ಸುದೀಪ್ ಏಟು, ವಿಜಯಲಕ್ಷ್ಮಿ ತಿರುಗೇಟು; ಫ್ಯಾನ್ಸ್ ವಾರ್ ಮಧ್ಯೆ ಧನ್ವೀರ್ ಮಾರ್ಮಿಕ ಪೋಸ್ಟ್
ಸ್ಯಾಂಡಲ್ವುಡ್ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಜೋರಾಗಿದೆ. ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ವಾಕ್ಸಮರ ಮಿತಿ ಮೀರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನು ಒಬ್ಬರು ಕೆಣಕಿ ಪೋಸ್ಟ್ ಮಾಡುತ್ತಿದ್ದಾರೆ. ಹುಬ್ಬಳಿಯಲ್ಲಿ ನಡೆದ 'ಮಾರ್ಕ್' ಪ್ರೀ ರಿಲೀಸ್ ಈವೆಂಟ್ನಲ್ಲಿ ಸುದೀಪ್ ಸವಾಲು ಹಾಕಿದ್ದರು. ಅತ್ತ ವಿಜಯಲಕ್ಷ್ಮಿ ಮಾತನಾಡಿದ ಮಾತುಗಳನ್ನು ಇದಕ್ಕೆ ಲಿಂಕ್ ಮಾಡಿ ಚರ್ಚೆ ಹುಟ್ಟಾಕಿದ್ದಾರೆ.
ತಮ್ಮ 'ಮಾರ್ಕ್' ಚಿತ್ರಕ್ಕೆ ಟಕ್ಕರ್ ಕೊಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆಲ್ಲಾ ನಾವು ಸಿದ್ಧ ಎಂದು ಸುದೀಪ್ ಹೇಳಿದ್ದರು. ಅತ್ತ ರಾಮನಗರದಲ್ಲಿ 'ಡೆವಿಲ್' ಸಿನಿಮಾ ವಿಜಯಯಾತ್ರೆ ವೇಳೆ ವಿಜಯಲಕ್ಷ್ಮಿ ದರ್ಶನ್ ಗುಡುಗಿದ್ದಾರೆ. ಯಾರ ಹೆಸರನ್ನು ತೆಗೆದುಕೊಳ್ಳದೇ "ದರ್ಶನ್ ಅವರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ" ಎಂದು ವಿಜಯಲಕ್ಷ್ಮಿ ದರ್ಶನ್ ಗುಡುಗಿದ್ದರು. ಇದು ಫ್ಯಾನ್ಸ್ ವಾರ್ ಹೆಚ್ಚಿಸಿದೆ. ಈ ನಡುವೆ ದರ್ಶನ್ ಪಾತ್ರ ಧನ್ವೀರ್ ಗೌಡ ಪೋಸ್ಟ್ ವೈರಲ್ ಆಗ್ತಿದೆ.

ನಟ ಧನ್ವೀರ್ ಗೌಡ ಮೊದಲಿನಿಂದಲೂ ದರ್ಶನ್ ಪರ ನಿಂತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಮೇಲೆ ಮತ್ತಷ್ಟು ಆಪ್ತರಾಗಿದ್ದರು. ವಿಜಯಲಕ್ಷ್ಮಿ ದರ್ಶನ್ಗೆ ಬೆಂಬಲವಾಗಿ ನಿಂತಿದ್ದಾರೆ. ಸದ್ಯ ವಿಜಯಲಕ್ಷ್ಮಿ ರಾಮನಗರದಲ್ಲಿ ಮಾತನಾಡಿದ ವೀಡಿಯೋವನ್ನು ಧನ್ವೀರ್ ಗೌಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ದರ್ಶನ್ ಜೊತೆಗಿರುವ ಮತ್ತೊಂದು ಫೋಟೊ ಹಾಕಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
"ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತದೆ. ಆದರೆ ಸಿಂಹನೇ ರಾಜ" ಎಂದು ತಮಿಳು ಸಿನಿಮಾ ಡೈಲಾಗ್ ಅನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದಾರೆ. ಇದು ದರ್ಶನ್- ಸುದೀಪ್ ಫ್ಯಾನ್ಸ್ ವಾರ್ಗೆ ಮತ್ತಷ್ಟು ತುಪ್ಪ ಸುರಿದಂತೆ ಕಾಣುತ್ತಿದೆ. ಫ್ಯಾನ್ಸ್ ವಾರ್ ತಡೆಯಲು ಯತ್ನಿಸಬೇಕಿರುವವರು ಹೀಗೆ ಪೋಸ್ಟ್ ಮಾಡಿ ಅಭಿಮಾನಿಗಳು ಪ್ರಚೋದಿಸುತ್ತಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಚರ್ಚೆ ಹುಟ್ಟಾಕ್ಕಿದೆ.
