ಅಕ್ಟೋಬರ್ನಲ್ಲಿ 'ಡೆವಿಲ್' ಬರಲಿಲ್ಲ; ಆದರೆ ದಾಸನ ಮತ್ತೆರಡು ಸಿನಿಮಾ ರೀ-ರಿಲೀಸ್
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರಬೇಕಿತ್ತು. ಅಕ್ಟೋಬರ್ನಲ್ಲಿ ಸಿನಿಮಾ ತೆರೆಗೆ ತರಲು ಸಾಧ್ಯವಾದಷ್ಟು ಪ್ರಯತ್ನಿಸುವುದಾಗಿ ಸ್ವತಃ ದರ್ಶನ್ ಹೇಳಿದ್ದರು. ಕೈಗೆ ಪೆಟ್ಟಾಗಿ ಚಿತ್ರೀಕರಣ ತಡವಾಗಿತ್ತು. ಬಳಿಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರುವಂತಾಯಿತು.
'ಡೆವಿಲ್' ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಶುರುವಾಗಿದ್ದ ಸಮಯದಲ್ಲೇ ಪೊಲೀಸರು ದರ್ಶನ್ನ ವಶಕ್ಕೆ ಪಡೆದಿದ್ದರು. ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಜೂನ್ 22ರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗಾಗಲೇ ದರ್ಶನ್ ಜೈಲು ಸೇರಿ 100 ದಿನಗಳು ದಾಟಿದೆ. ಸದ್ಯ ಜಾಮೀನು ಕೋರಿ ದರ್ಶ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಪದೇ ಪದೆ ನಟ ದರ್ಶನ್ ಜಾಮೀನು ಅರ್ಜಿ ಮುಂದಕ್ಕೆ ಹೋಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಾಗಿ ಬಂಧನವಾಗಿದ್ದ ಮೂವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ಎಂಬುವವರು ಇದೀಗ ತುಕೂರು ಜೈಲಿನಿಂದ ಹೊರ ಬಂದಿದ್ದಾರೆ. ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಹಾಗೂ ಇನ್ನುಳಿದ ಆರೋಪಿಗಳಿಗೆ ಯಾವಾಗ ಜಾಮೀನು ಸಿಗುತ್ತದೆ ಕಾದು ನೋಡಬೇಕಿದೆ.
ಅಕ್ಟೋಬರ್ನಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬರದಿದ್ದರೂ ಮತ್ತೊಂದು ಸಿನಿಮಾ ರೀ-ರಿಲೀಸ್ ಆಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ನಡೀತಿದೆ. ಅದರಲ್ಲಿ ದರ್ಶನ್ ಸಿನಿಮಾಗಳು ಮತ್ತೆ ತೆರೆಗೆ ಬಂದು ಸದ್ದು ಮಾಡ್ತಿವೆ. ದೊಡ್ಡ ಸಿನಿಮಾಗಳು ತೆರೆಗೆ ಬರುವುದು ತಡವಾಗುತ್ತಿರುವುದರಿಂದ ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರಲಾಗುತ್ತದೆ. ಕೆಲ ದಿನಗಳ ಹಿಂದೆ 'ಶಾಸ್ತ್ರಿ' ಹಾಗೂ 'ಕರಿಯ' ಚಿತ್ರಗಳು ಮರುಬಿಡುಗಡೆ ಆಗಿತ್ತು.

ಸದ್ಯ ದರ್ಶನ್ ನಟನೆಯ 'ಮಿ. ಐರಾವತ' ಚಿತ್ರವನ್ನು ಈ ವಾರ ರೀ-ರಿಲೀಸ್ ಮಾಡಲಾಗ್ತಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಖಾಕಿ ಖದರ್ ತೋರಿಸಿದ್ದರು. ಊರ್ವಶಿ ರೌಟೇಲ ನಾಯಕಿಯಾಗಿ ಮಿಂಚಿದ್ದರು. ಹರಿಕೃಷ್ಣ ಮ್ಯೂಸಿಕ್ನಲ್ಲಿ ಚಿತ್ರದ ಆಲ್ಬಮ್ ಸಹ ಹಿಟ್ ಆಗಿತ್ತು. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ.
9 ವರ್ಷಗಳ ಹಿಂದೆ ಬಂದಿದ್ದ 'ಮಿ. ಐರಾವತ' ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದರು. ಇದೇ ಬ್ಯಾನರ್ನಲ್ಲಿ ದರ್ಶನ್ ನಟನೆಯ 'ಒಡೆಯ' ಸಿನಿಮಾ ಕೂಡ ಮೂಡಿ ಬಂದಿತ್ತು. ಈ ಚಿತ್ರವನ್ನು ಸಹ ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಗಳು ನಡೀತಿದೆ. 'ಶಾಸ್ತ್ರಿ' ಹಾಗೂ 'ಕರಿಯ' ಸಿನಿಮಾ ರೀ-ರಿಲೀಸ್ ಅನ್ನು ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಈ ಸಿನಿಮಾಗಳಿಗೆ ಹೇಗೆ ರೆಸ್ಪಾನ್ಸ್ ಸಿಗುತ್ತೆ ಕಾದು ನೋಡಬೇಕಿದೆ.
'ಐರಾವತ' ಐಪಿಎಸ್ ಆಫೀಸರ್ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು. ಸಮಾಜದ ಅವ್ಯವಸ್ಥೆಯನ್ನು ಬದಲಿಸಲು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದು ತಿದ್ದುವ ನಾಯಕನಾಗಿ ಮಿಂಚಿದ್ದರು. ಸತ್ಯ ಗೊತ್ತಾಗಿ ಕೊನೆಗೆ ಏನಾಗುತ್ತದೆ ಎನ್ನುವುದು ಸಿನಿಮಾ ಕಥೆ. ಚಿತ್ರದಲ್ಲಿ ಪ್ರಕಾಶ್ ರಾಜ್ ವಿಲನ್ ಆಗಿ ಸವಾಲ್ ಹಾಕಿದ್ದರು. ಅನಂತ್ ನಾಗ್, ಸಿತಾರ ಸೇರಿ ದೊಡ್ಡ ತಾರಗಣದಲ್ಲಿದೆ. ಇದೇ ಶುಕ್ರವಾರ(ಅಕ್ಟೋಬರ್ 4) ಸಿನಿಮಾ ರೀ-ರಿಲೀಸ್ ಆಗ್ತಿದೆ.
ತಮಿಳಿನ 'ವೀರಂ' ರೀಮೆಕ್ 'ಒಡೆಯ'. ಎಂ. ಡಿ ಶ್ರೀಧರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 4 ವರ್ಷಗಳ ಹಿಂದೆ ಈ ಸಿನಿಮಾ ತೆರೆಗೆ ಬಂದಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಈ ಎರಡೂ ಸಿನಿಮಾಗಳನ್ನು ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ.


Click it and Unblock the Notifications











