ಉಪ್ಪಿಯ ‘ದಶಾವತಾರ’
ಇದು ಶ್ರಾವಣ ಮಾಸ. ಲೋಕ ಕಲ್ಯಾಣಾರ್ಥವಾಗಿ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಅವತಾರ ಎತ್ತಿದ ಮಾಸ. ಈ ಶುಭ ಮಾಸದಲ್ಲೇ ಕನ್ನಡದ ಕ್ರಿಯೇಟಿವ್ ಹೀರೋ, ನಿರ್ದೇಶಕ ಉಪೇಂದ್ರ ಅಲಿಯಾಸ್ ಉಪ್ಪಿ ಸಹ ದಶಾವತಾರ ಎತ್ತಲು ಸಿದ್ಧರಾಗಿದ್ದಾರೆ.
ಶುಕ್ರವಾರ ವರಮಹಾಲಕ್ಷ್ಮೀಯನ್ನು ಪೂಜಿಸಿ, ಶ್ರಾವಣ ಶನಿವಾರದಂದು ದಶಾವತಾರದ ಚಿತ್ರೀಕರಣದಲ್ಲಿ ಉಪ್ಪಿ ಪಾಲ್ಗೊಳ್ಳುತ್ತಿದ್ದಾರೆ. ರಾಮಾವತಾರ, ಕೃಷ್ಣಾವತಾರ, ವಾಮನಾವತಾರ, ಮತ್ಸ್ಯಾವತಾರ, ನರಸಿಂಹಾವತಾರ, ಪರಶುರಾಮಾವತಾರ.... ಕಲ್ಕಿ ಅವತಾರಗಳಲ್ಲಿ ತಮ್ಮ ನಾಯಕನನ್ನು ನೋಡಲು ಉಪ್ಪಿ ಅಭಿಮಾನಿಗಳು ಮುಂದಿನ ವರ್ಷದವರೆಗೆ ಕಾಯಲೇಬೇಕು.
ಶ್ರೀಮತಿ ಮೇಡಿಕೊಂಡ ಅಮರಾವತಿ ಅರ್ಪಿಸಿ, ಶ್ರೀ ವೆಂಕಟರಮಣ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಇನ್ನೂ ಹೆಸರಿಡದ (ಪ್ರೊಡಕ್ಷನ್ ನಂ 6) ಈ ಚಿತ್ರದ ಚಿತ್ರೀಕರಣ ಶ್ರಾವಣ ಶನಿವಾರ ಅಂದರೆ 4-8-2001ರಂದು ಆರಂಭವಾಗಲಿದೆ.
ಹೊಸ ವರುಷದ ಶುಭಾಶಯಗಳೊಂದಿಗೆ 1-1-2002 ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಸೂಚನೆಯನ್ನು ಚಿತ್ರ ತಂಡ ನೀಡಿದೆ. ಅಂದಹಾಗೆ ಈ ಚಿತ್ರದ ನಿರ್ದೇಶಕರು ಡಿ. ರಾಜೇಂದ್ರ ಬಾಬು. ಮೇಡಿಕೊಂಡ ವೆಂಕಟಮುರಳೀಕೃಷ್ಣ ನಿರ್ಮಾಪಕರು. ಈ ಚಿತ್ರದ ಹೆಚ್ಚಿನ ಸುದ್ದಿಗಳಿಗೆ ಎದಿರು ನೋಡುತ್ತಿರಿ.


Click it and Unblock the Notifications