'ವಾಮನ' ಟ್ರೈಲರ್ ಲಾಂಚ್ ಮಾಡಿದ ದರ್ಶನ್; ಅಭಿಮಾನಿಗಳಿಗೆ ಭಾರೀ ನಿರಾಸೆ
ಧನ್ವೀರ್ ಗೌಡ ನಟನೆಯ 'ವಾಮನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 10ಕ್ಕೆ ರಾಜ್ಯಾದ್ಯಂತ ಆಕ್ಷನ್ ಎಂಟರ್ಟೈನರ್ ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಟ್ರೈಲರ್ ಸದ್ದು ಮಾಡ್ತಿದೆ. ಶಂಕರ್ ರಾಮನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ
ನಟ ದರ್ಶನ್ 'ವಾಮನ' ಚಿತ್ರದ ಟ್ರೈಲರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಕಾರ್ಯಕ್ರಮಕ್ಕೆ ನಟ ದರ್ಶನ್ ಬರ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ನೆಚ್ಚಿನ ನಟನನ್ನು ನೋಡೊಕೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಕಟೌಟ್ ನಿಲ್ಲಿಸಿ ಹಾರ, ಜೈಕಾರ ಹಾಕಿ ಸಂಭ್ರಮಿಸಿದ್ದರು. ಎಷ್ಟೇ ಹೊತ್ತು ಕಾದರೂ ನೆಚ್ಚಿನ ನಟ ಮಾತ್ರ ಬರಲೇ ಇಲ್ಲ. ಇನ್ನು ಚಿತ್ರಮಂದಿರದ ಗಾಜು, ಕಿಟಕಿ ಒಡೆದು ಫ್ಯಾನ್ಸ್ ಹುಚ್ಚಾಟ ಮೆರೆದಿದ್ದಾರೆ.

ನಾಯಕ ನಟ ಧನ್ವೀರ್ ಗೌಡ ಸೇರಿದಂತೆ ಇಡೀ ಚಿತ್ರತಂಡ ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗಿತ್ತು. ನಟ ದರ್ಶನ್ ಬರಲ್ಲ ಎನ್ನುವ ಸುಳಿವು ನಿನ್ನೆಯೇ ಸಿಕ್ಕಿತ್ತು. 'ವಾಮನ' ಚಿತ್ರದ ಟ್ರೈಲರ್ ನೋಡಿ ದರ್ಶನ್ ಮಾತನಾಡಿರುವ ವೀಡಿಯೋವನ್ನು ಪ್ರಸನ್ನ ಚಿತ್ರಮಂದಿರದ ಪರದೆ ಮೇಲೆ ಪ್ರದರ್ಶನ ಮಾಡಲಾಗಿದೆ. ಬಳಿಕ ಟ್ರೈಲರ್ ಕೂಡ ಪರದೆ ಮೇಲೆ ಅಬ್ಬರಿಸಿದೆ. ದರ್ಶನ್ ಖುದ್ದಾಗಿ ಪ್ರಸನ್ನ ಚಿತ್ರಮಂದಿರಕ್ಕೆ ಬರದಿದ್ದರೂ ಡಿಜಿಟಲ್ ಆಗಿ ಟ್ರೈಲರ್ ಲಾಂಚ್ ಮಾಡಿದ್ದಾರೆ.
ಈ ಹಿಂದೆ ವಿಜಯಲಕ್ಷ್ಮಿ ದರ್ಶನ್ 'ವಾಮನ' ಚಿತ್ರದ ಸಾಂಗ್ ರಿಲೀಸ್ ಮಾಡಿ ಶುಭ ಕೋರಿದ್ದರು. ಅದೇ ರೀತಿ ಇದೀಗ ದರ್ಶನ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಧನ್ವೀರ್ ಗೌಡ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಧನ್ವೀರ್ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡುತ್ತಾ ಬರ್ತಿದ್ದಾರೆ. 'ವಾಮನ' ಚಿತ್ರದಲ್ಲಿ ಕೂಡ ಅದು ಗೊತ್ತಾಗುತ್ತಿದೆ ಎಂದಿದ್ದಾರೆ.
