'ಗುರುದೇವ್ ಹೊಯ್ಸಳ' ಮೊದಲ ವಾರದ ಗಳಿಕೆ ₹2.9 ಕೋಟಿ ? ಕಾರ್ತಿಕ್ ಗೌಡ ಟ್ವೀಟ್ ವೈರಲ್
ಧನಂಜಯ್ ನಟನೆಯ 'ಗುರುದೇವ್ ಹೊಯ್ಸಳ' ಸಿನಿಮಾ 2ನೇ ವಾರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಪೊಲೀಸ್ ಡ್ರಾಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ರು ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಬಾಕ್ಸಾಫೀಸ್ನಲ್ಲಿ ಕಲೆಕ್ಷನ್ ಕೂಡ ಕಮ್ಮಿ ಎನ್ನಲಾಗ್ತಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಇದೀಗ ನಿರ್ಮಾಪಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಜಯ್ .ಎನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ಧನಂಜಯ್ ಹಾಗೂ ನವೀನ್ ಶಂಕರ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇದು ಧಂಜಯ್ ನಟನೆಯ 25ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಕಳೆದ ವಾರ ತೆರೆಕಂಡ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಸಿನಿಮಾ ನೋಡಿದವರೆಲ್ಲಾ ಆಡಿ ಕೊಂಡಾಡುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಥಿಯೇಟರ್ಗೆ ಬರ್ತಿಲ್ಲ.

'ಗುರುದೇವ್ ಹೊಯ್ಸಳ' ಸಿನಿಮಾ ಮೊದಲ ವಾರದ ಕಲೆಕ್ಷನ್ ಬಹಳ ಕಮ್ಮಿ. ಅಂದಾಜು ₹2.9 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರಬಹುದು ಎನ್ನುವ ಟ್ವೀಟ್ವೊಂದಕ್ಕೆ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ. "ಅದಕ್ಕಿಂತಲೂ ಜಾಸ್ತಿ ಕಲೆಕ್ಷನ್ ಆಗಿದೆ ಸರ್", ಎಂದು ಆ ಟ್ವೀಟ್ಗೆ ರೀಟ್ವೀಟ್ ಮಾಡಿ ಉತ್ತರಿಸಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ಸರಿಯಾದ ಕಲೆಕ್ಷನ್ ಎಷ್ಟು ನೀವೇ ಹೇಳಿ ಸರ್, ಎಂದು ನಿರ್ಮಾಪಕರ ಬಳಿ ಮನವಿ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬೆಳಗಾವಿಯಲ್ಲಿ ನಡೆಯುವ 'ಗುರುದೇವ್ ಹೊಯ್ಸಳ' ಸಿನಿಮಾ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಕನ್ನಡ ಭಾಷಾಭಿಮಾನದ ಜೊತೆ ಜೊತೆಗೆ ಮರ್ಯಾದ ಹತ್ಯೆಯಂತಹ ಸೂಕ್ಷ್ಮ ವಿಷಯದ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಲಾಗಿದೆ. ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. KGF ಅವಿನಾಶ್, ನವೀನ್ ಶಂಕರ್, ಪ್ರತಾಪ್ ನಾರಾಯಣ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಈ ಪೊಲೀಸ್ ಥ್ರಿಲ್ಲರ್ ಸಿನಿಮಾದಲ್ಲಿದೆ.
ಅರಸೀಕೆರೆಯಿಂದ ಬೆಳಗಾವಿಗೆ ವರ್ಗಾವಣೆಯಾಗಿ ಹೋಗುವ ಪೊಲೀಸ್ ಅಧಿಕಾರಿ ಗುರುದೇವ್ ಹೊಯ್ಸಳನ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ದಕ್ಷ ಪೊಲೀಸ್ ಅಧಿಕಾರಿಯ ಕಾರ್ಯಾಚರಣೆಗೆ ಏನೆಲ್ಲಾ ಅಡಿ ಆತಂಕಗಳು ಎದುರಾಗುತ್ತದೆ. ದುಷ್ಟರ ವಿರುದ್ಧ ಹೊಯ್ಸಳನ ಪೊಲೀಸ್ಗಿರಿ ಹೇಗಿರುತ್ತದೆ ಅನ್ನೋದನ್ನು ಎಳೆ ಎಳೆಯಾಗಿ ಚಿತ್ರದಲ್ಲಿ ತೆರೆದಿಡಲಾಗಿದೆ. ಬಹಳ ಶಾರ್ಟ್ ಅಂಡ್ ಸ್ವೀಟ್ ಆಗಿ ಅಷ್ಟೇ ಬಿಗಿಯಾಗಿ ಈ ಕಳ್ಳ ಪೊಲೀಸ್ ಕಥೆಯನ್ನು ಕಟ್ಟಿಕೊಡಲಾಗಿದೆ. ಇದೇ ಕಾರಣಕ್ಕೆ ಚಿತ್ರ ಇಷ್ಟವಾಗ್ತಿದೆ.
ಸಿನಿಮಾ ಚೆನ್ನಾಗಿದ್ರು, ಮೌತ್ ಟಾಕ್ ಸೂಪರ್ ಆಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಿಲ್ಲ. ಐಪಿಎಲ್, ಚುನಾವಣೆ, ಶಾಲಾ ಕಾಲೇಜುಗಳ ಪರೀಕ್ಷೆ ಭರಾಟೆ ನಡುವೆ ಪ್ರೇಕ್ಷಕರು ಸಿನಿಮಾ ನೋಡಲು ಮುಂದಾಗಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಚಿತ್ರತಂಡ ಮಾತ್ರ ಖುಷಿಯಾಗಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಮರು ದಿನವೇ ಡಾಲಿ ಧನಂಜಯಗೆ 1 ಕೋಟಿ ರೂ. ಮೌಲ್ಯದ ಟೊಯೋಟೊ ವೆಲ್ಫೈರ್ ಕಾರನ್ನು ನಿರ್ಮಾಪಕರು ಉಡುಗೊರೆಯಾಗಿ ನೀಡಿದ್ದರು.
ಈಗಾಗಲೇ ಸಾಕಷ್ಟು ಪೊಲೀಸ್ ಡ್ರಾಮಾ ಸಿನಿಮಾಗಳು ಬಂದೋಗಿದೆ. 'ಗುರುದೇವ್ ಹೊಯ್ಸಳ' ಸಿನಿಮಾ ಕತೆಯಲ್ಲಿ ಹೊಸತನ ಇಲ್ಲದಿದ್ದರೂ ಟ್ರೀಟ್ಮೆಂಟ್ ಚೆನ್ನಾಗಿದೆ. ಡಾಲಿ- ನವೀನ್ ಶಂಕರ್ ತಮ್ಮ ಅಭಿನಯದಲ್ಲೇ ನೋಡುಗರನ್ನು ಕಟ್ಟಿಹಾಕಿ ಬಿಡುತ್ತಾರೆ. ಇನ್ನು ವಿಜಯ್ ಎನ್. ನಿರ್ದೇಶನ ಹಾಗೂ ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಸಿನಿಮಾ ನೋಡಿದವರು ಚಿತ್ರದ ಪ್ರತಿಯೊಂದು ವಿಭಾಗದ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ.


Click it and Unblock the Notifications











