ಮತ್ತೆ ಜೈಲು ಸೇರುವ ಭೀತಿ; ಜಾಮೀನು ರದ್ದು ಮಾಡದಂತೆ ಸುಪ್ರೀಂಗೆ ದರ್ಶನ್ ಮನವಿ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಮತ್ತೆ ಡವ ಡವ ಶುರುವಾಗಿದೆ. ಈಗಾಗಲೇ ಪ್ರಕರಣದಲ್ಲಿ ದರ್ಶನ್ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ.
ಜುಲೈ 24ರಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ಸುಪ್ರೀಂನಲ್ಲಿ ಮನವಿ ಮಾಡಲಾಗಿದೆ. ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ವಾರದಲ್ಲಿ ಲಿಖಿತ ವಾದ ಸಲ್ಲಿಸಲು ಸೂಚಿಸಿತ್ತು. ಇನ್ನೆರಡು ದಿನಗಳಲ್ಲಿ ಸುಪ್ರೀಂ ಆದೇಶ ಹೊರ ಬೀಳಲಿದೆ. ಇದರ ನಡುವೆ ಜಾಮೀನು ರದ್ದು ಮಾಡದಂತೆ ದರ್ಶನ್ ಪರ ವಕೀಲರು ಸುಪ್ರೀಂಗೆ ಲಿಖಿತ ಕಾರಣಗಳನ್ನು ಕೊಟ್ಟಿದ್ದಾರೆ.

ದರ್ಶನ್ ಜಾಮೀನು ಯಾಕೆ ರದ್ದು ಮಾಡಬಾರದು ಎನ್ನುವುದಕ್ಕೆ ಒಂದಷ್ಟು ಕಾರಣಗಳನ್ನು ಅವರ ಪರ ವಕೀಲರು ಸುಪ್ರೀಂಗೆ ಸಲ್ಲಿಸಿರುವುದಾಗಿ ಟಿವಿ9 ವಾಹಿನಿ ವರದಿ ಮಾಡಿದೆ. ದರ್ಶನ್ಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಕರ್ನಾಟಕದ ಸರ್ಕಾರದ ಪರ ವಕೀಲರು ಕೂಡ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ದರ್ಶನ್ಗೆ ಜಾಮೀನು ನೀಡಿರುವ ಹೈಕೋರ್ಟ್ ನಡೆ ತಪ್ಪಾಗಿದೆ. ಡಿಎನ್ಎ ಪುರಾವೆ, ಸಾಕ್ಷಿ ಹೇಳಿಕೆ ಹಾಗೂ ಆರೋಪಿಗಳ ಅಪರಾಧದ ಹಿನ್ನೆಲೆ ಉಲ್ಲೇಖಿಸಿ ಜಾಮೀನು ರದ್ದು ಮಾಡುವಂತೆ ಕೇಳಿದ್ದಾರೆ.
ದರ್ಶನ್ ಪರ ವಕೀಲರು ನೀಡಿರುವ ಕಾರಣಗಳಲ್ಲಿ ಮುಖ್ಯವಾಗಿ ದರ್ಶನ್ ಬಂಧನ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಲಾಗಿದೆ. ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಮೈಸೂರಿನಲ್ಲಿ ಅವರನ್ನು ಬಂಧಿಸಲಾಗಿತ್ತು. ಸಂಜೆವರೆಗೆ ಬಂಧನಕ್ಕೆ ಕಾರಣವನ್ನು ಲಿಖಿತ ರೂಪದಲ್ಲಿ ನೀಡಿರಲಿಲ್ಲ. ಇದು ಕಾನೂನು ಉಲ್ಲಂಘನೆ ಎಂದು ತಿಳಿಸಿದ್ದಾರೆ.

ದರ್ಶನ್ ಯಾವುದೇ ಜಾಮೀನು ಷರತ್ತು ಉಲ್ಲಂಘಿಸಿಲ್ಲ, ರೇಣುಕಾಸ್ವಾಮಿ ಅಪಹರಣದಲ್ಲಿ ಅವರ ಪಾತ್ರದ ಬಗ್ಗೆ ಸಾಕ್ಷ ಇಲ್ಲ. ದರ್ಶನ್ ಸೂಚನೆಯಂದೆ ರೇಣುಕಾಸ್ವಾಮಿ ಅಪಹರಣವಾಗಿದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ, ದರ್ಶನ್ ಹಾಗೂ ಎ-2 ಆರೋಪಿ ನಡುವೆ ಕರೆ, ವಾಟ್ಸಪ್ ಸಂದೇಶ ವಿನಿಮಯವಾಗಿಲ್ಲ, ಸಾಕ್ಷಿಯಾಗಿರುವ ಮಲ್ಲಿಕಾರ್ಜುನ್, ನರೇಂದ್ರ ಸಿಂಗ್ ಹಾಗೂ ಕಿರಣ್ ಹೇಳಿಕೆಯಲ್ಲಿ ವಿಶ್ವಾಸಾರ್ಹತೆಯಿದೆ ಎಂದು ಹೇಳಲಾಗ್ತಿದೆ. ಹಾಗಾಗಿ ದರ್ಶನ್ ಜಾಮೀನು ರದ್ದು ಮಾಡುವುದು ಕಠಿಣ ಕ್ರಮವಾಗುತ್ತದೆ ಎಂದು ವಕೀಲರು ಸುಪ್ರೀಂಗೆ ಕಾರಣಗಳನ್ನು ಕೊಟ್ಟಿದ್ದಾರೆ.
3 ಸೆಕೆಂಡ್ ವೀಡಿಯೋ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿಲ್ಲ. ಪ್ರಾಸಿಕ್ಯೂಷನ್ ತಮ್ಮ ಕಥೆಗೆ ತಕ್ಕಂತೆ ರೇಣುಕಾಸ್ವಾಮಿ ಸಾವಿನ ಸಮಯ ನಿಗದಿಪಡಿಸಿದ್ದಾರೆ. ಇದನ್ನೆಲ್ಲಾ ಪರಿಗಣಿಸಿ ಜಾಮೀನು ರದ್ದು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 11ರಂದು ನಟ ದರ್ಶನ್ ಬಂಧನವಾಗಿತ್ತು. 131 ದಿನಗಳ ಬಳಿಕ ಮಧ್ಯಂತರ ಜಾಮೀನು ಪಡೆದು ದರ್ಶ್ ಹೊರ ಬಂದಿದ್ದರು. ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಬೇಕು ಎನ್ನುವ ನೆಪವೊಡ್ಡಿ 6 ವಾರಗಳ ಮಧ್ಯಂತ ಜಾಮೀನು ಪಡೆದಿದ್ದರು. ಒಂದು ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ದರ್ಶನ್ ಆಸ್ಪತ್ರ ಸೇರಿ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಬಳಿಕ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡರು. 'ಡೆವಿಲ್' ಸಿನಿಮಾ ಚಿತ್ರೀಕರಣ ಸಹ ಮುಗಿಸಿದ್ದಾರೆ.


Click it and Unblock the Notifications