'ವಾಮನ' ಚಿತ್ರದಲ್ಲಿ ಮದರ್ ಸೆಂಟಿಮೆಂಟ್, ಆಕ್ಷನ್ ಇದೆ. ಟ್ರೈಲರ್ ಬಹಳ ಸೊಗಸಾಗಿದೆ. ನನಗೆ ಚಿತ್ರದ ಹಾಡುಗಳು ಇಷ್ಟು. ಅದರಲ್ಲೂ ಮುದ್ದು ರಾಕ್ಷಸಿ ಬಳಹ ಇಷ್ಟ. ನಾನು ಕೆಲವೊಮ್ಮೆ ನನ್ನ ಹೆಂಡತಿಯನ್ನು ಮದ್ದು ರಾಕ್ಷಸಿ ಎಂದು ರೇಜಿಸುತ್ತಿರ್ತೀನಿ ಎಂದಿದ್ದಾರೆ. ಕನ್ನಡ ಪ್ರೇಕ್ಷಕರಲ್ಲಿ ಒಂದು ಮನವಿ ಕನ್ನಡ ಸಿನಿಮಾಗಳನ್ನು ನೋಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ ನೋಡದಿದ್ದರೂ ನಾವು ಎಲ್ಲೂ ಹೋಗಲ್ಲ, ನಿಮ್ಮ ಆಶೀರ್ವಾದದಿಂದ ತೋಟ ಮಾಡಿ, ಹಸು ಕಟ್ಟಿಕೊಂಡಿದ್ದೀವಿ. ಅದನ್ನೇ ಮಾಡಿಕೊಂಡಿರ್ತೀವಿ. ಬಟ್ ಯಾವತ್ತಿಗೂ ಕನ್ನಡಕ್ಕೆ ಮಾತ್ರ ಸಿನಿಮಾ ಮಾಡೋದು. ಕನ್ನಡ ಪ್ರೇಕ್ಷಕರನ್ನು ನಂಬಿಕೊಂಡಿರ್ತೀವಿ. ಒಂದು ಸಿನಿಮಾದಿಂದ ಚಿತ್ರರಂಗದ ಸರಪಳಿ ನಡೆಯುತ್ತದೆ. ಹಾಗಾಗಿ ಕನ್ನಡ ಸಿನಿಮಾಗಳನ್ನು ನೋಡಿ ಎಂದು ದರ್ಶನ್ ಹೇಳಿದ್ದಾರೆ.
ತೆರೆಮೇಲೆ ದರ್ಶನ್ ಮಾತನಾಡಿರುವ ವೀಡಿಯೋ ಪ್ರದರ್ಶನ ಆಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪರದೆ ಮುಂದೆ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗ್ತಿದೆ. 'ವಾಮನ' ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಕಾಕ್ರೋಚ್ ಸುಧೀ, ಅಚ್ಯುತ್ ಕುಮಾರ್ ತಾರಾಗಣದಲ್ಲಿದ್ದಾರೆ.
'ವಾಮನ' ಚಿತ್ರದಲ್ಲಿ ರಗಡ್ ಹೈದನ ಪಾತ್ರದಲ್ಲಿ ಧನ್ವೀರ್ ಗೌಡ ಅಬ್ಬರಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬ, ತಾಯಿಯೇ ಅವನ ಪ್ರಪಂಚ. ಆದರೆ ದುಷ್ಟರ ವಿರೋಧ ಕಟ್ಟಿಕೊಂಡು ಅವನ ಜೀವನವೇ ಬದಲಾಗಿಬಿಡುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ. ಡ್ರಗ್ಸ್ ದಂಧೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ನಡುವೆ ಮುದ್ದು ರಾಕ್ಷಸಿಯ ಜೊತೆ ಒಂದು ಲವ್ ಸ್ಟೋರಿ ಕೂಡ ಇದೆ.
