'ಕಾಂತಾರ' ಸಿನಿಮಾದ ಬಗ್ಗೆ ದೈವ ನರ್ತಕ ಮುಖೇಶ್ ಹೇಳಿದ್ದು ಹೀಗೆ
'ಕಾಂತಾರ' ಚಿತ್ರ ಅದ್ಭುತ ಯಶಸ್ಸು ಮುಂದುವರಿಸಿದೆ. ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.
ಸಿನಿಮಾದ ಕತೆ, ಆಕ್ಷನ್, ಸಂಗೀತ, ಸಿನಿಮಾಟೊಗ್ರಫಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿರುವ ಬೆನ್ನಲ್ಲೆ ದೈವಾರಾಧನೆಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವುದಕ್ಕೂ ರಿಷಬ್ ಶೆಟ್ಟಿಯವರನ್ನು ಪ್ರಶಂಸಿಸಲಾಗಿದೆ.
ದೈವಾರಾಧನೆಯೇ ಮುಖ್ಯಾಂಶವಾಗಿರುವ ಈ ಸಿನಿಮಾವನ್ನು ಮಾಡುವಲು ಇಡೀ ಚಿತ್ರ ತಂಡ ಚಿತ್ರೀಕರಣ ಪ್ರತೀ ಹಂತದಲ್ಲೂ ತುಳುನಾಡಿನ ಪ್ರಸಿದ್ಧ ದೈವನರ್ತಕ ಮುಖೇಶ್ ಅವರ ನೆರವನ್ನು ಪಡೆದಿದೆ. ದೈವಾರಾಧನೆ, ದೈವ ನರ್ತನದ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ತಪ್ಪಾಗದಂತೆ ಪ್ರತಿ ಹಂತದಲ್ಲಿಯೂ ದೈವನರ್ತಕ ಮುಖೇಶ್ ನೆರವು ಪಡೆಯಲಾಗಿದೆ. ಚಿತ್ರೀಕರಣ ಸಂಧರ್ಭದಲ್ಲಿ ದೈವವೇ ಚಿತ್ರತಂಡಕ್ಕೆ ಬೆನ್ನುಲುಬಾಗಿ ನಿಂತಿತ್ತು ಎಂಬ ವಿಚಾರವನ್ನು ದಾವಣಗೆರೆಯಲ್ಲಿ ಮುಖೇಶ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಸೂಕ್ಷ್ಮ ವಿಚಾರ ಹೊಂದಿರುವ ಕತೆ: ದೈವನರ್ತಕ ಮುಖೇಶ್
ಮೊದಲು ರಿಷಬ್ ಶೆಟ್ಟಿಯವರು ಈ ಚಿತ್ರದ ಕಥೆಯ ತಿರುಳನ್ನು ಹೇಳಿದಾಗ ತುಂಬಾ ಯೋಚನೆ ಮಾಡಿದೆ. ಬಹಳ ಸೂಕ್ಷ್ಮ ವಿಚಾರ ಆಗಿರುವ ಕಾರಣಕ್ಕೆ ಒಪ್ಪಿಕೊಳ್ಳುವ ಮುನ್ನ ಯೋಚನೆ ಮಾಡಿದ್ದೆ. ರಿಷಬ್ ಕಥೆ ಹೇಳುವಾಗ ಆ ಕಥೆ ಆತ್ಮಕ್ಕೆ ಮುಟ್ಟಿತ್ತು. ಕಥೆಯಲ್ಲಿ ಬೇಡದ ವಿಚಾರ ಇರಲಿಲ್ಲ. ಸಮಾಜಕ್ಕೆ ಒಳ್ಳೆಯ ಚಿಂತನೆಯ ಕಥೆ ಇದೆ. ರಿಷಬ್ ಶೆಟ್ಟಿ ಕಥೆ ಬರೆದಿರೋದಲ್ಲ, ದೈವವೇ ಕಥೆ ಬರೆಸಿದೆ ಅಂತಾ ದೈವನರ್ತಕ ಮುಖೇಶ್ ಹೇಳಿದ್ದಾರೆ.

