'ನಿಖಿಲ್ ಎಲ್ಲಿದ್ದೀಯಪ್ಪ...' ಯಾರಿಗೆ ಸಿಗಲಿದೆ ಈ ಟೈಟಲ್?
Recommended Video

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ....' ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಜಾಗ್ವಾರ್ ಚಿತ್ರದ ಆಡಿಯೋ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಮಗನನ್ನು ವೇದಿಕೆಗೆ ಕರೆಯುವಾಗ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳಿದ್ದರು. ಅದಕ್ಕೆ ಜನರ ಮಧ್ಯೆ ನಿಂತಿದ್ದ ನಿಖಿಲ್ ಕೂಡ 'ನಿಮ್ಮನ್ನ ಪ್ರೀತ್ಸೋ ಜನಗಳ ಮಧ್ಯೆ ಇದ್ದೀನಪ್ಪಾ' ಎಂದು ಉತ್ತರಿಸಿದ್ದರು.
ಈ ವಿಡಿಯೋ ಇತ್ತೀಚಿನ ದಿನದಲ್ಲಿ ದೊಡ್ಡ ಸದ್ದು ಮಾಡಿತ್ತು. ಇದೀಗ, ಇದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.
ಹೌದು, ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಕೊಡಿ ಎಂದು ಹಲವು ಸಿನಿಮಾ ಮಂದಿ ಮನವಿ ಮಾಡಿಕೊಂಡಿದ್ದಾರೆ, ಇದಷ್ಟೆ ಅಲ್ಲದೇ, ಮಂಡ್ಯ ಚುನಾವಣೆಯಲ್ಲಿ ಸದ್ದು ಮಾಡಿದ ಇನ್ನು ಕೆಲವು ಪದಗಳಿಗಾಗಿ ಸಿನಿಮಾ ಮಂದಿ ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಹಾಗಿದ್ರೆ, ಈ ಟೈಟಲ್ ಯಾರಿಗೆ ಸಿಗುತ್ತೆ? ಮುಂದೆ ಓದಿ....

ಈ ಟೈಟಲ್ ಗೆ ಅತಿ ಹೆಚ್ಚು ಮನವಿ
'ನಿಖಿಲ್ ಎಲ್ಲಿದ್ದೀಯಪ್ಪ....'ಈ ಟೈಟಲ್ ಬೇಕು ಎಂದು ಹಲವು ನಿರ್ದೇಶಕ, ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಆದ್ರೆ, ಈ ಟೈಟಲ್ ಸಿಗೋದು ಕಷ್ಟ ಎಂದು ತಿಳಿದು ಬಂದಿದೆ. ಇದು ರಾಜಕೀಯ ವಿಷ್ಯ ಮತ್ತು ನಿಖಿಲ್ ಕುಮಾರ್ ಕೂಡ ಸಿನಿಮಾರಂಗದವರು, ಅವರ ತಂದೆ ಕೂಡ ನಿರ್ಮಾಪಕರು. ಈ ಟೈಟಲ್ ಕೊಟ್ರೆ ಮುಂದಿನ ದಿನದಲ್ಲಿ ಸಮಸ್ಯೆಯಾಗಬಹುದು ಎಂಬ ಅರಿವು ಫಿಲಂ ಚೇಂಬರ್ ಗೂ ಇದೆ. ಹಾಗಾಗಿ, ಶೀರ್ಷಿಕೆ ಕೊಡಲು ನಿರಾಕರಿಸಲಾಗಿದೆಯಂತೆ.

