ಈ ಹೊಟೇಲ್ನಲ್ಲಿ ಸಿಗುತ್ತೆ ಅಪ್ಪುಗೆ ಪ್ರಿಯವಾದ ಆಹಾರ!
ಕರುನಾಡಿನ ಕಣ್ಮಣಿ, ಜನರ ಪಾಲಿನ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ವರ್ಷ. ಅರ್ಥಪೂರ್ಣವಾಗಿ ಅಪ್ಪು ಸ್ಮರಿಸುವ ಕಾರ್ಯ ರಾಜ್ಯದಾದ್ಯಂತ ನಡೆದಿದೆ. ಅನ್ನಸಂತರ್ಪಣೆ, ರಕ್ತದಾನ, ಸಸಿ ನೆಡುವ ಕಾರ್ಯಕ್ರಮ, ಇತರೆ ಸಾಮಾಜಿಕ ಸೇವಾ ಕೆಲಸಗಳು ನಡೆದಿವೆ.
ಎಲ್ಲರಿಗೂ ಗೊತ್ತಿರುವಂತೆ ಅಪ್ಪು ಅದ್ಭುತ ನೃತ್ಯಗಾರ, ಹಾಡುಗಾರ, ನಟ, ಸಾಹಸಿ, ಪ್ರವಾಸಿಗ ಹಾಗೂ ಮಾನವತಾವಾದಿ ಆಗಿದ್ದರು. ಜೊತೆಗೆ ಅಪ್ಪು ಆಹಾರ ಪ್ರಿಯರೂ ಆಗಿದ್ದರು. ಹಾಗಾಗಿಯೇ ಅವರ ನೆನಪಿನಲ್ಲಿ ಕೆಲ ದಿನಗಳ ಹಿಂದೆ ರಾಜ್ಯದಾದ್ಯಂತ ಅಪ್ಪು ಆಹಾರೋತ್ಸವ ನಡೆಸಲಾಗಿತ್ತು.
ಈ ಆಹಾರೋತ್ಸವ ಹಲವು ಜಿಲ್ಲೆಗಳ ಹೋಟೆಲ್ಗಳಲ್ಲಿ ಈಗಲೂ ಜಾರಿಯಲ್ಲಿದ್ದು, ಇಂದು ಅಪ್ಪು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಆಗಿರುವ ಕಾರಣ ಹಲವೆಡೆ ಹೋಟೆಲ್ಗಳಲ್ಲಿ ಅಪ್ಪುವಿನ ನೆಚ್ಚಿನ ತಿನಿಸುಗಳನ್ನು ಗ್ರಾಹಕರಿಗೆ ಉಣಪಡಿಸಲಾಗುತ್ತಿದೆ. ದಾಣವಗೆರೆಯಲ್ಲಿಯೂ ಅಪ್ಪು ಸ್ಮರಣೆ ಪ್ರಯುಕ್ತ ಕೆಲ ಹೋಟೆಲ್ಗಳಲ್ಲಿ ಅಪ್ಪುವಿಗೆ ಇಷ್ಟವಾದ ತಿನಿಸುಗಳನ್ನು ಉಣಬಡಿಸಲಾಗುತ್ತಿದೆ.

ಗ್ರೀನ್ಪಾರ್ಕ್ ಹೋಟೆಲ್ನಲ್ಲಿ ಅಪ್ಪು ಸ್ಮರಣೆ
ದಾವಣಗೆರೆಯ ಶಾಮನೂರು ರಸ್ತೆಯಲ್ಲಿನ ಗ್ರೀನ್ ಪಾರ್ಕ್ ಹೊಟೇಲ್ ನಲ್ಲಿ ಪುನೀತ್ ರಾಜ್ಕುಮಾರ್ ಅವರ 1 ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಪ್ಪುರ ಮೆಚ್ಚಿನ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ಬಡಿಸುವ ವಿಭಿನ್ನವಾಗಿ ಅಪ್ಪುಗೆ ಗೌರವ ಸಲ್ಲಿಸಲಾಯ್ತು. ಯಶಸ್ವಿ ಪ್ರದರ್ಶನ ಕಾಣುತ್ತಿರುವ " ಗಂಧದ ಗುಡಿ " ಚಲನಚಿತ್ರ ತಂಡಕ್ಕೆ ಶುಭ ಕೋರಲಾಯಿತು.

