ಬೆಣ್ಣೆನಗರಿ ಬೆಡಗಿಗೆ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಕಿರೀಟ: ಪತ್ನಿ ಸಾಧನೆ ಹಿಂದೆ ಪತಿಯ ಸಹಕಾರ
ದಾವಣಗೆರೆ: ಬಣ್ಣದ ಲೋಕ, ಫ್ಯಾಷನ್ ಲೋಕ ಎಲ್ಲರನ್ನೂ ಸೆಳೆದರೂ ಯಶಸ್ವಿಯಾಗೋದು ಕೆಲವೇ ಕೆಲವರು. ಅದರಲ್ಲಿಯೂ ಹಳ್ಳಿಯಲ್ಲಿ ಜನಿಸಿ, ದೆಹಲಿಯವರೆಗೆ ಹೋಗಿ ಹೆಸರು ಮಾಡುವುದು ಎಂದರೆ ಸುಲಭನಾ, ತುಂಬಾನೇ ಕಷ್ಟ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು, ಕಠಿಣ ಅಭ್ಯಾಸ, ಚಾಕಚಕ್ಯತೆ ಬೇಕೇ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅಣಜಿ ಎಂಬ ಗ್ರಾಮದಲ್ಲಿ ಜನಿಸಿ ದೆಹಲಿ ಮಟ್ಟದವರೆಗೆ ಹೋಗಿ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಗೆದ್ದ ಬೆಣ್ಣೆನಗರಿ ಬೆಡಗಿ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇದು.
ಅಂದ ಹಾಗೆ ಈ ಸಾಧನೆ ಮಾಡಿರುವುದು ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಚಂದ್ರಶೇಖರ್ ಹಾಗೂ ಕಮಲಮ್ಮ ದಂಪತಿ ಪುತ್ರಿ. ಮಗಳು ಪದವಿ ಪಡೆದು ಒಂದೊಳ್ಳೆ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂಬ ಕನಸು ಪೋಷಕರದ್ದಾಗಿತ್ತು. ಹಾಗಾಗಿ, ಹೆಚ್ಚು ಪ್ರೋತ್ಸಾಹ ಸಿಗಲಿಲ್ಲ. ಮನೆಯಲ್ಲಿನ ಹಣಕಾಸು ಸಹ ಇದಕ್ಕೆ ತೊಂದರೆ ಉಂಟು ಮಾಡಿತ್ತು. ಆದ್ರೆ, ಈಗ ಇವರು ಮಾಡಿರುವ ಸಾಧನೆ ದಾವಣಗೆರೆ ಮಾತ್ರವಲ್ಲ, ಕರ್ನಾಟಕವೇ ಮೆಚ್ಚುವಂಥದ್ದು.

ಹೌದು. ಇವರ ಹೆಸರು ಕೆ. ಸಿ. ಮೇಘಾ ಪಂಚಾಕ್ಷರಿ. ಒಬಿಎಂ ಈವೆಂಟ್ ಮತ್ತು ಕೆಬಿಜೆ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಬಿಎಂ ಈವೆಂಟ್ ಮ್ಯಾನೇಜಿಂಗ್ ಡೈರೈಕ್ಟರ್. ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ. ಇವರ ಪತಿ ಬಿ. ಪಂಚಾಕ್ಷರಿ. ಇವರ ಸಾಧನೆಗೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ಕೊಟ್ಟವರು. ಅತ್ತೆ ಮಾವ ಸಹಕಾರವನ್ನೂ ಮೇಘಾ ಮರೆಯುವುದಿಲ್ಲ.
ಕಳೆದ ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದ ಬಿ. ಪಂಚಾಕ್ಷರಿಯವರನ್ನು ವಿವಾಹವಾದ ಬಳಿಕ ಬಣ್ಣದ ಲೋಕ ಮತ್ತಷ್ಟು ಸೆಳೆಯಿತು. ಆರಂಭದಲ್ಲಿ ಎರಡೂ ಕುಟುಂಬದವರ ವಿರೋಧದ ನಡುವೆಯೂ ಸಾಧನೆ ಮಾಡಿರುವ ಗ್ರಾಮೀಣ ಪ್ರದೇಶದ ಪ್ರತಿಭಾವಂತೆ ಇವರು.
