ಅಣ್ಣಾವ್ರ ಸಿನಿಮಾ ಗೀತೆಗಳಲ್ಲಿ ಇಣುಕಿತ್ತು ಡಬಲ್ ಮೀನಿಂಗ್; 'ಪ್ರೇಮಲೋಕ'ದಲ್ಲಿ ಅಸಭ್ಯ ಸಾಹಿತ್ಯ ಘಾಟು
'ಕೆಡಿ' ಸಿನಿಮಾ ಹಾಡಿನ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ. ಹೀಗೆ ಸಿನಿಮಾ ಹಾಡುಗಳ ಸಾಹಿತ್ಯ ಟೀಕೆಗೆ ಗುರಿ ಆಗುತ್ತಿರುವುದು ಇದೇ ಮೊದಲಲ್ಲ. ಬೇರೆ ಭಾಷೆಯ ಸಿನಿಮಾ ಹಾಡುಗಳನ್ನು ಬಿಟ್ಟುಬಿಡಿ. ಕನ್ನಡದಲ್ಲೇ ಕೆಲ ಸಿನಿಮಾ ಗೀತೆಗಳಲ್ಲಿ ಹೀಗೆ ಅಸಭ್ಯ, ಅಸಂಬದ್ಧ ಸಾಲುಗಳು, ಪದಗಳು ಈ ಹಿಂದೆ ಕೂಡ ಸೇರಿಕೊಂಡು ಟೀಕೆಗೆ ಗುರಿಯಾಗಿತ್ತು.
ದಶಕಗಳ ಹಿಂದೆ ಡಾ. ರಾಜ್ಕುಮಾರ್ ನಟನೆಯ ಸಿನಿಮಾ ಹಾಡುಗಳಲ್ಲಿ ಕೂಡ ಡಬಲ್ ಮೀನಿಂಗ್ ಎನಿಸುವ ಸಾಲುಗಳಿದ್ದವು. ಹಂಸಲೇಖ ಸಂಗೀತ ಸಂಯೋಜಿಸಿ ಸಾಹಿತ್ಯ ರಚಿಸಿದ್ದ ಗೀತೆಗಳಲ್ಲಿ ಕೂಡ ಪೋಲಿತನ, ತುಂಟತನದ ಎಲ್ಲೆ ಮೀರಿ ಸಾಹಿತ್ಯ ಚರ್ಚೆಗೆ ಗುರಿ ಆಗಿದ್ದು ಇದೆ. ಕೆಲ ಸಿನಿಮಾ ಹಾಡುಗಳನ್ನು ಸೆನ್ಸಾರ್ ಮಂಡಳಿ ಹೇಳಿ ಬದಲಿಸಿರುವುದು, ತೆಗೆದು ಹಾಕಿಸಿರುವುದು ಕೂಡ ನಡೆದಿದೆ. ಕಾಶೀನಾಥ್, ಉಪೇಂದ್ರ ಅವರ ಸಿನಿಮಾಗಳಲ್ಲಿ ಸಂಭಾಷಣೆ, ಹಾಡಿನ ಸಾಹಿತ್ಯ ಕೆಲವೊಮ್ಮೆ ಟೀಕೆಗೆ ಗುರಿ ಆಗಿದ್ದು ಇದೆ.

ಮದ್ಯದ ಬಾಟಲ್ ಹಾಗೂ ಉಪ್ಪಿನಕಾಯಿ ಬಗ್ಗೆ ಹೀಗೆ ಸಾಹಿತ್ಯ ಬರೆದಿದ್ದೀನಿ, ಅದಕ್ಕೆ ಏನೇನೊ ಅರ್ಥ ಕಲ್ಪಿಸಬೇಡಿ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ. 'ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ಹಿಂದಿ ವರ್ಷನ್ ಯೂಟ್ಯೂಬ್ನಿಂದ ಎತ್ತಂಡಿಯಾಗಿದೆ. ಕೇಂದ್ರ ಸರ್ಕಾರವೇ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೆ (CBFC) ಸೂಚನೆ ನೀಡಿದೆ. ಸಾರ್ವಜನಿಕ ಸಭ್ಯತೆಗೆ ಧಕ್ಕೆ ತರುವಂತಹ ಈ ಹಾಡನ್ನು ಯೂಟ್ಯೂಬ್ ಸೇರಿದಂತೆ ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕುವಂತೆ ಸೂಚನೆ ನೀಡಿದೆ. ಅಂದಹಾಗೆ ಕನ್ನಡದಲ್ಲಿ ಈ ಹಿಂದೆ ಯಾವೆಲ್ಲಾ ಸಿನಿಮಾ ಗೀತೆಗಳು ಹೀಗೆ ಚರ್ಚೆಗೆ ಗುರಿಯಾಗಿತ್ತು ಗೊತ್ತಾ?
