ಅಭಿಮಾನಿಯ ಮೇಲೆ ಹಲ್ಲೆ ಆರೋಪ: ಘಟನೆ ವಿವರಿಸಿದ ನಟ ಧನ್ವೀರ್ ಗೌಡ
ಧನ್ವೀರ್ ಗೌರ-ಶ್ರೀಲೀಲಾ ನಟಿಸಿರುವ 'ಬೈ ಟು ಲವ್' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಚೆನ್ನಾಗಿ ಓಡುತ್ತಿರುವ ಸಮಯದಲ್ಲಿಯೇ ನಾಯಕ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ಧನ್ವೀರ್ ಗೌಡ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಏಟು ತಿಂದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅನುಪಮಾ ಚಿತ್ರಮಂದಿರದ ಬಳಿ ತಮ್ಮ ಮೇಲೆ ನಟ ಧನ್ವೀರ್ ಹಾಗೂ ಅವರ ಬೌನ್ಸರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಹೆಸರಿನ ಯುವಕ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೆ ಧನ್ವೀರ್ ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪ್ರಕರ್ತರೊಟ್ಟಿಗೆ ನಟ ಧನ್ವೀರ್ ಈ ಘಟನೆ ಬಗ್ಗೆ ಮಾತನಾಡಿದ್ದು, ''ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗದಂತೆ ಈ ಘಟನೆ ಕಾಣುತ್ತಿದೆ'' ಎಂದಿದ್ದಾರೆ.

ಘಟನೆ ಹಿಂದೆ ಯಾರದ್ದೋ ಕೈವಾಡ?
ಯಾರೋ ಹಿಂದೆ ನಿಂತು ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎನಿಸುತ್ತಿದೆ. ಘಟನೆ ನಡೆದಿದ್ದು ಗುರುವಾರ ರಾತ್ರಿ ಅಂದು ದೂರು ದಾಖಲಾಗುವುದಿಲ್ಲ. ಸಿನಿಮಾ ಬಿಡುಗಡೆ ಆಗಿ ಒಂದು ಶೋ ಆದ ಬಳಿಕ ದೂರು ದಾಖಲಾಗುತ್ತದೆ. ದೂರು ದಾಖಲಿಸಿದ ವ್ಯಕ್ತಿ ರಾತ್ರಿಯೆಲ್ಲ ಆರಾಮವಾಗಿರುತ್ತಾನೆ, ಪೊಲೀಸ್ ಠಾಣೆಯಲ್ಲಿಯೂ ಆರಾಮವಾಗಿರುತ್ತಾನೆ. ಶುಕ್ರವಾರ ಮಧ್ಯಾಹ್ನದ ವೇಳೆ ತಾನೇ ಹೋಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ ಇದನ್ನೆಲ್ಲ ನಂಬಲು ಸಾಧ್ಯವೇ? ಎಂದು ಧನ್ವೀರ್ ಪ್ರಶ್ನೆ ಮಾಡಿದ್ದಾರೆ.

ರಾತ್ರಿ ನಡೆದಿದ್ದು ಏನು? ಧನ್ವೀರ್ ವಿವರಣೆ
ಘಟನೆಯ ಬಗ್ಗೆ ವಿವರಣೆ ನೀಡಿದ ಧನ್ವೀರ್, ನಾವು ಗುರುವಾರ ರಾತ್ರಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದೆವು. ನಾಯಕಿ ಶ್ರೀಲೀಲಾ, ನಿರ್ದೇಶಕ ಹರಿ ಸಂತೋಶ್ ಸೇರಿ ಇನ್ನೂ ಕೆಲವರು ಇದ್ದೆವು. ಅನುಪಮಾ ಚಿತ್ರದ ಒಳಗೆ ನಾವು ಕೆಲವು ವಿಡಿಯೋ ರೆಕಾರ್ಡ್ಗಳನ್ನು ಮಾಡಿಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ಕೆಲವರು ಗೇಟ್ ಬಳಿ ಬಂದು ಫೊಟೊಕ್ಕೆ ಒತ್ತಾಯಿಸಿದರು. ಆಮೇಲೆ ಬರುವುದಾಗಿ ಹೇಳಿದೆ. ಆದರೆ ಇಬ್ಬರು ಯುವಕರು ಅದರಲ್ಲೂ ಒಬ್ಬಾತ ಬಹಳ ಗಲಾಟೆ ಮಾಡಿದ. ಹುಡುಗಿಯ ಬಗ್ಗೆ ತೀರ ಅಸಭ್ಯವಾಗಿ, ಸೊಂಟದ ಕೆಳಗಿನ ಭಾಷೆ ಬಳಸಿ ಮಾತನಾಡಿದ. ಆಗಲೂ ಅವನಿಗೆ ಹೊಡೆಯಲಿಲ್ಲ. ಬದಲಿಗೆ ಬುದ್ಧಿಯಷ್ಟೆ ಹೇಳಿದೆ. ಆತ ಬಹಳ ನಶೆಯಲ್ಲಿದ್ದ ಅವನ ಮೇಲೆ ಕೈ ಮಾಡುವುದಕ್ಕೂ ಆಗುತ್ತಿರಲಿಲ್ಲ'' ಎಂದು ಧನ್ವೀರ್ ಹೇಳಿದ್ದಾರೆ.

