ದರ್ಶನ್ ಅಣ್ಣ ಜೈಲಿನಿಂದ ಬಂದಾಗ ಬಿರಿಯಾನಿ ಕಳ್ಸಿದ್ರು, ಕಷ್ಟದಲ್ಲಿ ಯಾಕೆ ಬಂದು ನೋಡ್ಲಿಲ್ಲ- ಧನ್ವೀರ್
'ಹಯಗ್ರೀವ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಧನ್ವೀರ್ ಹೀರೊ ಆಗಿ ನಟಿಸಿರುವ 5ನೇ ಸಿನಿಮಾ ಇದು. ಇತ್ತೀಚೆಗೆ ಚಾಮರಾಜನಗರದಲ್ಲಿ ಚಿತ್ರದ ಸಾಂಗ್ ರಿಲೀಸ್ ಆಗಿತ್ತು. ಈ ವೇಳೆ ವೇದಿಕೆಯಲ್ಲಿ ನಿಂತು ದರ್ಶನ್ ಫೋಟೊ ಹಿಡಿದು ಧನ್ವೀರ್ ಗುಡುಗಿದ್ದರು. ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಟ್ಟಿದ್ದರು. ನಟ ಝೈದ್ ಖಾನ್ ಉದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ ಎನ್ನುವ ಚರ್ಚೆ ನಡೆದಿತ್ತು.
"ನಾನು ಟಿಆರ್ಪಿಗಾಗಿ ಬಂದು ಮಾತನಾಡ್ತಿಲ್ಲ. ಪ್ರಚಾರಕ್ಕಾಗಿ ಯಾರನ್ನೂ ಬಾಸ್ ಎಂದು ಕರೆಯುವ ಅಭ್ಯಾಸ ನನಗಿಲ್ಲ. ಹಿಂದೆಯೂ ಇವರೇ, ಮುಂದೆಯೂ ಇವರೇ ನಮ್ಮ ಬಾಸ್. ಕ್ಯಾಮರಾ ಮುಂದೆ ಬಂದು ಮಾತನಾಡುವ ಗಂಡಸರು ತುಂಬಾ ಜನ ಇದ್ದಾರೆ. ಅಖಾಡಕ್ಕೆ ಇಳಿದು ಮಾಡಲು ಮೀಟರ್ ಬೇಕು ಮೀಟರ್" ಎಂದು ಧನ್ವೀರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದೇ ವಿಚಾರದ ಬಗ್ಗೆ 'ಬಾಸ್ ಟಿವಿ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಧನ್ವೀರ್ ಪ್ರತಿಕ್ರಿಯಿಸಿದ್ದಾರೆ.

ಧನ್ವೀರ್ ಮಾತನಾಡಿ "ದರ್ಶನ್ ಅಣ್ಣನ ವಿಚಾರದಲ್ಲಿ ಏನೆಲ್ಲಾ ನಡೀತಿದೆ ಎನ್ನುವುದು ಗೊತ್ತೇಯಿದೆ. ನಾನು ಬಂದು ಮಾಡ್ದೆ ಎಂದು ಯಾವತ್ತೂ ಹೇಳ್ಕೊಂಡಿಲ್ಲ. ಹೇಳಿಕೊಳ್ಳುವುದು ಇಲ್ಲ. ಅದು ಭಗವಂತನಿಗೆ ಗೊತ್ತು. ಆದರೆ ಕೈಯಲ್ಲಿ ಕಿಸಿಯೋಕೆ ಆಗದವರು ಟಿವಿ ಮುಂದೆ ಕೂತು ಮಾತನಾಡ್ತಾರೆ. ಹೆಣ್ಣು ಮಕ್ಕಳು ಪಕ್ಕ ಇದ್ದಾರೆ ಅಂತ, ಗಂಡು ಮಕ್ಕಳು ಆಗಲು ಹೋಗ್ತಾರೆ. ಪೋಸ್ ಕೊಡುವವರು ಮುಂದೆ ಬಂದು ಮಾಡಬೇಕು" ಎಂದಿದ್ದಾರೆ.