ಅಣ್ಣಾವ್ರು ಸದಭಿರುಚಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಯಾವುದೇ ಅಶ್ಲೀಲ, ಸಭ್ಯ ಸನ್ನಿವೇಶಗಳು ಅವರ ಸಿನಿಮಾಗಳಲ್ಲಿ ಇರುತ್ತಿರಲಿಲ್ಲ. ಆದಾಗ್ಯೂ ಒಂದೆರಡು ಹಾಡುಗಳಲ್ಲಿ ಎಲ್ಲೆ ಮೀರಿ ಹಾಡಿನಲ್ಲಿ ದ್ವಂದ್ವಾರ್ಥದ ಸಾಹಿತ್ಯ ಸದ್ದು ಮಾಡಿತ್ತು. ಅವತ್ತಿನ ಕಾಲಕ್ಕೆ ಪತ್ರಿಕೆಗಳಲ್ಲಿ ಈ ಬಗ್ಗೆ ಟೀಕಿಸಿ ಬರೆದಿದ್ದರು. 1970ರಲ್ಲಿ ಬಂದಿದ್ದ 'ಮಿ. ರಾಜ್ಕುಮಾರ್' ಚಿತ್ರದಲ್ಲಿ "ಬಳ್ಳಿಯೊಂದು ಬಳುಕುತ್ತಿದೆ" ಎನ್ನು ಹಾಡಿತ್ತು. ಅದು ಹಿಟ್ ಆಗಿತ್ತು. ಇದೇ ಹಾಡಿನಲ್ಲಿ "ತುಂಬಿದ ಕೊಡವೆರಡು, ಜೇನಿನ ತುಟಿ ಎರಡು ಮನವನ್ನು ಕೆರಳಿಸುತ್ತದೆ, ತನುವನ್ನು ಸೆಳೆಯುತ್ತಿದೆ" ಎನ್ನುವ ಸಾಲುಗಳಿವೆ. ಅದನ್ನು ಚಿತ್ರೀಕರಿಸಿರುವ ಪರಿ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

'ದೇವರ ಮಕ್ಕಳು' ಚಿತ್ರದ ಹಾಡುಗಳಿಗೆ ಚಿ. ಉದಯ್ಶಂಕರ್ ಸಾಹಿತ್ಯ ಬರೆದಿದ್ದರು. ಚಿತ್ರದಲ್ಲಿ ನಟಿ ಜಯಂತಿ ಆಟದ ಸಾಮಾನು ಮಾರುವ ಹುಡುಗಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಬಂಡಿಯಲ್ಲಿ ಮಕ್ಕಳು ಆಡುವ ಆಟದ ಸಾಮಾನುಗಳನ್ನು ಮಾರುತ್ತಾ ಬೀದಿಗಳಲ್ಲಿ ಗೌರಿ ಹಾಡಿ ಕುಣಿಯುವ ಹಾಡಿದೆ. 'ಬೇಕೇನು ಸಾಮಾನು ನೋಡು ನೋಡು' ಎನ್ನುವ ಹಾಡಿನ ಸಾಲುಗಳು, ಅದನ್ನು ಚಿತ್ರೀಕರಿಸಿದ್ದು, ಜಯಂತಿ ಭಾವಾಭಿನಯ ಕೆಲವರಿಗೆ ಇರಿಸು ಮುರಿಸು ಉಂಟು ಮಾಡಿತ್ತು. ಆಕಾಶವಾಣಿಯಲ್ಲಿ ಈ ಹಾಡು ಪ್ರಸಾರ ಮಾಡಲು ಹಿಂದೇಟು ಹಾಕಿದ್ದರು ಎನ್ನಲಾಗುತ್ತದೆ.
