ಹೆಸರು ಸೂಚಿಸಿದ್ದು ದೂ.ದ. ನಿರ್ದೇಶಕರು,
ಬೆಂಗಳೂರು : ದೂರದರ್ಶನ ನಿರ್ದೇಶಕರ ಸೂಚನೆಯ ಮೇರೆಗೆ ಮಾಯಾಮೃಗ ಹಾಗೂ ಸಾಧನೆ ಧಾರಾವಾಹಿಗಳಿಗೆ ಪ್ರಶಸ್ತಿ ನೀಡಲಾಗಿದೆಯೇ ಹೊರತು, ಪ್ರಶಸ್ತಿ ನೀಡುವಲ್ಲಿ ವಾರ್ತಾ ಇಲಾಖೆ ಯಾವುದೇ ಹಸ್ತಕ್ಷೇಪ ನಡೆಸಿಲ್ಲ ಎಂದು ವಾರ್ತಾ ಇಲಾಖೆ ನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಕಿರುತೆರೆ ಧಾರಾವಾಹಿಗಳಿಗೆ ಈ ವರ್ಷದಿಂದಲೇ ಪ್ರಶಸ್ತಿ ನೀಡಿಕೆ ಆರಂಭವಾಗಲಿ ಎನ್ನುವ ಸದುದ್ದೇಶದಿಂದ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರಶಸ್ತಿಗಳನ್ನು ನೀಡುವಾಗ ವಾರ್ತಾ ಇಲಾಖೆ ತೀರ್ಪುಗಾರರ ಸ್ಥಾನದಲ್ಲಿ ಇರಲಿಲ್ಲ ಎಂದು ಗುರುಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಾಮಾಜಿಕ ಕಳಕಳಿ ಹಾಗೂ ಜನಪ್ರಿಯ ಮಾನದಂಡವನ್ನುನಸರಿಸಿ ಪ್ರಶಸ್ತಿಗೆ ಧಾರಾವಾಹಿಗಳನ್ನು ಸೂಚಿಸುವಂತೆ ದೂರದರ್ಶನದ ನಿರ್ದೇಶಕರನ್ನು ಕೋರಲಾಯಿತು. ಅವರ ಸಲಹೆಯ ಮೇರೆಗೆ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದರು. ಧಾರಾವಾಹಿಗಳಿಗೆ ಪ್ರಶಸ್ತಿ ನೀಡಿರುವ ಮಾನದಂಡದ ಬಗೆಗೆ ವ್ಯಾಪಕ ಟೀಕೆಗಳು ಕೇಳ ಬಂದಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದರು.
ಕಿರುತೆರೆ ಮಾಧ್ಯಮದ ವ್ಯಾಪ್ತಿ ಹಿರಿದಾಗಿದೆ. ಆಯ್ಕೆ ಸಮಿತಿ ರಚಿಸುವ ಪ್ರಕ್ರಿಯೆಗೆ ಹಾಗೂ ಎಲ್ಲ ಚಾನಲ್ಗಳ ಧಾರಾವಾಹಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಕೆಲವು ತಿಂಗಳುಗಳೇ ಬೇಕಾಗುತ್ತದೆ. ಸಮಯಾವಕಾಶ ಕಡಿಮೆ ಇದ್ದುದರಿಂದ ದೂರದರ್ಶನದ ಧಾರಾವಾಹಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಯಿತು. ಮುಂದಿನ ಸಾಲಿನಿಂದ ಆಯ್ಕೆ ಸಮಿತಿ ರಚಿಸಿ ಪ್ರಶಸ್ತಿಗಳನ್ನು ನೀಡಲಾಗುವುದು, ಎಲ್ಲ ಚಾನಲ್ಗಳ ಧಾರಾವಾಹಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಗುರುಪ್ರಸಾದ್ ಹೇಳಿದರು.


Click it and Unblock the Notifications