ನಟ ದರ್ಶನ್ಗೆ ಮತ್ತೆ ಬಾಧಿಸುತ್ತಿರುವ ಬಲಗೈ ನೋವು; ಅಭಿಮಾನಿಗಳ ವಿಶೇಷ ಮನವಿ ಏನು?
ಮೂರ್ನಾಲ್ಕು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಒಂದ್ಕಡೆ ನೆಚ್ಚಿನ ನಟನ ಹುಟ್ಟುಹಬ್ಬ. ಮತ್ತೊಂದು ಕಡೆ 'ಕಾಟೇರ' ಸಿನಿಮಾ 50 ದಿನ ಪೂರೈಸಿದ ಖುಷಿ. ಜೊತೆಗೆ ಚಿತ್ರರಂಗದಲ್ಲಿ ದರ್ಶನ್ ಬೆಳ್ಳಿಹಬ್ಬ ಸಡಗರ. ಎಲ್ಲಾ ಸಂಭ್ರಮವನ್ನು ಒಟ್ಟೊಟ್ಟಿಗೆ ಆಚರಿಸಿ ಖುಷಿಪಟ್ಟಿದ್ದಾರೆ.
ಶುಕ್ರವಾರ(ಫೆಬ್ರವರಿ 16) ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನೆಚ್ಚಿನ ನಟ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದರು. ಗುರುವಾರ ಸಂಜೆಯಿಂದಲೇ ಆರ್. ಆರ್ ನಗರದ ದರ್ಶನ್ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನು ಶನಿವಾರ(ಫೆಬ್ರವರಿ 17) ಶ್ರೀರಂಗಪಟ್ಟಣದಲ್ಲಿ ಆಪ್ತರ ಸಮ್ಮುಖದಲ್ಲೇ ಬೆಳ್ಳಿಪರ್ವ ಸಂಭ್ರಮ ಕಳೆಗಟ್ಟಿತ್ತು.

ಮೂರ್ನಾಲ್ಕು ದಿನಗಳಿಂದ ಸಾವಿರಾರು ಜನ ನಟ ದರ್ಶನ್ ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ಅಭಿಮಾನಿಗಳಿಗೆ ಹಸ್ತಲಾಘವ ಮಾಡಿ ಮಾಡಿ ಕೈ ನೋವು ಬಂದಿದೆ. ಆದರೆ ಕೈ ನೋವಿನ ನಡೆಯುವ ನಗು ನಗುತ್ತಾ ದರ್ಶನ್ ಅಭಿಮಾನಿಗಳ ಕೈ ಕುಲುಕಿ ಶುಭಾಶಯ, ಅಭಿನಂದನೆ ಸ್ವೀಕರಿಸಿದ್ದಾರೆ. ಬಲಗೈ ನೋವು ಹೆಚ್ಚಾದಾಗ ಎಡಗೈ ಮೂಲಕ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದ್ದಾರೆ.
5 ವರ್ಷಗಳ ಹಿಂದೆ ಅಪಘಾತದಲ್ಲಿ ನಟ ದರ್ಶನ್ ಗಾಯಗೊಂಡಿದ್ದರು. ಮೈಸೂರು ಹಿನಕಲ್ ರಿಂಗ್ ರಸ್ತೆಯ ಬಳಿ ಚಾಲನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದ ವೇಳೆ ದರ್ಶನ್, ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದರು. ದರ್ಶನ್ ಬಲಗೈಗೆ ಗಂಭೀರವಾದ ಪೆಟ್ಟಾಗಿದ್ದರೆ, ಹಿರಿಯ ನಟ ದೇವರಾಜ್ ಎದೆಯ ಭಾಗಕ್ಕೆ ಹಾಗೂ ಪ್ರಜ್ವಲ್ ದೇವರಾಜ್ ಕುತ್ತಿಗೆಗೆ ಸಣ್ಣಪುಟ್ಟ ಗಾಯವಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಅಂದಿನಿಂದಲೂ ಆಗಾಗ್ಗೆ ನಟ ದರ್ಶನ್ ಬಲಗೈ ನೋವಿನಿಂದ ಬಳಲುವಂತಾಗಿದೆ. ಕೈ ಮೇಲೆ ಹೆಚ್ಚಿನ ಒತ್ತಡ ಬಿದ್ದಾಗ ನೋವು ಕಾಣಿಸಿಕೊಳ್ಳುತ್ತಿದೆ. ಮಂಡ್ಯ ಚುನಾವಣೆ ವೇಳೆ ಸುಮಲತಾ ಪರ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸಿದ್ದರು. ರೋಡ್ಶೋ ವೇಳೆ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದ್ದರಿಂದ ಆಗ ಕೂಡ ಕೈ ನೋವು ಹೆಚ್ಚಾಗಿತ್ತು. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಂಡಿದ್ದರು.