ಸುಖದ ಸಮಯದಲ್ಲಿ ಚೆನ್ನಾಗಿ ಮಜಾ ಮಾಡಿವರು ಕಷ್ಟದ ಸಮಯದಲ್ಲಿ ಯಾಕೆ ಸಹಾಯಕ್ಕೆ ಬರಲ್ಲ ಎಂದು ಧನ್ವೀರ್ ಪ್ರಶ್ನಿಸಿದ್ದಾರೆ. "ಕಷ್ಟ ಇದ್ದಾಗ ಒಂದು ದಿನ ಬರಲಿಲ್ಲ. ದರ್ಶನ್ ಅಣ್ಣ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬಂದ್ರು. ಮರುದಿನ ಮನೆಗೆ ಬಿರಿಯಾನಿ ಕಳಿಸೋಕೆ ಆಗುತ್ತೆ. ಕಷ್ಟದಲ್ಲಿ ಯಾಕೆ ಬರ್ಲಿಲ್ಲ. ಅಂತಹವರು ನೋಡಿ ಮಾತನಾಡಬೇಕು, ಮತ್ತೊಬ್ಬರ ಕ್ಯಾರೆಕ್ಟರ್ ಬಗ್ಗೆ ಅವ್ರು ದೊಡ್ಡವರಲ್ಲ. ಕ್ಯಾಮರಾ ಮುಂದೆ ಬಂದು ಮಾತನಾಡುವ ಗಂಡಸ್ತನ ತೋರಿಸುವವರನ್ನು ಸಾಕಷ್ಟು ನೋಡಿಬಿಟ್ಟಿದ್ದೀವಿ. ಆ ಅರ್ಥದಲ್ಲಿ ಹೇಳಿದ್ದು" ಎಂದಿದ್ದಾರೆ.
ನಾನು ಹೇಳಿದ್ದು ಯಾರಿಗೆ ಗೊತ್ತಾಗಬೇಕೋ ಅವರಿಗೆ ಗೊತ್ತಾಗಿದೆ ಅಷ್ಟು ಸಾಕು, ಹೆಸರು ಹೇಳಬೇಕಿಲ್ಲ ಎಂದು ಧನ್ವೀರ್ ಹೇಳಿದ್ದಾರೆ. ಏನೆಲ್ಲಾ ಕಷ್ಟಗಳು ಬರಬಹುದು ಎಂದು ಎಲ್ಲಾ ಗೊತ್ತಿದ್ದು ನಾವು ಅಣ್ಣನ ಪರ ನಿಂತಿದ್ದು. ಹೆದರಿಕೊಂಡು ಈಗ ಬಂದು ಮಾತಾಡ್ತಾರಲ್ಲ, ಆ ತರ ನಾವಲ್ಲ, ಇಳಿಯೋಕೆ ಮುಂಚೆ ಎಲ್ಲಾ ತಿಳ್ಕೊಂಡು ಬರ್ತೀವಿ. ಈಗ ಪೊಲೀಸ್ ಅದು ಇದು ಏನೇನೊ ನಡೀತು. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲ್ಲ. ಚಿತ್ರರಂಗದಲ್ಲಿ ಸ್ಟಾರ್ ವಾರ್ ಎಲ್ಲಾ ಇಲ್ಲ. ಅಕ್ಕಪಕ್ಕ ಇರುವವರು ಹೀಗೆ ಮಾತನಾಡ್ತಾರೆ ಅಷ್ಟೆ ಎಂದು ಧನ್ವೀರ್ ವಿವರಿಸಿದ್ದಾರೆ.
ನನ್ನ ಬಗ್ಗೆ ಸುದೀಪ್ ಸರ್ ಮಾತನಾಡಿದ್ರು. ದೊಡ್ಡವರು ಹಾಗೆ ಮಾತನಾಡುವಾಗ ಇಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ವಾರಕ್ಕೆ ಎರಡು ಬಾರಿ ಹೋಗಿ ದರ್ಶನ್ ಅಣ್ಣ ಭೇಟಿ ಮಾಡಿ ಬರ್ತೀನಿ ಎಂದು ಧನ್ವೀರ್ ಹೇಳಿದ್ದಾರೆ. 'ಹಯಗ್ರೀವ' ಸಿನಿಮಾ ಬಗ್ಗೆ ಕೂಡ ದರ್ಶನ್ ಅವರೊಟ್ಟಿಗೆ ಚರ್ಚಿಸಿದ್ದೀನಿ. ಅವ್ರು ಹೊರಗಡೆ ಇದ್ದಾಗ ನನ್ನ ಸಿನಿಮಾಗಳೆಲ್ಲಾ ಬಿಡುಗಡೆ ಆಗಿತ್ತು. ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ ಎಂದು ಧನ್ವೀರ್ ಹೇಳಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ರಘು ಕುಮಾರ್ ನಿರ್ದೇಶನದ 'ಹಯಗ್ರೀವ' ಸಿನಿಮಾ ಫೆಬ್ರವರಿ ಕೊನೆ ವಾರದಲ್ಲಿ ಬಿಡುಗಡೆ ಆಗ್ತಿದೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಶರತ್ ಲೋಹಿತಾಶ್ವ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











