ಪ್ರತಿಷ್ಠಿತ ಕಾನ್ ಚಿತ್ರೋತ್ಸವಕ್ಕೆ ಕನ್ನಡದ 'ದೇವರ ಕನಸು' ಸಿನಿಮಾ ಆಯ್ಕೆ
ಕನ್ನಡದ ದೇವರ ಕನಸು ಸಿನಿಮಾ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಸುರೇಶ್ ಲಕ್ಕೂರ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ಸುತ್ತುವ ಸಿನಿಮಾವಾಗಿದೆ.
ನಿರ್ದೇಶಕ ಸುರೇಶ್ ಲಕ್ಕೂರ್ ಅವರು ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ದೇವರ ಕನಸು ಇದು ಅವರ ಮೊದಲ ಸಿನಿಮಾ. 2019ರಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ ನಿರ್ದೇಶಕ ಸುರೇಶ್ ಅವರು ಕೇವಲ 29 ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣ ಮಾಡಿದ್ದಾರೆ.
12 ವರ್ಷದ ಬಾಲಕ ಸ್ವಂತ ಸೈಕಲ್ ಖರೀದಿಸಿ ಊರಿನ ಸೈಕಲ್ ರೇಸ್ ನಲ್ಲಿ ಭಾಗಿಯಾಗಿ ಗೆಲುವು ಸಾಧಿಸಬೇಕು ಎನ್ನುವುದು ಆತನ ಮುಖ್ಯ ಉದ್ದೇಶವಾಗಿರುತ್ತೆ. ಕನಸನ್ನು ನನಸು ಮಾಡಿಕೊಳ್ಳಲು ಏನೆಲ್ಲ ಹರಸಾಹಸ ಪಡುತ್ತಾನೆ ಎನ್ನುವುದೇ ಸಿನಿಮಾ.

ಕಾನ್ ಚಿತ್ರೋಸವಕ್ಕೆ ಆಯ್ಕೆಯಾಗಿರುವ ಬಗ್ಗೆ ಚಿತ್ರತಂಡಕ್ಕೆ ಸಂತಸ ತಂದಿದ್ದು, ಇದೇ ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಕಾನ್ ಜೊತೆಗೆ ಬೇರೆ ಬೇರೆ ಚಿತ್ರೋತ್ಸವಗಳಿಂದನೂ ಆಹ್ವಾನ ಬರುತ್ತಿದೆಯಂತೆ.
ನಿರ್ದೇಶಕ ಸುರೇಶ್ ಈ ಮೊದಲು ಕನ್ನಡದ ದೃಶ್ಯ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಚಿತ್ರದಲ್ಲಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ನಟಿಸಿದ್ದಾರೆ. ಮಕ್ಕಳ ಚಿತ್ರಕ್ಕೆ ಉದ್ಯಮಿಗಳಾದ ಸಿ. ಜಯಕುಮಾರ್, ಸಿ ಶೇಖರ್ ಬಂಡವಾಳ ಹೂಡಿದ್ದಾರೆ. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಸಹ ನಿರ್ಮಾಪಕರಾಗಿದ್ದಾರೆ. ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದೆ.

Recommended Video
ದೇವರ ಕನಸು ಚಿತ್ರಕ್ಕೆ ಖ್ಯಾತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಪಶ್ಚಿಮ ಬಂಗಾಳದವರಾದ ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಅವರ ಸೌಂಡ್ ಡಿಸೈನಿಂಗ್, ಜಿಸ್ನು ಸೇನ್ ಸಂಕಲನ ಚಿತ್ರಕ್ಕಿದೆ. ಇನ್ನು ಚೆನ್ನೈ ಮೂಲಕ ಸುಂದರ್ ಆರ್ ಅವರ ಸಂಗೀತ, ನಿತ್ಯಾನಂದ ಅವರ ಸೌಂಡ್, ಕೇರಳದ ಜಿಷಾ ಮಾಥ್ಯು ಅವರ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.


Click it and Unblock the Notifications











