ಬ್ರಿಗೇಡ್ ರಸ್ತೆಯಲ್ಲಿ ದೀಪಿಕಾ ಬಿಸಿಬೇಳೆ 'ಬಾತ್'
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು ಎಂಬ ಗಾದೆ ಮಾತೊಂದಿದೆ. ಈ ಗಾದೆ ಈಗ ಯಾಕೆ ನೆನಪಾಯಿತೆಂದರೆ ಬಾಲಿವುಡ್ ಬಿಂಕದ ಸಿಂಗಾರಿ ದೀಪಿಕಾ ಪಡುಕೋಣೆ ಹಟ ಬಿಟ್ಟಿದ್ದಾರೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತಿದ್ದ ದೀಪಿಕಾ ಹೊಸ ರಾಗ ಹಾಡುತ್ತಿದ್ದಾರೆ.
ಕನ್ನಡ ಚಿತ್ರದ ಮೂಲಕ ಬೆಳ್ಳಿಪರದೆಗೆ ಅಂಬೆಗಾಲಿಕ್ಕಿದ ದೀಪಿಕಾ ಬಳಿಕ ಬೆಳ್ಳಿಪರದೆ ಮೇಲೆ ಮಿಂಚುತ್ತಿರುವುದು ಗೊತ್ತೇ ಇದೆ. ಸ್ಯಾಂಡಲ್ ವುಡ್ ಅಂದ್ರೆ ಏನು? ಎಂದು ಒಮ್ಮೆ ಕೇಳಿ ಕನ್ನಡ ಚಿತ್ರರಂಗದ ಬಗ್ಗೆ ತಿರಸ್ಕಾರದ ನೋಟ ಬೀರಿದ್ದ ದೀಪಿಕಾ ಈಗ ಕನ್ನಡ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ಬುಧವಾರ (ಜು.3) ಬೆಂಗಳೂರಿನ ಬ್ರಿಗೇಡ್ ರಸ್ತೆಯ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದಾಗ ಅಮ್ಮಣಿಗೆ ಕನ್ನಡ ದಿಢೀರ್ ಎಂದು ನೆನಪಾಗಿದೆ. ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಆದರೆ ನನಗೆ ಆಫರ್ ಗಳು ಬಂದಿಲ್ಲ. ಒಂದು ವೇಳೆ ಬಂದು, ಕಥೆ ಇಷ್ಟವಾದರೆ ಖಂಡಿತ ಅಭಿನಯಿಸುತ್ತೇನೆ ಎಂದಿದ್ದಾರೆ.ಶಾರುಖ್ ಖಾನ್ ಅವರು ಯಾವಾಗಲೂ ದಕ್ಷಿಣ ಭಾರತ ಅಡುಗೆ ಬಗ್ಗೆ ತಮಾಷೆ ಮಾಡುತ್ತಿರುತ್ತಾರೆ. ಈ ಬಾರಿ ಅವರು ಬೆಂಗಳೂರಿಗೆ ಬರಲಿ ಹೇಳ್ತಿನಿ. ಸೀದಾ ಮನೆಗೆ ಕರೆದೊಯ್ದು ಅನ್ನ ಸಾಂಬಾರ್, ಬಿಸಿಬೇಳೆ ಬಾತ್ ರುಚಿ ತೋರಿಸ್ತೀನಿ ಎಂದಿದ್ದಾರೆ.
'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ಶಾರುಖ್ ಜೊತೆ ದೀಪಿಕಾ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಮುಂಬೈನಿಂದ ರಾಮೇಶ್ವರದ ತನಕ ಸಾಗುವ ಕಥೆ ಇದೆ. ರೈಲು ಪ್ರಯಾಣದ ಜೊತೆಗೆ ಒಂದಷ್ಟು ತಮಾಷೆ, ರೊಮ್ಯಾಂಟಿಕ್ ಸನ್ನಿವೇಶಗಳೇ ಚಿತ್ರದ ಬಂಡವಾಳ. ಈ ಚಿತ್ರದ ಬಗ್ಗೆಯೂ ದೀಪಿಕಾ ತುಂಬಾ ಎಕ್ಸೈಟ್ ಆಗಿದ್ದಾರೆ.


Click it and Unblock the Notifications