ಧನ್ವೀರ್ ಮೊದಲಿನಿಂದಲೂ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅದರಲ್ಲೂ ಕಷ್ಟದ ಸಮಯದಲ್ಲಿ ಜೊತೆಯಾಗಿದ್ದರು. ರೇಣುಕಾಸ್ವಾಮಿ ಪ್ರಕರಣದ ಆರೋಪಿಯಾಗಿ ದರ್ಶನ್ ಜೈಲು ಸೇರಿದಾಗ ಧನ್ವೀರ್ ಬೆಂಬಲವಾಗಿ ನಿಂತಿದ್ದರು. ಜೈಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದರು. ದರ್ಶನ್ ಜಾಮೀನು ಪಡೆದು ಬಳ್ಳಾರಿ ಹೊರಬಂದಾಗ ಕಾರು ಚಲಾಯಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದರು. ತನ್ನ ಬೆಂಬಲಕ್ಕೆ ನಿಂತ ಧನ್ವೀರ್ ಚಿತ್ರಕ್ಕೆ ಇದೀಗ ದರ್ಶನ್ ಸಾಥ್ ಕೊಟ್ಟಿದ್ದಾರೆ.
'ವಾಮನ' ಟ್ರೈಲರ್ ಲಾಂಚ್ ಈವೆಂಟ್ನಲ್ಲಿ ನಟಿ ತಾರಾ ಭಾಗವಹಿಸಿ ಮಾತನಾಡಿದರು. "ಧನ್ವೀರ್ ಚಿತ್ರದ ಪ್ರತಿ ಶೆಡ್ಯೂಲ್ ಶೂಟಿಂಗ್ ವೇಳೆ ನನಗೆ ಒಂದೊಂದು ಸೀರೆ ಉಡುಗೊರೆ ಕೊಟ್ಟಿದ್ದಾನೆ. ಎಲ್ಲಾ ಉಟ್ಟುಕೊಂಡಿದ್ದೀನಿ. ಸಿನಿಮಾ ಬಿಡುಗಡೆಗೆ ಇನ್ನೊಂದು ಸೀರೆ ಕೊಡೋ" ಎಂದು ತಮಾಷೆ ಮಾಡಿದ್ದರು. ನಾನು ನಟಿಸೋ ಚಿತ್ರದಲ್ಲಿ ಅಜನೀಶ್ ಮ್ಯೂಸಿಕ್ ಮಾಡಿದರೆ ಒಂದಾದರೂ ಸಾಂಗ್ ಹಿಟ್ ಆಗಿಬಿಡುತ್ತದೆ ಎಂದಿದ್ದಾರೆ.
ಧನ್ವೀರ್ ನಾಯಕಿ ಜೊತೆ ರೊಮ್ಯಾನ್ಸ್ ಮಾಡೋಕೆ ಬಹಳ ಕಷ್ಟಪಡ್ತಾನೆ. ನಿನಗೆ ಬೇಗ ಮದುವೆ ಮಾಡಿದರೆ ಎಲ್ಲಾ ಸರಿಹೋಗುತ್ತದೆ. 'ವಾಮನ' ಸಿನಿಮಾ ಸೂಪರ್ ಹಿಟ್ ಆಗಲಿ. ಇದೇ ತಂಡ ಮತ್ತೊಂದು ಸಿನಿಮಾ ಮಾಡುವಂತಾಗಲಿ ಎಂದು ತಾರಾ ಶುಭ ಹಾರೈಸಿದರು.
'ಕಾಟೇರ' ಚಿತ್ರದ ಹಾಡನ್ನು ಹಾಡಿ ನಟ ಧನ್ವೀರ್ ಗೌಡ ಮಾತು ಆರಂಭಿಸಿದರು. ಉಸಿರಿರುವವರೆಗೂ ಇರ್ತೀವಿ ನಿಮ್ಮಿಂದೆ ಎಂದು ದರ್ಶನ್ ಫೋಟೊ ತೋರಿಸಿದ್ದಾರೆ. ಇನ್ನು ದರ್ಶನ್ ಸದ್ಯ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರದ 2ನೇ ಶೆಡ್ಯೂಲ್ ಮುಗಿಸಿದ್ದರು. ಬಳಿಕ ರಾಜಸ್ಥಾನಕ್ಕೆ ಚಿತ್ರತಂಡ ಪಯಣ ಬೆಳೆಸಿತ್ತು.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಎಂಬುವವರು 'ವಾಮನ' ಚಿತ್ರವನ್ನು ನಿರ್ಮಿಸಿದ್ದಾರೆ. ಮಹೇಂದ್ರ ಸಿಂಗ್ ಛಾಯಾಗ್ರಹಣ ಚಿತ್ರಕ್ಕಿದ್ದು ಚಿತ್ರದ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳಿಗೆ ಭೂಷಣ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.