ನೋವು ನಿವಾರಕ ಔಷಧಿ ತೆಗೆದುಕೊಂಡು ಚುನಾವಣ ಪ್ರಚಾರದಲ್ಲಿ ಭಾಗಿ ಆಗುತ್ತಿರುವುದಾಗಿ ದರ್ಶನ್ ಹೇಳಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್ "ನಾನು ಇನ್ನು ಕೈ ನೋವಿನಿಂದ ಬಳಲುತ್ತಿದ್ದೇನೆ. ಆದರೂ ಸುಮಲತಾ ಪರ ಪ್ರಚಾರ ಮಾಡುತ್ತೇನೆ. ಅಲ್ಲಿವರೆಗೂ ಎಷ್ಟೇ ಕಷ್ಟ ಆದರೂ ಪ್ರಚಾರ ನಿಲ್ಲಿಸುವುದಿಲ್ಲ. ಯಮನೇ ಕರೆದ್ರೂ ಒಂದಷ್ಟು ದಿನ ಅವಕಾಶ ಕೇಳ್ತೀನಿ ಎಂದು ಹೇಳಿದ್ದರು.
ಶುಕ್ರವಾರ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬ ಶುಭ ಹಾರೈಸಲು ಮನೆ ಬಳಿ ಬಂದಿದ್ದರು. ಸರತಿ ಸಾಲಿನಲ್ಲಿ ಬಂದು ನೆಚ್ಚಿನ ನಟನ ಕೈಕುಲುಕಿ ಹುಟ್ಟುಹಬ್ಬದ ಶುಭ ಕೋರಿದ್ದರು. ಈ ವೇಳೆ ಕೆಲವರು ಕೈಯನ್ನು ಜೋರಾಗಿ ಎಳೆದಿದ್ದು ಕಂಡು ಬಂತು. ಆದರೂ ನೋವು ನುಂಗಿ ಅಭಿಮಾನಿಗಳಿಗೆ ದರ್ಶನ್ ಹಸ್ತಲಾಘವ ಮಾಡಿದ್ದರು.ಕೈ ನೋವಿನ ನಡುವೆಯೂ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ನಗುತ್ತಾ ಕಾಣಿಸಿಕೊಂಡರು ಎಂದು ವಿನಯ್ ಗುರೂಜಿ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದೀಗ ಕೆಲ ಅಭಿಮಾನಿಗಳು "ದಯವಿಟ್ಟು ಯಾರು ಡಿ ಬಾಸ್ ಅವರಿಗೆ ಹಸ್ತಲಾಘವ ಮಾಡುವಾಗ ಕೈ ಬಲವಾಗಿ ಎಳೆಯಬೇಡಿ" ಎಂದು ಮನವಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಿದೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 'ಕಾಟೇರ' ಬಳಿಕ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸಲಿದ್ದಾರೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಇನ್ನು 'ಸಿಂಧೂರ ಲಕ್ಷ್ಮಣ' ಸಿನಿಮಾ ಕೂಡ ಆದಷ್ಟು ಬೇಗ ಸೆಟ್ಟೇರಲಿದೆ.
'ಡೆವಿಲ್' ಚಿತ್ರದಲ್ಲಿ ನಟಿಸಲು ನಟ ದರ್ಶನ್ ಬರೋಬ್ಬರಿ 22 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದರ್ಶನ್ ಬರ್ತ್ಡೇ ಸಂಭ್ರಮದಲ್ಲಿ ಬಂದಿರುವ ಟೀಸರ್ ಹಿಟ್ ಆಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











