25ರಿಂದ ‘ದಸರಾ ರಂಗೋತ್ಸವ’: ರಂಗಾಯಣದಲ್ಲಿ 10 ದಿನ ನಾಟಕ ಪ್ರದರ್ಶನ
ರಂಗಾಯಣದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣಾರ್ಥ 'ದಸರಾ ರಂಗೋತ್ಸವ-2022'ವನ್ನು ಸೆ.25 ರಿಂದ ಅ.4ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.25ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ 'ಕೃಷ್ಣೇಗೌಡನ ಆನೆ' ನಾಟಕ ಪ್ರದರ್ಶನಗೊಳ್ಳಲಿದೆ. ಆರ್. ನಾಗೇಶ್ ನಿರ್ದೇಶನದಲ್ಲಿ ಮೈಸೂರು ರಂಗಾಯಣ ರೆಪರ್ಟರಿ ತಂಡ ಪ್ರಸ್ತುತ ಪಡಿಸಲಿದೆ. 26ರಂದು ಜಿ.ಕೆ.ನಂದಕುಮಾರ ರಚನೆ, ನಿರ್ದೇಶನದಲ್ಲಿ ಭಾರತೀಯ ರಂಗವಿದ್ಯಾಲಯ ತಂಡ 'ಸಮರಕಥಾ' ನಾಟಕ ಪ್ರಸ್ತುತ ಪಡಿಸಲಿದೆ. ದಸರಾ ರಂಗೋತ್ಸವ ಪ್ರಯುಕ್ತ ರಂಗಾಯಣ ಭೂಮಿಗೀತ ರಂಗವೇದಿಕೆಯಲ್ಲಿ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
''ಸೆ.27 ರಂದು ಪಿ. ಲಂಕೇಶ್ ರಚನೆಯ 'ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕವನ್ನು ನಾಗಾರ್ಜುನ ಆರಾಧ್ಯ ನಿರ್ದೇಶನದಲ್ಲಿ ಆಯಾಮ ರಂಗತಂಡ ಪ್ರಸ್ತುತ ಪಡಿಸಲಿದೆ. ಸೆ.28 ರಂದು ಸುಧಾ ಆಡುಕಳ ರಚನೆಯ 'ಮಾಧವಿ' ನಾಟಕವನ್ನು ಶ್ರೀಪಾದಭಟ್ ನಿರ್ದೇಶನದಲ್ಲಿ ಕೈವಲ್ಯ ಕಲಾಕೇಂದ್ರ ತಂಡ ಪ್ರಸ್ತುತ ಪಡಿಸಲಿದೆ. 29 ರಂದು ಶಶಿರಾಜ್ ಕಾವೂರ್ ರಚಿಸಿ ನಿರ್ದೇಶಿಸಿರುವ 'ದಾಟ್ಸ್ ಆಲ್ ಯುವರ್ ಆನರ್' ನಾಟಕವನ್ನು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ತಂಡ ಪ್ರಸ್ತುತ ಪಡಿಸಲಿದೆ.
ಸೆ.30 ರಂದು ಮಾಕ್ಸಿಂ ಗಾರ್ಕಿ ರಚನೆಯ 'ಈ ಕೆಳಗಿನವರು' ನಾಟಕವನ್ನು ವೀಣಾ ಶರ್ಮ ಭೂಸನೂರಮಠ ನಿರ್ದೇಶನದಲ್ಲಿ ಎನ್.ಎಸ್.ಡಿ ಬೆಂಗಳೂರು ತಂಡ ಪ್ರಸ್ತುತ ಪಡಿಸಲಿದೆ. ಅ.1 ರಂದು ಅರುಣ್ ಮಹೋಪಾಧ್ಯಾಯ ಅವರ 'ಮಾರೀಚನ ಬಂಧುಗಳು' ನಾಟಕವನ್ನು ವಾಲ್ಟರ್ ಡಿಸೋಜ ನಿರ್ದೇಶನದಲ್ಲಿ ಸ್ನೇಹರಂಗ ತಂಡ ಪ್ರಸ್ತುತ ಪಡಿಸಲಿದೆ.

ಅ.2 ರಂದು ಅಡ್ಡಂಡ ಸಿ. ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ 'ಹಲಗಲಿ ಸಮರ' ನಾಟಕವನ್ನು ರಂಗಾಯಣ ರೆಪರ್ಟರಿ ತಂಡ ಪ್ರಸ್ತುತ ಪಡಿಸಲಿದೆ. ಅ.3ರಂದು ವೌನೇಶ್ ಬಡಿಗೇರ ರಚನೆಯ 'ವಿಶಾಂಕೇ' ನಾಟಕವನ್ನು ಮಂಜುನಾಥ ಎಲ್.ಬಡಿಗೇರ ನಿರ್ದೇಶನದಲ್ಲಿ ಉಡುಪಿ ರಂಗಭೂಮಿ ತಂಡ ಪ್ರಸ್ತುತ ಪಡಿಸಲಿದೆ. ಅ.4 ರಂದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಆಯ್ದಭಾಗ 'ಮಮತೆಯ ಸುಳಿ' ನಾಟಕವನ್ನು ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ಪ್ರಸ್ತುತ ಪಡಿಸಲಿದೆ.'ಎಂದರು.
ಡಾ.ನ.ರತ್ನಗೆ 'ದಸರಾ ರಂಗಗೌರವ ಪುರಸ್ಕಾರ'
ಅ.4ರಂದು ಸಮಾರೋಪ ನಡೆಯಲಿದ್ದು, ಅಂದು ನಾಟಕಕಾರ ಡಾ.ನ.ರತ್ನ ಅವರಿಗೆ 'ದಸರಾ ರಂಗಗೌರವ ಪುರಸ್ಕಾರ' ನೀಡಲಾಗುತ್ತದೆ. ರತ್ನ ಅವರು ಮೈಸೂರಿನ ಹವ್ಯಾಸಿ ರಂಗಸಂಸ್ಥೆ 'ಸಮತೆಂತೋ' ಮೂಲಕ ಹವ್ಯಾಸಿ ರಂಗಭೂಮಿಯ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಿಗೆ, ಬೊಂತೆ, ಗೋಡೆ ಬೇಕೆ ಗೋಡೆ ಮತ್ತಿತರ ನಾಟಕಗಳನ್ನು ರಚಿಸಿದ್ದಾರೆ. ರೇಡಿಯೋ ನಾಟಕಗಳನ್ನು ರಚಿಸಿದ್ದಾರೆ, ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್, ಶಾಸಕ ಎಲ್.ನಾಗೇಂದ್ರ ಭಾಗವಹಿಸಲಿದ್ದಾರೆ,''ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು. ಎಂದು ಮಾಹಿತಿ ನೀಡಿದರು.


Click it and Unblock the Notifications











