ಕುಟುಂಬದ ಸಹಾಯ ಮಾಡಿದ್ದರು. ಫೋನ್ ಮಾಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದರು. ಪ್ರಕರಣದ ಬಗ್ಗೆ ಕೂಡ ಧ್ರುವ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದರು.
ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಧ್ರುವ "ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಒಂದು ಫ್ಯಾಮಿಲಿ ಇದೆ. ಮತ್ತೊಂದು ಕಡೆ ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ. ನಾವು ಈಗಲೇ ಮಾತನಾಡುವುದು ಬೇಡ" ಎಂದಿದ್ದರು.
ಇತ್ತೀಚೆಗೆ ಧ್ರುವ ಸರ್ಜಾ ಸುವರ್ಣ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಕೂಡ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿರುವ ಬಗ್ಗೆ ಮಾತನಾಡಿದ್ದರು. ಪರೋಕ್ಷವಾಗಿ ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಟೀಕಿಸಿದ್ದಾರೆ. ಸದ್ಯ ಆ ವೀಡಿಯೋಗಳು ವೈರಲ್ ಆಗುತ್ತಿದೆ. ಧ್ರುವ ಹೇಳಿಕೆಗೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ಅಂದು ನಾನು ದರ್ಶನ್ ಅಭಿಮಾನಿ ಎಂದು ಹೇಳಿದ್ದವರು ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದೀರಾ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಮಾರ್ಟಿನ್' ಸಿನಿಮಾ ಬಿಡುಗಡೆ ಆಗಲಿ ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸರ್ಜಾ ಕುಟುಂಬದ ಜೊತೆ ದರ್ಶನ್ಗೆ ಉತ್ತಮ ಒಡನಾಟವಿತ್ತು. ಅರ್ಜುನ್ ಸರ್ಜಾ ಅವರನ್ನು ಸೀನಿಯರ್ ಎಂದೇ ಕರೆಯುತ್ತಿದ್ದರು. 'ಪ್ರೇಮ ಬರಹ' ಚಿತ್ರದ ಹಾಡೊಂದರಲ್ಲಿ ಸರ್ಜಾ ಫ್ಯಾಮಿಲಿ ಸ್ಟಾರ್ಸ್ ಜೊತೆ ದರ್ಶನ್ ಹೆಜ್ಜೆ ಹಾಕಿದ್ದರು. ಆದರೆ ಈ ಚಿತ್ರದ ವಿತರಣೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. 'ಪ್ರೇಮ ಬರಹ' ಚಿತ್ರವನ್ನು ತೂಗುದೀಪ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿತ್ತು. ಅಲ್ಲಿಂದಲೇ ಭಿನ್ನಾಭಿಪ್ರಾಯ ಶುರವಾಗಿತ್ತು.
ದರ್ಶನ್ ಬಿಡುಗಡೆ ಆಗುವವರೆಗೂ ನಾವು ಯಾವುದೇ ಸಿನಿಮಾ ನೋಡಲ್ಲ, ಯಾವುದೇ ಸಿನಿಮಾ ಗೆಲ್ಲಲ್ಲ ಎಂದು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಆದರೆ ಇತ್ತೀಚೆಗೆ ಬಂದ ದುನಿಯಾ ವಿಜಯ್ 'ಭೀಮ' ಹಾಗೂ ಗಣೇಶ್ ನಟನೆಯ 'ಕೃಷ್ಣ ಪ್ರಣಯ ಸಖಿ' ಚಿತ್ರಗಳು ಸಕ್ಸಸ್ ಕಂಡಿವೆ. ಒಳ್ಳೆ ಸಿನಿಮಾ ಬಂದರೆ ಜನ ಕಂಡಿತ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವುದು ಸಾಬೀತಾಗಿದೆ.
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಎಪಿ ಅರ್ಜುನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅಕ್ಟೋಬರ್ 11ಕ್ಕೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಇದೀಗ ದರ್ಶನ್ ಅಭಿಮಾನಿಗಳು 'ಮಾರ್ಟಿನ್' ಚಿತ್ರಕ್ಕೆ ಟಕ್ಕರ್ ಕೊಡ್ತೀವಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿರುವುದು ವೈರಲ್ ಆಗುತ್ತಿದೆ.


Click it and Unblock the Notifications