6 ವರ್ಷಗಳ ಹಿಂದೆ 'ಬಜಾರ್' ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಬೈಟು ಲವ್' ಚಿತ್ರದಲ್ಲಿ ಮಿಂಚಿದ್ದರು. 2023ರ ಕೊನೆಗೆ 'ಕೈವ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಈ 3 ಚಿತ್ರಗಳಲ್ಲಿ ವಿಭಿನ್ನ ಕಥೆಗಳಿದ್ದವು. ಈ ಬಾರಿ ಮತ್ತೊಮ್ಮೆ ಡಿಫ್ರೆಂಟ್ ಆಗಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ರೀಷ್ಮಾ ನಾಣಯ್ಯ ಸದ್ಯ ಕನ್ನಡ ಚಿತ್ರರಂಗದ ಕ್ರೇಜಿ ಹೀರೋಯಿನ್ ಎನಿಸಿಕೊಂಡಿದ್ದಾರೆ. ಉಪೇಂದ್ರ ಜೊತೆ 'ಯುಐ' ಚಿತ್ರದಲ್ಲಿ ನಟಿಸಿದ್ದರು. ಸದ್ಯ ಬಿಡುಗಡೆಗೆ ಸಜ್ಜಾಗುತ್ತಿರುವ 'KD' ಚಿತ್ರದಲ್ಲಿ ಧ್ರುವ ಸರ್ಜಾಗೆ ಜೊತೆಯಾಗಿದ್ದಾರೆ. ಇದೀಗ 'ವಾಮನ' ಚಿತ್ರದ ಮುದ್ದು ರಾಕ್ಷಸಿ ಆಗಿ ಮೋಡಿ ಮಾಡುತ್ತಿದ್ದಾರೆ. ಧನಂಜಯ್ ನಟನೆಯ 'ಅಣ್ಣ ಫ್ರಂ ಮೆಕ್ಸಿಕೋ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಐಪಿಎಲ್ ಟೂರ್ನಿ ಭರಾಟೆ ಜೋರಾಗಿದೆ. ಸಿನಿಮಾಗಳನ್ನು ಬಿಡುಗಡೆ ಮಾಡಲು ಫಿಲ್ಮ್ ಮೇಕರ್ಸ್ ಯೋಚಿಸುವಂತಾಗಿದೆ. ಇನ್ನು 2 ತಿಂಗಳು ಚುಟುಕು ಕ್ರಿಕೆಟ್ ಕ್ರೇಜ್ ಮುಂದುವರೆಯಲಿದೆ. ಜನ ಮನೆಯಲ್ಲೇ ಮನರಂಜನೆ ಸಿಗುವಾಗ ಚಿತ್ರಮಂದಿರಕ್ಕೆ ಬರ್ತಾರಾ? ಎನ್ನುವ ಗೊಂದಲ ಇದೆ. ಸದ್ಯ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಗೆ ಸಿದ್ಧವಿಲ್ಲ. ಈ ವಾರ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಬಿಡುಗಡೆ ಆಗಿದೆ. 2 ವಾರಗಳ ಬಳಿಕ 'ವಾಮನ'ನ ಆಗಮನವಾಗಲಿದೆ. ಐಪಿಎಲ್ಗೆ ಈ ಸಿನಿಮಾಗಳು ಸೆಡ್ಡು ಹೊಡೆಯುತ್ತಿವೆ. ಈ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತೆಎಂದು ಕಾದು ನೋಡಬೇಕಿದೆ.


Click it and Unblock the Notifications