ಯಾರೂ ಚಪ್ಪಲಿ ಸಹ ಹಾಕುತ್ತಿರಲಿಲ್ಲ: ದೈವನರ್ತಕ ಮುಖೇಶ್
ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರೂ ಶ್ರಧ್ಧಾ ಭಕ್ತಿ ಯಿಂದ ಚಿತ್ರೀಕರಣ ಮಾಡಿದ್ದಾರೆ. ದೈವದ ಸೆಟ್ ಹಾಕಿದಾಗಲೂ ಯಾರೂ ಚಪ್ಪಲಿ ಹಾಕುತ್ತಿರಲಿಲ್ಲ. ಆದರೆ ಸೆಟ್ ಸುತ್ತಾ ನಾಗಸಾನಿಧ್ಯ, ಬಬ್ಬರಿಯಾ ದೈವದ ಸಾನಿಧ್ಯ ಇತ್ತು. ಆ ಜಾಗದಲ್ಲಿ ಪಾಸಿಟವ್ ಶಕ್ತಿ ಇತ್ತು. ಚಿತ್ರೀಕರಣ ಜಾಗದಲ್ಲಿ ಹಾವು ಕಾಣಿಸಿಕೊಂಡರೂ ಯಾವುದೇ ತೊಂದರೆಯಾಗಿಲ್ಲ. ಬೆಂಕಿ ಬಿದ್ದರೂ ಯಾವ ಅಪಾಯವೂ ಆಗಿಲ್ಲ. ಎಲ್ಲವೂ ಕಾರ್ಣಿಕದ ಮೂಲಕ ದೈವ ತನ್ನಿರುವಿಕೆಯನ್ನು ತೋರಿಸಿದೆ ಅಂತಾ ಮುಖೇಶ್ ಹೇಳಿದರು.

ಎಲ್ಲವನ್ನೂ ದೈವವೇ ಮಾಡಿಕೊಂಡು ಹೋಗಿದೆ: ಮುಖೇಶ್
ಚಿತ್ರದಲ್ಲಿ ಎಲ್ಲವನ್ನೂ ದೈವವೇ ಮಾಡಿಕೊಂಡು ಹೋಗಿದೆ. ನಾನು ದೈವ ನರ್ತನ ಸೇವೆ ಮಾಡುವಾಗ ಹೇಗೆ ಕಾಣಿಸುತ್ತಿದ್ದೆಯೋ ಹಾಗೆಯೇ ಸ್ಕ್ರೀನ್ ನಲ್ಲಿ ರಿಷಬ್, ಸೌರಜ್ ಕಾಣಿಸುತ್ತಿದ್ದರು. ಕಾಂತಾರ ಚಿತ್ರ ಪಂಜುರ್ಲಿ ಮಹಿಮೆಯನ್ನು ಜಗತ್ತಿಗೆ ತೋರಿಸಿದೆ. ಈ ಚಿತ್ರವನ್ನು ನಾವು ಹಣಕ್ಕಾಗಿ ಚಿತ್ರ ಮಾಡಿಲ್ಲ, ಭಯ ಭಕ್ತಿಯಿಂದ ಮಾಡಿದ್ದೇವೆ. ಚಿತ್ರೀಕರಣದ ಸಂಧರ್ಭದಲ್ಲಿ ರಿಷಬ್ ಶೆಟ್ಟಿ ಪತ್ನಿ ಗರ್ಭಿಣಿಯಾದರೂ ಅವರೂ ಭಯಭಕ್ತಿಯಿಂದ ಇದ್ದರು ಅಂತಾ ಮುಖೇಶ್ ಹೇಳಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸಿನಿಮಾ
'ಕಾಂತಾರ' ಸಿನಿಮಾದ ನಿರ್ದೇಶನವನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ. ಜೊತೆಗೆ ನಾಯಕ ನಟನಾಗಿಯೂ ನಟಿಸಿದ್ದಾರೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಇನ್ನೂ ಹಲವು ನಟರು ನಟಿಸಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ನವರು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ಇತರ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.


Click it and Unblock the Notifications











