ದರ್ಶನ್ ಅವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗಲ್ಲ; ಡಿ ಬಾಸ್ ಪರ ನಿಂತ ಧನ್ವೀರ್
ಚಾಲಂಜಿಂಗ್ ಸ್ಟಾರ್ ದರ್ಶನ್ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಹಲ್ಲೆ ಪ್ರಕರಣ, ಅಶ್ಲೀಲ ಪದಗಳಿಂದ ನಿಂದನೆ ಮತ್ತು ದರ್ಶನ್ ಬೆಂಬಲಿಗರಿಂದ ಬೆದರಿಕೆ ಕೆರೆಗಳು ಬರುತ್ತಿವೆ ಎಂದು ಇಂದ್ರಜಿತ್ ಆರೋಪ ಮಾಡಿದ್ದಾರೆ.
ದರ್ಶನ್ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬಂದಿದ್ದು ದಾಸ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ದರ್ಶನ್ ಪ್ರಕರಣವನ್ನು ಇಡೀ ಚಿತ್ರರಂಗ ಸೈಲೆಂಟ್ ಆಗಿ ಗಮನಿಸುತ್ತಿದೆ. ಇನ್ನು ಕೆಲವರು ಪ್ರತಿಕ್ರಿಯೆ ನೀಡಿ ದರ್ಶನ್ ಪರ ನಿಂತಿದ್ದಾರೆ.
ಇದೀಗ ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಮೌನ ಮುರಿದಿದ್ದು ದರ್ಶನ್ ಪರ ವ್ಯಕ್ತಿತ್ವವನ್ನು ಹಾಡಿಹೊಗಳಿದ್ದಾರೆ. ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ಧನ್ವೀರ್, 'ಎಷ್ಟೇ ಕುತಂತ್ರ ಮಾಡಿದರು ಇವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗೋದಿಲ್ಲ. ಜಗತ್ತೆ ತಿರುಗಿಬಿದ್ದರು ನಾನು ಮತ್ತು ನನ್ನಂತಹ ಕೋಟ್ಯಂತರ ಅಭಿಮಾನಿಗಳು ಸದಾ ಡಿ ಬಾಸ್ ಜೊತೆ' ಎಂದು ಹೇಳಿದ್ದಾರೆ.

"ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ. ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿರುವ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್.
"ಈ ಶಿಖರದ ಗುಣ ಎಷ್ಟೇ ಕಲ್ಲು ಎಸೆದರು ಅದನ್ನೆಲ್ಲ ಲೆಕ್ಕಿಸದೇ ಎಸೆದವರ ಮುಂದೆ ಎತ್ತರವಾಗಿ ಬೆಳೆದು ನಿಲ್ಲೋ ಗುಣ. ಡಿ ಬಾಸ್ ಎಂದರೆ ಸಾಕು ಪ್ರೀತಿಯಿಂದ ಹರಿದುಬರುವುದು ಅಭಿಮಾನಿಗಳ ಹೊಳೆ. ಎಷ್ಟೇ ಕುತಂತ್ರ ಮಾಡಿದರು ಇವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗೋದಿಲ್ಲ. ಜಗತ್ತೆ ತಿರುಗಿಬಿದ್ದರು ನಾನು ಮತ್ತು ನನ್ನಂತಹ ಕೋಟ್ಯಂತರ ಅಭಿಮಾನಿಗಳು ಸದಾ ಡಿ ಬಾಸ್ ಜೊತೆ... ಜೈ ಡಿ ಬಾಸ್" ಎಂದು ಬರೆದುಕೊಂಡಿದ್ದಾರೆ.

ಇನ್ನು ಇತ್ತೀಚಿಗೆ ದರ್ಶನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟ, ರಾಜಕಾರಣಿ ಬಿ.ಸಿ ಪಾಟಿಲ್ ''ದರ್ಶನ್ ಬಹಳ ಮುಗ್ದ, ಕೆಳಹಂತದಿಂದ ಈ ಮಟ್ಟಕ್ಕೆ ಬೆಳೆದು ಬಂದಿರುವ ನಟ. ಅವರ ಏಳಿಗೆ ಸಹಿಸಲಾಗದವರು ದುರುದ್ದೇಶದಿಂದ ಇಂತಹ ಕೇಸ್ಗಳನ್ನು ಹಾಕುತ್ತಿರಬಹುದು ಎನ್ನುವುದು ನನ್ನ ಭಾವನೆ'' ಎಂದಿದ್ದರು.
''ದರ್ಶನ್ ಬಹಳ ಸರಳ ಹಾಗೂ ದೊಡ್ಡ ಹೃದಯ ಹೊಂದಿರುವ ಹುಡುಗ. ಆ ರೀತಿ ಯಾವ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ" ಎಂದು ಬಿಸಿ ಪಾಟಿಲ್ ದರ್ಶನ್ ಪರ ಮಾತನಾಡಿದ್ದರು.


Click it and Unblock the Notifications