'ಮಾರ್ಕ್' ಸಿನಿಮಾ ಪೈರಸಿ ಮಾಡುತ್ತೇವೆ ಎಂದು ಕೆಲವರು ಸವಾಲು ಹಾಕಿದ್ದರು. ಪೈರಸಿ ವಿರುದ್ಧ ನಮ್ಮ ಯುದ್ಧ ಎಂದು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಸುದೀಪ್ ಅವರು ಹೇಳಿದ್ದರು. ಅದು ಬಿಟ್ಟು ಯಾರನ್ನು ಉದ್ದೇಶಿಸಿ ಈ ಮಾತು ಹೇಳಲಿಲ್ಲ ಎಂದು ಸುದೀಪ್ ಆಪ್ತ ರಾಜು ಗೌಡ ನ್ಯೂಸ್ 18 ಕನ್ನಡ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಕೂಡ ಈ ಬಗ್ಗೆ ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ಒಟ್ಟಾರೆ ಸುದೀಪ ಹಾಗೂ ವಿಜಯಲಕ್ಷ್ಮಿ ಮಾತು ಫ್ಯಾನ್ಸ್ ವಾರ್ ಸೃಷ್ಟಿಸಿದೆ. ಅದಕ್ಕೆ ಧನ್ವೀರ್ ಪೋಸ್ಟ್ ಮತ್ತಷ್ಟು ಇಂಬು ನೀಡುವಂತಿದೆ.
"25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ. ಯುದ್ಧಕ್ಕೆ ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ನಿಮಗೋಸ್ಕರ ಬಾಯಿ ಎಲ್ಲವನ್ನು ಮುಚ್ಚಿಕೊಂಡಿದ್ದೆ. ಬಹಳಷ್ಟು ಕಲ್ಲಿನ ತೂರಾಟ ನನ್ನಿಂದ ನಿಮ್ಮ ಬೀಳುತ್ತೆ. ತಡೆಯುವಷ್ಟು ತಡೆಯಿರಿ. ಮಾತನಾಡುವ ಸಮಯದಲ್ಲಿ ಮಾತಾಡಿ" ಎಂದು ಸುದೀಪ್ ಹೇಳಿದ್ದರು.
ವಿಜಯಲಕ್ಷ್ಮಿ ಮಾತನಾಡಿ "ದರ್ಶನ್ ಅವರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ , ಚಾನೆಲ್ ಗಳಲ್ಲಿ ಕುತ್ಕೊಂಡು, ಅಲ್ಲಿ ಇಲ್ಲಿ ಮಾತಾಡ್ತಾರೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಅವರ ಬಗ್ಗೆ ಅವರ ಫ್ಯಾನ್ಸ್ ಬಗ್ಗೆ ಏನೇನೋ ಮಾತಾಡ್ತಾ ಇರ್ತಾರೆ ಎಂದು ಹೇಳಿರುವ ವಿಜಯಲಕ್ಷ್ಮಿ ಆದರೆ ಅದೇ ದರ್ಶನ್ ಅವರು ಇದ್ದಾಗ ಇವರೆಲ್ಲ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ" ಎಂದು ವ್ಯಂಗ್ಯವಾಡಿದ್ದರು.


Click it and Unblock the Notifications











