ರೇಣುಕಾಸ್ವಾಮಿಯನ್ನು ಯಾರು ಅಪಹರಿಸಿಲ್ಲ,ಯಾವುದೇ ಸಾಕ್ಷಿ ನಾಶ ಆಗಿಲ್ಲ ; CV ನಾಗೇಶ್ ಶಾಕಿಂಗ್ ಪಾಯಿಂಟ್ಸ್ ..!
ಕನ್ನಡ ಚಿತ್ರರಂಗದಲ್ಲಿ ಒಂದು ಆನೆ ಇತ್ತು. ಅದಕ್ಕೆ ಎಲ್ಲರೂ 'ಐರಾವತ' ಎಂದು ಹೆಸರಿಟ್ಟಿದ್ದರು. ಆದರೆ ಅದೊಂದು ದಿನ ನಾನು ನಡೆದಿದ್ದೇ ದಾರಿ ಎಂದು ಈ 'ಗಜ' ಗಾಂಭಿರ್ಯ ಮರೆತು ಹಾವಳಿ ಇಡಲು ಶುರು ಮಾಡಿತು. ಕೊನೆಗೆ ಕೊಲೆಗಡುಕ ಆನೆ ಎನ್ನುವ ಆರೋಪದೊಂದಿಗೆ ಜೈಲು ಪಾಲಾಯಿತು. ಆ ನಂತರ ಕಾಲು ಶಕ್ತಿ ಕಳೆದುಕೊಂಡಿದೆ. ಈಗಲೇ ಆಪರೇಶನ್ ಮಾಡದಿದ್ದರೆ ಲಕ್ವಾ ಹೊಡೆಯುತ್ತೆ ಎಂದೆಲ್ಲ ಆನೆ ನರಳಾಡುತ್ತಿರುವಂತೆ ನಾಟಕ ಮಾಡಲು ಶುರು ಮಾಡಿತು.
ಹೀಗಾಗಿಯೇ ನ್ಯಾಯಾಲಯ ಮಾನವೀಯತೆಯ ಅಮೃತ ಸಿಂಚನವನ್ನು ಆನೆಗೆ ಕರುಣಿಸಿತು. ಷರತ್ತು ಅನ್ವಯ, ಆರು ವಾರದ ನಂತರ ಮರಳಿ ಇಲ್ಲಿಯೇ ಬರಬೇಕು ಎಂದು ಹೇಳಿ ಕಳುಹಿಸಿತು. ಹೀಗೆ ಕಗ್ಗತ್ತಲಿಂದ ಬೆಳಕಿನೆಡೆಗೆ ಬಂದ ಆನೆ ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದೆ ಅಷ್ಟೇ. ಮೂರು ವಾರ ಕಳೆದರು ಕತ್ತರಿಯನ್ನು ಹಾಕಿಸಿಕೊಂಡಿಲ್ಲ. ಈ ಆನೆ ಬೇರೆ ಯಾರು ಅಲ್ಲ ಬದಲಿಗೆ ದರ್ಶನ್.

ಇಂಥಾ ದರ್ಶನ್ಗೆ , ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಎತ್ತಾಕಿಕೊಂಡು ಬರುವಂತೆ ಸಹಚರರಿಗೆ ಯಾವ ಆದೇಶವನ್ನು ನೀಡಿಲ್ಲ. ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶವೂ ದರ್ಶನ್ಗೆ ಇರಲಿಲ್ಲ ಎಂದರೆ ನೀವು ನಂಬ್ತೀರಾ. ನಂಬ್ಲೇಬೇಕು ಎಂಬ ವಾದವನ್ನು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಇಂದು ಮಾಡಿದ್ದಾರೆ. ಹೌದು, ಅಸಲಿಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರು ವಾರ ನೆಮ್ಮದಿಯಾಗಿ ಇರಲು ಅವಕಾಶವನ್ನು ಪಡೆದ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆದಿದೆ. ಈ ಸಮಯದಲ್ಲಿ ವಾದವನ್ನು ಮಂಡಿಸಿರುವ ಹಿರಿಯ ವಕೀಲರಾದ ಸಿವಿ ನಾಗೇಶ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಆರೋಪ ದರ್ಶನ್ ಮೇಲೆ ಇದೆ. ಅಪಾರ್ಟ್ಮೆಂಟ್ ಕಾವಲುಗಾರ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿ ಮೃತದೇಹದ ಮಹಜರು, ಪೋಸ್ಟ್ ಮಾರ್ಟಂ ವಿಳಂಬ ಮಾಡಲಾಗಿದೆ. 1.5X2.5 ಸೆಂ.ಮೀ. ಗಾಯ ಬಿಟ್ಟರೆ ಉಳಿದವು ರಕ್ತಗಾಯಗಳಲ್ಲ ಎಂದು ವಾದ ಮಂಡಿಸಿದ್ದಾರೆ.