ಇಡೀ ನವೆಂಬರ್ ತಿಂಗಳಲ್ಲಿ ಅಪ್ಪು ಆಹಾರೋತ್ಸವ
ಇಡೀ ನವೆಂಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ರವರ ಮೆಚ್ಚಿನ ತಿನಿಸುಗಳನ್ನು ತಯಾರಿಸಿ ಬಡಿಸುವ ಸಂಕಲ್ಪ ಹೊಂದಿರುವ ಗ್ರೀನ್ ಪಾರ್ಕ್ ತಂಡದ ಸಿಬ್ಬಂದಿ ದಾವಣಗೆರೆ ಜನತೆಗೆ ಈ ಮೂಲಕ ಅಪ್ಪು ಅವನ್ನು ಸ್ಮರಿಸುತ್ತಾರೆ. ಪುನೀತ್ ಅವರಿಗೆ ಇಷ್ಟವಾದ ಸಸ್ಯಹಾರ ಹಾಗೂ ನಾನ್ ವೆಜ್ ಊಟವನ್ನು ರುಚಿಕಟ್ಟಾಗಿ ತಯಾರಿಸಿ ಬರುವ ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಿದೆ. ಈ ಮೂಲಕ ಪುನೀತ್ ರಾಜಕುಮಾರ್ ಅವರ ಭೋಜನಪ್ರಿಯತೆಗೆ ಅವರ ಅಭಿಮಾನಿಗಳಿಗೂ ಸಿಗುವ ಅವಕಾಶ ಕಲ್ಪಿಸಿಕೊಡಲಾಗುವುದು. ಕೇವಲ ವ್ಯಾವಹರಿಕವಾಗಿ ಮಾಡುತ್ತಿಲ್ಲ. ಇದೊಂದು ಅಪ್ಪು ಸ್ಮರಿಸಿಕೊಳ್ಳುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಹೊಟೇಲ್ ಗ್ರೀನ್ ಪಾರ್ಕ್ ಮಾಲೀಕರು ತಿಳಿಸಿದ್ದಾರೆ.

ಅಪ್ಪು ಹೆಸರಲ್ಲಿ ಅನ್ನ ಸಂತರ್ಪಣೆ
ದಾವಣಗೆರೆ ನಗರದ ಕೆ. ಬಿ. ಬಡಾವಣೆಯಲ್ಲಿ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ವರ್ಷವಾದ ಕಾರಣ ಅಭಿಮಾನಿಗಳ ಬಳಗ ಅನ್ನಸಂತರ್ಪಣೆ ಆಯೋಜಿಸಿತ್ತು. ಮಟಿಕಲ್ ಸ್ವಾಮಿ, ಬಸವರಾಜ್ ನೇತೃತ್ವದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭೋಜನ ಸ್ವೀಕರಿಸಿದರು. ಕೇಸರಿಬಾತ್, ಪಲಾವ್ ಮಾಡಿಸಲಾಗಿತ್ತು. ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಎಸ್. ಟಿ. ವೀರೇಶ್, ಅಜಯ್ ಕುಮಾರ್, ವಾಣಿ ಲ್ಯಾಂಡ್ ಲಿಂಕ್ಸ್ ಮಾಲೀಕರಾದ ನಾಗಭೂಷಣ್ ವಾಣಿ, ಸಾಮಾಜಿಕ ಸೇವಾಕರ್ತರಾದ ಮಹಾಂತೇಶ್ ಒಣರೊಟ್ಟಿ ಅವರು ಅಪ್ಪು ಅಭಿಮಾನಿಗಳಿಗೆ ಪಲಾವ್, ಕೇಸರಿಬಾತ್ ಬಿಡಿಸಿದರು.

ಹಲವೆಡೆ ಅನ್ನ ಸಂತರ್ಪಣೆ
ಅಪ್ಪು ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಅಗಲಿದ ನಟನಿಗೆ ಗೌರವಪೂರ್ವಕವಾಗಿ, ಭಕ್ತಿಪೂರ್ವಕವಾಗಿ ನಮಿಸಿ, ಸ್ಮರಿಸಿಕೊಳ್ಳಲಾಯಿತು. ಭೋಜನಪ್ರಿಯರಾದ ಅಪ್ಪು ಅಭಿಮಾನಿಗಳಿಗೆ ನಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಅನ್ನದಾಸೋಹ ಮಾಡಬೇಕೆಂಬ ಬಯಕೆ ಇತ್ತು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆವು. ಜನರು ಹಾಗೂ ಅಪ್ಪು ಅಭಿಮಾನಿಗಳ ಸ್ಪಂದನೆ ತುಂಬಾನೇ ಖುಷಿಕೊಟ್ಟಿದೆ ಎಂದು ಮಟಿಕಲ್ ಸ್ವಾಮಿ ಮತ್ತು ಬಸವರಾಜ್ ತಿಳಿಸಿದರು. ದಾವಣಗೆರೆ ನಗರದ ಜಯದೇವ ವೃತ್ತದಲ್ಲಿಯೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ರಾಮ್ ಅಂಡ್ ಕೋ ಸರ್ಕಲ್, ಹೊಟೇಲ್ ಗ್ರೀನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿಯೂ ಅನ್ನದಾಸೋಹ ನೆರವೇರಿತು. ಎಲ್ಲಾ ತಾಲೂಕುಗಳಲ್ಲಿಯೂ ಅಪ್ಪು ಸ್ಮರಣೆ ನಡೆಯಿತು.


Click it and Unblock the Notifications