ಯಾರೋ ಆ ಹುಡುಗನನ್ನು ಹೊಡೆದರಂತೆ: ಧನ್ವೀರ್ ಗೌಡ
''ಅವನಿಗೆ ಬುದ್ಧಿ ಹೇಳಿದೆ, ನೀನು ಅಕ್ಕ ತಂಗಿಯರ ಜೊತೆ ಹುಟ್ಟಿರುತ್ತೀಯ, ಮಹಿಳೆಯರಿಗೆ ಹೀಗೆಲ್ಲ ಮಾತನಾಡಬಾರದು ಎಂದು ಬುದ್ಧಿ ಹೇಳಿದೆ. ಅವನು ಸುಮ್ಮನಾಗಿ ಹಿಂದೆ ಹೋದ. ಹಿಂದೆ ಹೋಗಿ ಮತ್ತೆ, ''ನೀನ್ಯಾವ ಸೀಮೆ ಹೀರೋ ನನ್ನ ನಮಗೆ ಹೀರೋ ಇದ್ದಾನೆ. ನಿನಗೆ ಸರಿಯಾಗಿ ಮಾಡಿ ತೋರಿಸ್ತೀನಿ ನೋಡ್ತಿರು ಎಂದು ಕೆಟ್ಟದಾಗಿ ಬೈಯ್ದ. ನಂತರ ನಮ್ಮ ನಿರ್ದೇಶಕರು ನಮ್ಮನ್ನೆಲ್ಲ ಕರೆದುಕೊಂಡು ಅಲ್ಲಿಂದ ಹೊರಟು ಬಿಟ್ಟರು. ನಾವು ಅಲ್ಲಿಂದ ಬಂದ ಮೇಲೆ ಅಲ್ಲಿ ಮತ್ತೆ ಜಗಳ ಆಗಿ ಯಾರೋ ಹುಡುಗರು ಆ ಹುಡುಗನನ್ನು ಹಿಡಿದುಕೊಂಡು ಹೊಡೆದರಂತೆ. ಈ ಬಗ್ಗೆ ನನಗೆ ಚಿತ್ರಮಂದಿರದವರು ಮಾಹಿತಿ ನೀಡಿದರು'' ಎಂದು ಧನ್ವೀರ್ ಹೇಳಿದ್ದಾರೆ.

ಯಾರ ಕುಮ್ಮಕ್ಕು ಇದೆ ಎಂಬುದು ಗೊತ್ತು: ಧನ್ವೀರ್ ಗೌಡ
''ಇದರ ಹಿಂದೆ ಯಾರದ್ದೋ ಕುಮ್ಮಕ್ಕು ಇರುವುದು ಖಂಡಿತ. ಯಾರ ಕುಮ್ಮಕ್ಕು ಇದೆ ಎಂಬುದು ಸಹ ನನಗೆ ಗೊತ್ತಿದೆ. ಸರಿಯಾದ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದೇನೆ. ಸಾಕ್ಷ್ಯ ಸಿಕ್ಕ ಕೂಡಲೇ ನಾನೇ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತೇನೆ. ಮೊದಲ ಶೋ ರಿಪೋರ್ಟ್ ಬಂದು ಸಿನಿಮಾ ಸಕ್ಸಸ್ ಆಗಿದೆ ಎಂದ ಕೂಡಲೇ ಈ ವಿಷಯವನ್ನು ದೊಡ್ಡದು ಮಾಡಿದ್ದಾರೆ. ದೂರು ಕೊಡುವುದಾಗಿದ್ದಿದ್ದರೆ ಘಟನೆ ನಡೆದ ಸಮಯದಲ್ಲಿಯೇ ಏಕೆ ಕೊಡಲಿಲ್ಲ. ಪೊಲೀಸ್ ಠಾಣೆ ಹತ್ತಿರದಲ್ಲೇ ಇತ್ತಲ್ಲ? ಖಂಡಿತವಾಗಿಯೂ ಇದರ ಹಿಂದೆ ಕೆಲವರು ಇದ್ದಾರೆ, ಅವರೆಲ್ಲ ಹಿಂದೆ ನಿಂತು ಆಡಿಸುತ್ತಿದ್ದಾರೆ. ಅದು ಯಾರೆಂಬುದು ಸಹ ನನಗೆ ಗೊತ್ತಿದೆ'' ಎಂದಿದ್ದಾರೆ ಧನ್ವೀರ್.

''ರೌಡಿಸಂ ಮಾಡಲೆಂದೇ ಕೆಲವರು ಚಿತ್ರರಂಗಕ್ಕೆ ಬಂದಿದ್ದಾರೆ''
''ರೌಡಿಸಂ ಮಾಡಲೆಂದೇ ಕೆಲವರು ಚಿತ್ರರಂಗಕ್ಕೆ ಬಂದಿದ್ದಾರೆ. ಕೆಲವು ಸೋ ಕಾಲ್ಡ್ ನಟರು ಕೆಲವು ಚಪ್ಪರ್ ಹುಡುಗರನ್ನು ಇಟ್ಟುಕೊಂಡು ಏನೇನು ರೌಡಿಸಂ ಮಾಡುತ್ತಿದ್ದಾರೆ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೀನಿ. ಎಲ್ಲ ಮಾಹಿತಿ ತೆಗೆದುಕೊಂಡು ಮಾಧ್ಯಮಗಳ ಮುಂದೆ ಬರುತ್ತೇನೆ. ಒಂದಂತೂ ಸ್ಪಷ್ಟ, ನಾನು ಅಭಿಮಾನಿಗಳ ಮೇಲೆ ಕೈಮಾಡುವಷ್ಟು ದೊಡ್ಡವನು ಆಗಿಲ್ಲ. ಜನರನ್ನು ಬಹಳ ಪ್ರೀತಿಸುತ್ತೇನೆ. ಅದಕ್ಕಾಗಿಯೇ ನನ್ನ ಎರಡನೇ ಸಿನಿಮಾಕ್ಕೆ ಇಷ್ಟು ಪ್ರೀತಿಯನ್ನು ಅವರು ನೀಡುತ್ತಿದ್ದಾರೆ'' ಎಂದಿದ್ದಾರೆ ಧನ್ವೀರ್.


Click it and Unblock the Notifications