'ತ್ರಿಮೂರ್ತಿ' ಚಿತ್ರದಲ್ಲಿ 'ಹಣ್ಣು ಮಾಗಿದೆ' ಎನ್ನುವ ಹಾಡನ್ನು ಕೂಡ ಚಿ. ಉದಯ್ಶಂಕರ್ ಬರೆದಿದ್ದರು. ಈ ಹಾಡಿನ ಸಾಹಿತ್ಯ ಕೂಡ ಡಬಲ್ ಮೀನಿಂಗ್ ಎನಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದರು. ಈ ಮೂರು ಹಾಡುಗಳನ್ನು ಚಿ. ಉದಯ್ಶಂಕರ್ ಬರೆದಿದ್ದರು. ಇದೇ ವಿಚಾರದ ಬಗ್ಗೆ ಒಮ್ಮೆ ಪ್ರಶ್ನಿಸಿದಾಗ "ಅರೇ ಸಾಹಿತ್ಯದಲ್ಲಿ ಯಾವುದೇ ದ್ವಂದ್ವಾರ್ಥ ಇಲ್ಲ, ಕೇಳಿಸಿಕೊಳ್ಳುವವರ ಮನಸ್ಸಿನಲ್ಲಿ ಇರುವುದು. ಅವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ, ಹಾಗೆ ಅದು ಅನ್ನಿಸುತ್ತೆ. ನನಗೇನು ದ್ವಂದ್ವಾರ್ಥ ಇದೆ ಅನ್ನಿಸಲ್ಲ" ಎಂದಿದ್ದರಂತೆ.
'ಹೊಸ ತೀರ್ಪು' ಚಿತ್ರದಲ್ಲಿ 'ಹತ್ತೇ ಪೈಸಕ್ಕೆ ಬೆನ್ನಿ ತೋರಿಸುವೆ........ ಸಿನಿಮಾ ಒಳ್ಳೆ ಸಿನಿಮಾ.." ಎನ್ನುವ ಸಾಹಿತ್ಯವನ್ನು ಚಿ. ಉದಯ್ಶಂಕರ್ ಬರೆದಿದ್ದರು. 'ರಾಮ-ಲಕ್ಷ್ಮಣ' ಚಿತ್ರದಲ್ಲಿ "ಮುಟ್ಟಿ ನೋಡು ಇಲ್ಲಿ ಬಂದು.. ಎತ್ತಿ ನೋಡು ಕಾಲು ಹಿಡಿದು.. ನಾಡು ಕೋಳಿ, ಕಾಡು ಕೋಳಿ" ಎಂದು ಶುರುವಾಗುವ ಹಾಡನ್ನು ಉದಯ್ಶಂಕರ್ ರಚಿಸಿದ್ದರು.
ರವಿಚಂದ್ರನ್ ಹಾಗೂ ಹಂಸಲೇಖ ಜೋಡಿಯ 'ಪ್ರೇಮಲೋಕ' ಚಿತ್ರದ 'ಏಯ್ ಗಂಗೂ ಈ ಬೈಕು ಕಲಿಸಿಕೊಡು ನಂಗೂ' ಹಾಡಿನ ಸಾಹಿತ್ಯದ ಬಗ್ಗೆ ಕೂಡ ಟೀಕೆ ವ್ಯಕ್ತವಾಗಿತ್ತು. 'ಬಾವ ಬಾಮೈದ' ಚಿತ್ರದ 'ಜಿಂಗಿಲಕ ಜಿಂಗಿಲಕ ಬಾ' ಹಾಡಿನ ಸಾಹಿತ್ಯದಲ್ಲಿ ಕೂಡ ಡಬಲ್ ಮೀನಿಂಗ್ ಇದೆ ಎಂದು ಚರ್ಚೆ ನಡೆದಿತ್ತು. 'ಹಳ್ಳಿಮೇಷ್ಟ್ರೇ..ಹಳ್ಳಿಮೇಷ್ಟ್ರೇ ಪಾಠ ಮಾಡಿ ಬನ್ನಿ' ಹಾಡನ್ನು ಕಟ್ಟಿಕೊಟ್ಟಿದ್ದ ರೀತಿ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು.
'ಪರಾರಿ' ಚಿತ್ರದಲ್ಲಿ 'ಬೀಜ ಮೊದಲಾ ಮರ ಮೊದಲಾ' ಎನ್ನುವ ಹಾಡು ಕೂಡ ಟೀಕೆ ಗುರಿಯಾಗಿತ್ತು. ಸೆನ್ಸಾರ್ ಮಂಡಳಿ ಈ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗೆ ಹೇಳ್ತಾ ಹೋದರೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಹೀಗೆ ದ್ವಂದ್ವಾರ್ಥದ ಸಾಹಿತ್ಯ ಸೇರಿಕೊಂಡು ಚರ್ಚೆಗೆ ಗ್ರಾಸವಾಗಿದ್ದು ಸುಳ್ಳಲ್ಲ.


Click it and Unblock the Notifications











