ಬಳ್ಳಾರಿಯಲ್ಲಿ ಹೊಸ ಕ್ಯಾತೆ ತೆಗೆದ ಜ್ಯೂ. ಎನ್ಟಿಆರ್ ಫ್ಯಾನ್ಸ್; ಅಪ್ಪು ಫ್ಯಾನ್ಸ್ ತಿರುಗೇಟು
ಸ್ಟಾರ್ ನಟರ ಅಭಿಮಾನಿಗಳ ನಡುವೆ ಸಂಘರ್ಷ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಇದು ನಡೆಯುತ್ತಲೇ ಬಂದಿದೆ. ತಮ್ಮ ನೆಚ್ಚಿನ ನಟನೇ ಗ್ರೇಟ್ ಎಂದು ತೋರಿಸಲು ಅಭಿಮಾನಿಗಳು ಮಾಡುವ ಸಾಹಸ ಒಂದೆರೆಡಲ್ಲ. ಇದೇ ಅಭಿಮಾನಕ್ಕಾಗಿ ಪ್ರಾಣ ಕಳೆದುಕೊಂಡ ಅಮಾಯಕರು ಇದ್ದಾರೆ. ಆದರೂ ಈ ಫ್ಯಾನ್ಸ್ ವಾರ್ ಎನ್ನುವುದು ಕಮ್ಮಿ ಆಗಿಲ್ಲ.
ಮೊದಲೆಲ್ಲಾ ಚಿತ್ರಮಂದಿರಗಳ ಮುಂದೆ ಇಬ್ಬರು ನಟರ ಫ್ಯಾನ್ಸ್ ನಡುವೆ ಕಿರಿಕ್ ನಡೆಯುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈಗ ಹೆಚ್ಚಾಗಿದೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನನ್ನು ಆತನ ಅಭಿಮಾನಿಗಳನ್ನು ಟ್ರೋಲ್ ಮಾಡುವುದು ಭಾರೀ ಚರ್ಚೆ ಹುಟ್ಟಾಕುತ್ತಿದೆ. ನಟರು ಕೂಡ ಏನು ಗೊತ್ತಿಲ್ಲದಂತೆ ಸುಮ್ಮನಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ. ಅಭಿಮಾನಿಗಳ ಅಂಧಾಭಿಮಾನ ಕೆಲವೊಮ್ಮೆ ಭಾರೀ ಅನರ್ಥಗಳಿಗೆ ಕಾರಣವಾಗುತ್ತಿದೆ.

ದಿವಂಗತ ನಟ ಪುನೀತ್ ರಾಜ್ಕುಮಾರ್ ಹಾಗೂ ತೆಲುಗು ನಟ ಜ್ಯೂ. ಎನ್ಟಿಆರ್ ಆತ್ಮೀಯ ಸ್ನೇಹಿತರಾಗಿದ್ದರು. ಪುನೀತ್ ಚಿತ್ರಕ್ಕಾಗಿ ತಾರಕ್ ಒಂದು ಹಾಡು ಹಾಡಿದ್ದರು. ದಶಕಗಳಿಂದಲೂ ದೊಡ್ಮನೆ ಹಾಗೂ ನಂದಮೂರಿ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿದೆ. ಅಭಿಮಾನಿಗಳು ಕೂಡ ಅದೇ ರೀತಿ ಇದ್ದರು. ಆದರೆ ಇದ್ದಕ್ಕಿಂದಂತೆ ಬಳ್ಳಾರಿಯಲ್ಲಿ ಕೆಲ ತಾರಕ್ ಅಭಿಮಾನಿಗಳು ಕ್ಯಾತೆ ತೆಗೆದಿದ್ದಾರೆ.
ಬಳ್ಳಾರಿ ಹಾಗೂ ಹೊಸಪೇಟೆ ಭಾಗದಲ್ಲಿ ಅಪ್ಪುಗೆ ದೊಡ್ಡ ಅಭಿಮಾನಿ ಬಳಗವಿದೆ. ದೊಡ್ಮನೆ ಕಲಾವಿದರ ಸಿನಿಮಾಗಳು ಅಲ್ಲಿ ಸಖತ್ ಸದ್ದು ಮಾಡುತ್ತವೆ. ಅದು ಕರ್ನಾಟಕ- ಆಂಧ್ರ ಗಡಿ ಭಾಗ ಆಗಿರುವುದರಿಂದ ತೆಲುಗು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತವೆ. ಆದರೂ ಅಪ್ಪುಗೆ ಇರುವ ಅಭಿಮಾನಿಗಳು ಬೇರೆ ನಟರಿಗೆ ಇಲ್ಲ. ಇದೇ ಕಾರಣಕ್ಕೆ ಪವರ್ ಸ್ಟಾರ್ ಫ್ಯಾನ್ಸ್ ಬಳ್ಳಾರಿ ನಮ್ಮ ಬಾಸ್ ಅಡ್ಡಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಜ್ಯೂ. ಎನ್ಟಿಆರ್ ನಟನೆಯ 'ದೇವರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ತಾರಕ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಬಳ್ಳಾರಿಯ ಕೆಲ ಜ್ಯೂ. ಎನ್ಟಿಆರ್ ಅಭಿಮಾನಿಗಳು ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಿರುವ ವೀಡಿಯೋಗಳು ವೈರಲ್ ಆಗ್ತಿದೆ. ಇದರಲ್ಲಿ ಬಳ್ಳಾರಿ ಎನ್ಟಿಆರ್ ಅಡ್ಡಾ ಎಂದು ಕನ್ನಡ ಭಾಷಿಕರೇ ಹೇಳಿದ್ದಾರೆ. ನಮ್ಮ ತಾಖತ್ತು ಏನು ಎನ್ನುವುದನ್ನು 'ದೇವರ' ಬಿಡುಗಡೆ ವೇಳೆ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇದು ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.
ಬಳ್ಳಾರಿ ಯಾವತ್ತಿಗೂ ನಮ್ಮ ಅಪ್ಪ ಬಾಸ್ ಅಡ್ಡಾ. ಇಲ್ಲಿ ಬೇರೆ ಯಾವ ನಟರ ಆಟವೂ ನಡೆಯಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರು ನಟರು ಸ್ನೇಹಿತರಾಗಿದ್ದರು. ಇವತ್ತಿಗೂ ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇದೆ. ಆದರೆ ಇಂತಹ ಸಮಯದಲ್ಲಿ ಹೀಗೆ ಸುಖಾ ಸುಮ್ಮನೆ ಫ್ಯಾನ್ಸ್ ಬೇಕಾ? ಎಂದು ಕೆಲವರು ಕೇಳುತ್ತಿದ್ದಾರೆ.
ಈ ಹಿಂದೆ 'ಕ್ರಾಂತಿ' ಸಿನಿಮಾ ಸಾಂಗ್ ರಿಲೀಸ್ ವೇಳೆ ಹೊಸಪೇಟೆಯಲ್ಲಿ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕಿರಿಕ್ ನಡೆದಿತ್ತು. ಅದು ತಾರಕಕ್ಕೇ ಏರಿತ್ತು.
ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬಲಿದೆ. ಚಿತ್ರದಲ್ಲಿ ತಾರಕ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಸ್ವತಃ ತಾರಕ್ ತಮ್ಮ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದಾರೆ. ಅಭಿಮಾನ ಮನಸ್ಸಿನಲ್ಲಿ ಇರಬೇಕು. ಅದನ್ನು ತೋರ್ಪಡಿಸುವ ಭರದಲ್ಲಿ ಎಲ್ಲೆ ಮೀರಬಾರದು.


Click it and Unblock the Notifications