ಇನ್ನು ಶವವನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ, ಶೌದ ಫೋಟೊ ಆಧಾರದಲ್ಲಿ ಇಷ್ಟು ಗಂಟೆಗೆ ರೇಣುಕಾಸ್ವಾಮಿ ಕೊನೆಯುಸಿರೆಳಿದಿರಬಹುದು ಎಂದು ಅಂದಾಜಿಸಲಾಗಿದೆ ಎಂದಿರುವ ಸಿವಿ ನಾಗೇಶ್, ಶವ ಪರೀಕ್ಷೆಯ ವರದಿ ಒಂದು ತಿಂಗಳ ನಂತರ ಬಂದಿದೆ. ಹೀಗಾಗಿ ಇಲ್ಲಿ ಷಡ್ಯಂತ್ರದ ವಾಸನೆ ಬಡೆಯುತ್ತಿದೆ ಎಂದಿದ್ದಾರೆ. ಇದಿಷ್ಟೇ ಅಲ್ಲದೇ ರೇಣುಕಾ ಸ್ವಾಮಿಯನ್ನು ಮೋಸದಿಂದ ಅಥವಾ ಬಲವಂತದಿಂದ ಕರೆತರಲಾಗಿಲ್ಲ ಎನ್ನುವುದನ್ನು ಕೂಡ ಒತ್ತಿ ಒತ್ತಿ ಹೇಳಿರುವ ಸಿವಿ ನಾಗೇಶ್ ಮೃತನ ತಂದೆಯ ಕಾಶೀನಾಥಯ್ಯ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಅವರ ಹೇಳಿಕೆಯಲ್ಲಿ ಜೂ.8ರಂದು ರೇಣುಕಾಸ್ವಾಮಿ ಎಂದಿನಂತೆ ಕೆಲಸಕ್ಕೆ ಹೋದ ಬಗ್ಗೆ ವರದಿ ಇದೆ. ಹಳೆಯ ನಾಲ್ವರು ಸ್ನೇಹಿತರೊಂದಿಗೆ ಹೋಗುತ್ತೇನೆಂದು ತಾಯಿ ಬಳಿ ಹೇಳಿದ್ದಾಗಿ ಹೇಳಿಕೆ ದಾಖಲಿಸಲಾಗಿದೆ. ರೇಣುಕಾಸ್ವಾಮಿ ದಿನನಿತ್ಯ ಧರಿಸುವ ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲವೆಂದು ಫೋನ್ ಮಾಡಿ ತಿಳಿಸಿದ್ದ. ಹೀಗಾಗಿ ಇದನ್ನು ಕಿಡ್ನ್ಯಾಪ್ ಎಂದು ಹೇಳಲು ಸಾಧ್ಯವೇ ಇಲ್ಲ ಯಾಕೆಂದರೆ ಇದರಲ್ಲಿ ಒತ್ತಾಯವೂ ಇಲ್ಲ, ಮೋಸವೂ ಇಲ್ಲ ಎಂದು ವಾದ ಮಂಡಿಸಿದ್ದಾರೆ.
ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವ ಸಮಯದಲ್ಲಿ ದಾರಿಯಲ್ಲಿ ಸಿಕ್ಕ ದುರ್ಗಾ ಬಾರ್ನಲ್ಲಿ ಫೋನ್ ಪೇ ಮೂಲಕ 640 ರೂಪಾಯಿಯನ್ನು ನೀಡಿ ಮದ್ಯವನ್ನು ಖರೀದಿ ಮಾಡಿದ್ದಾರೆ. ಬಾರ್ ಮ್ಯಾನೇಜರ್ ಮಂಜುನಾಥ್ ಈ ವಿಚಾರವನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಕಿಡ್ನಾಪ್ ಮಾಡಿದ್ದರೆ ಬಾರ್ ಗೆ ಬಂದು ಪೋನ್ ಪೇ ಮಾಡಲು ಸಾಧ್ಯವಾಗುತ್ತಿತ್ತಾ ಎಂಬ ಪ್ರಶ್ನೆಯನ್ನು ಕೂಡ ವಕೀಲರಾದ ಸಿವಿ ನಾಗೇಶ್ ಕೇಳಿದ್ದಾರೆ. ರೇಣುಕಾ ಸ್ವಾಮಿ ತಂದೆ ಮತ್ತು ಬಾರ್ ಮ್ಯಾನೇಜರ್ ಮಂಜುನಾಥ್ ಎಲ್ಲಿಯೂ ಕಿಡ್ನಾಪ್ ಎಂದು ಹೇಳಿಲ್ಲ ಆದರೆ ಚಾರ್ಜ್ ಶೀಟ್ನಲ್ಲಿ ಕಿಡ್ನಾಪ್ ಎಂದು ಉಲ್ಲೇಖಿಸಲಾಗಿದೆ ಎಂದಿದ್ಧಾರೆ.
ಇನ್ನು, ಸಾಕ್ಷ್ಯ ನಾಶದ ಕುರಿತು ಕೂಡ ವಾದ ಮಾಡಿರುವ ಸಿ.ವಿ.ನಾಗೇಶ್, ಕೊಲೆಯಾಗಿದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯನಾಶವಲ್ಲ ಎಂದಿದ್ದಾರೆ. ಒಂದು ವೇಳೆ ದೇಹವನ್ನು ಹೂತು ಹಾಕಿದ್ದರೆ, ಸುಟ್ಟು ಹಾಕಿದ್ದರೆ ಅಥವಾ ಬಚ್ಚಿಟ್ಟಿದ್ದರೆ ಮಾತ್ರ ಸಾಕ್ಷಿ ನಾಶ ಆಗುತ್ತದೆ. ಇಲ್ಲಿ ಯಾವುದೇ ಸಾಕ್ಷಿ ನಾಶ ಆಗಿಲ್ಲ ಎಂದು ವಾದ ಮಂಡನೆ ಮಾಡಿದ್ದಾರೆ.ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು ಕೂಡ ಉಲ್ಲೇಖಿಸಿದ್ಧಾರೆ. ದರ್ಶನ್ ಮೇಲೆ ಕಿಡ್ನಾಪ್, ಸಾಕ್ಷಿ ನಾಶ, ಹಲ್ಲೆ ಹಾಗೂ ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ಇದರಲ್ಲಿ 355 ಹಾಗೂ 201 ಜಾಮೀನು ನೀಡಬಹುದಾದ ಸೆಕ್ಷನ್ ಗಳು ಎಂದಿದ್ದಾರೆ.


Click it and Unblock the Notifications