ಜೋಡೆತ್ತು, ಕಳ್ಳೆತ್ತು ಟೈಟಲ್ ಮೇಲೂ ಕಣ್ಣು
ಬರಿ ನಿಖಿಲ್ ಎಲ್ಲಿದ್ದೀಯಪ್ಪ ಮಾತ್ರವಲ್ಲ. ಜೋಡೆತ್ತು ಎಂಬ ಟೈಟಲ್ ಗಾಗಿಯೂ ಮನವಿ ಮಾಡಲಾಗಿದೆ ಎಂಬ ವಿಷ್ಯ ಹೊರಬಿದ್ದಿದೆ. ಆರಂಭದಲ್ಲಿ ನಟ ದರ್ಶನ್ ನಾನು ಮತ್ತು ಯಶ್ ಜೋಡೆತ್ತುಗಳು ಎಂದು ಹೇಳಿದ್ರು. ನಂತರ ಕುಮಾರಸ್ವಾಮಿ ಅವರು ಕಳ್ಳೆತ್ತು, ನಿಜವಾದ ಜೋಡೆತ್ತು ನಾನು ಮತ್ತು ಡಿಕೆ ಶಿವಕುಮಾರ್ ಎಂದರು. ತದನಂತರ ಜೋಡೆತ್ತು ಮತ್ತು ಕಳ್ಳೆತ್ತು ಪದ ರಾಜಕೀಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು. ಹಾಗಾಗಿ, ಈ ಎರಡು ಪದಗಳ ಮೇಲೆ ಕೂಡ ಸಿನಿಮಾ ಮಂದಿ ಕಣ್ಣಾಕಿದ್ದಾರಂತೆ.

'ಮಂಡ್ಯದ ಹೆಣ್ಣು' ಬೇಕಂತೆ
ಮಂಡ್ಯದ ಗಂಡು ಎಂದು ಈಗಾಗಲೇ ಅಂಬರೀಶ್ ಅಭಿನಯದಲ್ಲಿ ಸಿನಿಮಾ ಬಂದಿದೆ. ಈಗ ಮಂಡ್ಯ ರಾಜಕಾರಣಕ್ಕೆ ಅಂಬರೀಶ್ ಪತ್ನಿ ಧುಮುಕಿದ್ದಾರೆ. ಹಾಗಾಗಿ, ಮಂಡ್ಯದ ಹೆಣ್ಣು ಸುಮಲತಾ ಎಂದು ಹೇಳಲಾಗ್ತಿದೆ. ಈ ಹಿನ್ನೆಲೆ 'ಮಂಡ್ಯದ ಹೆಣ್ಣು' ಟೈಟಲ್ ನಲ್ಲೂ ಸಿನಿಮಾ ಮಾಡಬಹುದು ಎಂಬ ಲೆಕ್ಕಾಚಾರಕ್ಕೆ ಸಿನಿಮೇಕರ್ಸ್ ಬಂದಿದ್ದಾರೆ.

ಈ ಟೈಟಲ್ ಗಳು ಸಿಗೋದು ಕಷ್ಟ
ಸುಮಲತಾ ಅಂಬರೀಶ್ ಮತ್ತು ಕುಮಾರಸ್ವಾಮಿ ಕುಟುಂಬಗಳಿಗೂ ಸಿನಿಮಾ ಇಂಡಸ್ಟ್ರಿಗೂ ಆತ್ಮೀಯ ಸಂಬಂಧವಿದೆ. ಹಾಗಾಗಿ, ನಿಖಿಲ್ ಎಲ್ಲಿದ್ದೀಯಪ್ಪ, ಜೋಡೆತ್ತು, ಕಳ್ಳೆತ್ತು, ಮಂಡ್ಯದ ಹೆಣ್ಣು ಸುಮಲತಾ ಇಂತಹ ಟೈಟಲ್ ಗಳನ್ನ ಸದ್ಯಕ್ಕೆ ಯಾರಿಗೂ ಕೊಡಬಾರದು ಎಂಬ ನಿಲುವಿಗೆ ಫಿಲಂ ಚೇಂಬರ್ ಬಂದಿದೆ ಎನ್ನಲಾಗಿದೆ. ಈ ಟೈಟಲ್ ಕೊಟ್ರೆ ಅದು ಮುಂದಿನ ದಿನದಲ್ಲಿ ವಿವಾದಕ್ಕೆ, ಕಲಹಕ್ಕೆ ದಾರಿ ಮಾಡಿಕೊಡುತ್ತೆ ಎಂಬ ಜಾಗರೂಕತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ.


Click it and Unblock the Notifications











