"ನಾನ್ ಬರ್ತಿದ್ದೀನಿ ಚಿನ್ನಾ"; ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ದರ್ಶನ್
ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ತೆರೆಗಪ್ಪಳಿಸಲು 10 ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಶುರುವಾಗಿದೆ. ಟ್ರೈಲರ್ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಅಪ್ಡೇಟ್ ಸಿಕ್ಕಿದೆ. ಕೊಂಚ ತಡವಾಗಿದ್ದರೂ ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಝಲಕ್ ಸಿದ್ಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಹಾಗಾಗಿ ಅವರ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ತೆರೆಗೆ ಬರ್ತಿದೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಚಿತ್ರತಂಡದ ಪರ ನಿಂತಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವರ ಸಲಹೆ ಮೇರೆಗೆ ಪತ್ನಿ ವಿಜಯಲಕ್ಷ್ಮಿ ಹ್ಯಾಂಡಲ್ ಮಾಡುತ್ತಿದ್ದಾರೆ. ಟ್ರೈಲರ್ ರಿಲೀಸ್ ಅಪ್ಡೇಟ್ ಕೂಡ ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಡಿಸೆಂಬರ್ 5 ಅಂದರೆ ಇದೇ ಶುಕ್ರವಾರ ಬೆಳಗ್ಗೆ 10.05 ನಿಮಿಷಕ್ಕೆ 'ಡೆವಿಲ್' ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಸಣ್ಣ ಟೀಸರ್ ಝಲಕ್ ಬಿಟ್ಟು ಮಾಹಿತಿ ನೀಡಿದ್ದಾರೆ. "ನಾನ್ ಬರ್ತಿದ್ದೀನಿ ಚಿನ್ನಾ" ಎನ್ನುವ ಡೈಲಾಗ್ ಕೂಡ ಅದರಲ್ಲಿದೆ. ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ಈ ಹಿಂದೆ ಪ್ರಕಾಶ್ ನಿರ್ದೇಶನದ 'ತಾರಕ್' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಬಳಿಕ ಪ್ರಕಾಶ್ ಯಾವುದೇ ಸಿನಿಮಾ ಕಟ್ಟಿಕೊಟ್ಟಿರಲಿಲ್ಲ. ಬಹಳ ವರ್ಷಗಳ ಬಳಿಕ ಮತ್ತೆ ದರ್ಶನ್ ಜೊತೆ ಕೈ ಜೋಡಿಸಿದ್ದರು. 2 ವರ್ಷಗಳ ಹಿಂದೆ ಸಿನಿಮಾ ಸೆಟ್ಟೇರಿತ್ತು. ಕಳೆದ ವರ್ಷ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿತ್ತು. ಕೈಗೆ ಪೆಟ್ಟಾಗಿ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚುನಾವಣೆ ಪ್ರಚಾರ ಮುಗಿಸಿ ಬರುವಷ್ಟರಲ್ಲಿ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದು ಚಿತ್ರೀಕರಣ ತಡವಾಯಿತು.
ನಾಲ್ಕೈದು ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್ ಬೆನ್ನು ನೋವಿನಿಂದ ಕೆಲ ಸಮಯ ವಿಶ್ರಾಂತಿ ಪಡೆದಿದ್ದರು. ಬಳಿಕ ಮತ್ತೆ 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಭಾಗಿ ಆಗಿದ್ದರು. ಸತತ ಚಿತ್ರೀಕರಣ ನಡೆಸಿ ಬೇಗ ಮುಗಿಸಿದ್ದರು. ಡಬ್ಬಿಂಗ್ ಸಹ ಮಾಡಿದ್ದರು. ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗುವ ವೇಳೆಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು.
ಬೆಂಗಳೂರು, ಮೈಸೂರು, ಉದಯ್ಪುರ್ ಹಾಗೂ ಬ್ಯಾಂಕಾಕ್ನಲ್ಲಿ 'ಡೆವಿಲ್' ಸಿನಿಮಾ ಚಿತ್ರೀಕರಣ ನಡೆದಿದೆ. ಬೆನ್ನು ನೋವಿನ ನಡುವೆಯೂ ದರ್ಶನ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ನಿರ್ಮಾಪಕರು ಹಾಗೂ ತಂಡಕ್ಕೆ ಸಮಸ್ಯೆ ಆಗಬಾರದು ಎಂದು ಶ್ರಮಿಸಿದ್ದರು. ಡಿಸೆಂಬರ್ 11ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಚಿತ್ರತಂಡ ಸಭೆ ನಡೆಸಿ ಸಿನಿಮಾ ರಿಲೀಸ್ ಹಾಗೂ ಸೆಲೆಬ್ರೆಷನ್ ಪ್ಲ್ಯಾನ್ಸ್ ಬಗ್ಗೆ ಚರ್ಚಿಸಿದ್ದರು. ಈ ವೇಳೆ ವಿಜಯಲಕ್ಷ್ಮಿ ಹಾಗೂ ದಿನಕರ್ ಕೂಡ ಇದ್ದರು.
ಅಭಿಮಾನಿಗಳ ಕೋರಿಕೆ ಮೇರೆಗೆ ಒಂದು ದಿನ ಮೊದ್ಲೆ 'ಡೆವಿಲ್' ಸಿನಿಮಾ ಬಿಡುಗಡೆಗೆ ಪ್ರಕಾಶ್ ಮನಸ್ಸು ಮಾಡಿದ್ದಾರೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲದ ಜೊತೆಗೆ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದ 3 ಹಾಡುಗಳು ಬಿಡುಗಡೆ ಆಗಿದೆ. 2 ಹಿಟ್ ಲಿಸ್ಟ್ ಸೇರಿದೆ. ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧತೆ ನಡೀತಿದೆ.
'ಒಂದೇ ಒಂದು ಸಲ' ಎನ್ನುವ ರೊಮ್ಯಾಂಟಿಕ್ ಸಾಂಗ್ ಹಿಟ್ ಆದ ಬಳಿಕ ಮತ್ತೊಂದು ಮೆಲೋಡಿ ಸಾಂಗ್ ಹೊರ ಬರಲಿದೆ. ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. 'ಕಾಂತಾರ-1' ಚಿತ್ರದ 'ಬ್ರಹ್ಮ ಕಲಶ' ಹಾಡು ಹಾಡಿದ್ದ ಗಾಯಕ ಅಬ್ಬಿ ವಿ ದನಿಯಾಗಿದ್ದಾರೆ.


Click it and Unblock the Notifications