ಕಳೆದ ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಐಕಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಆಗ ನನ್ನ ಕೈಯಲ್ಲಿ ಸಾಧನೆ ಮಾಡಲು ಆಗುತ್ತಾ ಇಲ್ಲವೋ ಎಂಬ ಗೊಂದಲ ಇತ್ತು. ಖ್ಯಾತ ತರಬೇತುದಾರರಾದ ಪ್ರಿಯಾಂಕಾ ಕೊಳ್ವೇಕಾರ್ ಎಂಬುವವರು ಪ್ರೋತ್ಸಾಹ ನೀಡಿ, ಧೈರ್ಯ ತುಂಬಿದರು. ಫ್ಯಾಷನ್ ಲೋಕದ ಕುರಿತು, ಯಾವ ರೀತಿ ಸ್ಪರ್ಧೆ ಮಾಡಬೇಕು, ಹೇಗೆಲ್ಲಾ ನಡೆದುಕೊಳ್ಳಬೇಕು, ವಾಕ್ ಹೇಗಿರಬೇಕು, ವಾಕ್ ಇನ್ ಇಂಟರ್ವ್ಯೂನಲ್ಲಿ ಹೇಗೆ ಉತ್ತರ ಕೊಡಬೇಕು ಎಂಬ ಕುರಿತ ಪಟ್ಟುಗಳನ್ನು ಹೇಳಿಕೊಟ್ಟರು.
ಉತ್ತರ ಪ್ರದೇಶದ ಎಲೆಕ್ಟ್ರಾನಿಕ್ ಸಿಟಿ ಸೆಂಟರ್ ನೊಯಿಡಾದಲ್ಲಿ ಆಯೋಜಿಸಿದ್ದ 16 ನೇ ರಾಷ್ಟ್ರಮಟ್ಟದ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದಿಂದ ಫೈನಲಿಸ್ಟ್ ಆಗಿ ಆಯ್ಕೆಯಾದ ಏಕೈಕರು. ಮಾತ್ರವಲ್ಲ, ಇದಕ್ಕಾಗಿ ಸಾಕಷ್ಟು ತಾಲೀಮು ನಡೆಸಿದ್ದರು. ಕಠಿಣ ಪರಿಶ್ರಮ ಪಟ್ಟಿದ್ದರು.
ಕಳೆದ ಫೆಬ್ರವರಿ 2 ರಂದು ನಡೆದ ಆನ್ ಲೈನ್ ಆಡಿಶನ್ ಸೌಂದರ್ಯ ಸ್ಪರ್ಧೆಯಲ್ಲಿ ವಿವಿಧ ನಗರಗಳ ಹಾಗೂ ವಿವಿಧ ರಾಜ್ಯಗಳಿಂದ ಆಡಿಷನ್ ನೀಡಿದ 100 ಸ್ಪರ್ಧಿಗಳ ಪೈಕಿ ಟಾಪ್ 25 ಫೈನಲಿಸ್ಟ್ ಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿತ್ತು.
ಈ ಮೂಲಕ ಫೈನಲ್ ಗೆ ಆಯ್ಕೆಯಾದ ಸ್ಪರ್ಧಾಳುಗಳು ನೋಯಿಡಾದ ಇಂಪೀರಿಯಲ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಎಸ್. ಕೆ. ಸ್ಟಾರ್ ಎಂಟರ್ ಟೈನ್ ಮೆಂಟ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು ಆರು ಸುತ್ತುಗಳಿದ್ದವು. ಸ್ಪರ್ಧಾಳುಗಳು ಈ ಸುತ್ತಿನಲ್ಲಿ ಗೆಲ್ಲಬೇಕಿತ್ತು. ಅತಿ ಹೆಚ್ಚು ಅಂಕ ಪಡೆದವರು ವಿಜೇತರಾಗುತ್ತಾರೆ. ಆದ್ರೆ, ಮೇಘಾ ಆರು ವಿಭಾಗಗಳಲ್ಲಿಯೂ ಪೂರ್ಣ ಪ್ರಮಾಣದ ಅಂಕ ಪಡೆಯುವ ಮೂಲಕ ಮಿಸ್ಸಸ್ ಯೂನಿವರ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
- ಆಡಿಷನ್
- ಸಾಂಪ್ರಾದಾಯಿಕ ನಡಿಗೆ
- ಇಂಟ್ರಡಕ್ಷನ್ ರೌಂಡ್
- ಈವ್ನಿಂಗ್ ಗೌನ್ ರೌಂಡ್
- ಕ್ವೆಷನ್ ಅಂಡ್ ಆನ್ಸರ್ ರೌಂಡ್
- ವಿನ್ನರ್ ಅನೌನ್ಸ್ ಮೆಂಟ್
ಪ್ರತಿಯೊಂದು ಸುತ್ತುಗಳಲ್ಲಿಯೂ ಕೆ. ಸಿ. ಮೇಘಾ ಅವರು, ಪೂರ್ಣ ಪ್ರಮಾಣದ ಅಂಕಗಳನ್ನು ಪಡೆಯುವ ಮೂಲಕ ಈ ಟೈಟಲ್ ಮುಡಿಗೇರಿಸಿಕೊಂಡು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತಂದಿದ್ದಾರೆ. ಖ್ಯಾತ ಸ್ಪರ್ಧೆಯ ತೀರ್ಪುಗಾರರಾದ ಸಿದ್ದೇಶ್ ಜಾಧವ್ ಸೇರಿದಂತೆ ಅನೇಕರು ತೀರ್ಪುಗಾರರಾಗಿದ್ದರು.
