'ಗರುಡ ಗಮನ ವೃಷಭ ವಾಹನ'ಕ್ಕೆ ಹೊರ ರಾಜ್ಯಗಳಿಂದ ಬಂತು ಡಿಮ್ಯಾಂಡ್
ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆದ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರಿಂದಲೂ ಉತ್ತಮ ಪ್ರಶಂಸೆ ಗಳಿಸಿಕೊಂಡಿದೆ. ದಿನ ಕಳೆದಂತೆ ಚಿತ್ರಮಂದಿರಗಳ ಸಂಖ್ಯೆ, ಶೋಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.
'ಗರುಡ ಗಮನ ವೃಷಭ ವಾಹನ' ಸಿನಿಮಾದ ಖ್ಯಾತಿ ನೆರೆಯ ರಾಜ್ಯಗಳಿಗೂ ವ್ಯಾಪಿಸಿದ್ದು, ಸಿನಿಮಾವು ಇತರೆ ರಾಜ್ಯಗಳಲ್ಲಿಯೂ ಬಿಡುಗಡೆ ಆಗಿದೆ. ಇನ್ನಷ್ಟು ಶೋಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆಂಧ್ರಪ್ರದೇಶದ ಕೆಲವು ಕಡೆ ಶೋಗಳನ್ನು ಹಾಕಲಾಗಿದ್ದು ಅಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ ಸಿನಿಮಾ. ಈ ಬಗ್ಗೆ ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ. ಇತರೆ ರಾಜ್ಯಗಳಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಉತ್ಸಾಹ ತೋರಿಸಿದ್ದಾರೆ.
''ಬೇರೆ ಬೇರೆ ಭಾಷೆಗಳವರು ಕತೆಯ, ಸಿನಿಮಾದ ರೀಮೇಕ್ ಹಕ್ಕಿಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಾತುಕತೆಗಳು ಚಾಲ್ತಿಯಲ್ಲಿವೆ'' ಎಂದಿದ್ದಾರೆ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ.

''ನಾವು ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಆದರೆ ಕೆಲವರು ಅದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಪೈರಸಿ ಮಾಡುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಮುನ್ನವೇ ನಾವು ಕಾನೂನು ರೀತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದೆವು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತದೆ. ಯಾರೂ ಸಹ ಪೈರಸಿಗೆ ಬೆಂಬಲ ನೀಡಬೇಡಿ, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ'' ಎಂದು ರಾಜ್ ಬಿ ಶೆಟ್ಟಿ ಮನವಿ ಮಾಡಿದ್ದಾರೆ.
ರಾಜ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ತಂಡ ರಾಜ್ಯ ಪ್ರವಾಸ ಮಾಡುತ್ತಿದ್ದು, ಮೈಸೂರು, ಮಂಗಳೂರು, ಮಣಿಪಾಲ, ಬೆಂಗಳೂರು ಇನ್ನೂ ಹಲವು ಕಡೆಗಳಿಗೆ ತೆರಳಿ ಪ್ರೇಕ್ಷಕರೊಟ್ಟಿಗೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದು, ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.


Click it and Unblock the Notifications