ತನಗೂ ಮೊದಲಿನಿಂದಲೂ ಫ್ಯಾಷನ್ ಲೋಕದತ್ತ ಆಸಕ್ತಿ ಇತ್ತು. ಆದ್ರೆ, ಹಣಕಾಸಿನ ಸಮಸ್ಯೆ, ಸರಿಯಾದ ಮಾಹಿತಿ ಇರದ ಕಾರಣ ಪಾಲ್ಗೊಳ್ಳಲು ಆಗಲಿಲ್ಲ. ಈ ಬಗ್ಗೆ ಎಷ್ಟೋ ಜನರಿಗೆ ಮಾಹಿತಿ ಇಲ್ಲ. ಹಣವಿದ್ದವರಿಗೆ ಮಾತ್ರ ಎಂಬ ಮಾತಿದೆ. ಆದ್ರೆ, ತಮ್ಮ ಇತಿಮಿತಿಯಲ್ಲಿಯೂ ಪಾಲ್ಗೊಂಡು, ಇರುವುದನ್ನೇ ಬಳಸಿಕೊಂಡು ಮೇಲೆ ಬರಬಹುದು. ಇದಕ್ಕೆ ಏಕಾಗ್ರತೆ, ಕಠಿಣ ಪರಿಶ್ರಮ ಸೇರಿದಂತೆ ಹಲವು ರೀತಿಯಲ್ಲಿ ತಯಾರಾಗಬೇಕಾಗುತ್ತದೆ. ನಾನು ಮದುವೆಯಾದ ಮೇಲೆ ನನ್ನ ಪತಿ ತುಂಬಾನೇ ಬೆಂಬಲ, ಪ್ರೋತ್ಸಾಹ ನೀಡಿದರು. ಅತ್ತೆ - ಮಾವ ಕೊಟ್ಟ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಫ್ಯಾಷನ್ ಶೋ ನಡೆಸಬೇಕು ಎಂಬ ಇರಾದೆ ಎನ್ನುತ್ತಾರೆ ಮೇಘಾ.
ಇನ್ನು ಮೇಘಾ ಪತಿ ಪಂಚಾಕ್ಷರಿ ಅವರು ಪತ್ನಿಯ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದವರಾದ ಕಾರಣ ಮನೆಯಲ್ಲಿ ಯಾರಿಗೂ ಫ್ಯಾಷನ್ ಲೋಕಕ್ಕೆ ಮೇಘಾ ಹೋಗುವುದು ಇಷ್ಟವಿರಲಿಲ್ಲ. ಆರಂಭದಲ್ಲಿ ವಿರೋಧ, ಕಷ್ಟಗಳನ್ನು ಎದುರಿಸಬೇಕಾಯಿತು. ಹಣ ಹೊಂದಿಸುವುದು ಕಷ್ಟವಾಗಿತ್ತು. ಆಮೇಲೆ ಪತ್ನಿಯ ಅಭಿರುಚಿ ಈಡೇರಿಸಬೇಕೆಂಬ ಕಾರಣಕ್ಕೆ ಪ್ರೋತ್ಸಾಹ ನೀಡಿದೆ. ಈಗ ಮೇಘಾ ಮಾಡಿರುವ ಸಾಧನೆ ಕಂಡು ಎಲ್ಲರೂ ಕೊಂಡಾಡುತ್ತಿದ್ದಾರೆ. ಎಲ್ಲರಿಗೂ ಸಂತಸ ತಂದಿದೆ ಎಂದು ಪಂಚಾಕ್ಷರಿ ತಿಳಿಸಿದರು.


Click it and Unblock the Notifications











